ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರ, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಶಾಕ್ ನೀಡಿದ್ದು, ಅವರಿಗೆ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ತೆಗೆದುಹಾಕಲಾಗಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ಗುರುವಾರ ಆರೋಪಿಸಿದೆ. ಅಲ್ಲದೆ ಬಿಜೆಪಿ ಸರ್ಕಾರದ ಈ ಕ್ರಮವು ರಾಜಕೀಯ ಪ್ರೇರಿತವಾಗಿದೆ ಮತ್ತು ಅವರ ಸುರಕ್ಷತೆಗೆ ಅಪಾಯವನ್ನುಂಟುಮಾಡಿದೆ ಎಂದು ಕಿಡಿ ಕಾರಿದೆ.
ಸುಮಾರು ಎರಡು ದಶಕಗಳಿಂದ ಮಮತಾ ಬ್ಯಾನರ್ಜಿ ಅವರಿಗೆ ಒದಗಿಸಲಾಗಿದ್ದ ಅವರ ವೈಯಕ್ತಿಕ ಭದ್ರತಾ ಅಧಿಕಾರಿಗಳನ್ನು(ಪಿಎಸ್ಒಗಳು) ಬುಧವಾರ ರಾತ್ರಿ ಅವರ ಕೋಲ್ಕತ್ತಾ ನಿವಾಸದಲ್ಲಿದ್ದಾಗ ತೆಗೆದುಹಾಕಲಾಗಿದೆ ಎಂದು ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿದೆ.
ವಿಡಿಯೋವನ್ನು ಪೋಸ್ಟ್ ಮಾಡಿದ ಓ'ಬ್ರೇನ್, "ಅನಧಿಕೃತ ಪ್ರವೇಶವನ್ನು ತಡೆಯಲು ನನ್ನ ಕಾರನ್ನು ನಿಲ್ಲಿಸಿದ್ದೇನೆ. ಆದರೆ ಅಲ್ಲಿ ಯಾವುದೇ ಭದ್ರತೆ ಇಲ್ಲ" ಎಂದು ಬರೆದಿದ್ದಾರೆ.
ಇದು ಸೇಡಿನ ರಾಜಕೀಯ ಎಂದು ಟಿಎಂಸಿ, ಆಡಳಿತರೂಢ ಬಿಜೆಪಿಯ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದೆ.
"ನಿಮ್ಮ[ಮುಖ್ಯಮಂತ್ರಿ ಸುವೇಂದು ಅಧಿಕಾರಿ] ಅಭದ್ರತೆ-ಚಾಲಿತ ಅಧಿಕಾರ ದುರುಪಯೋಗವು ನೀವು ಯಾರೆಂದು ನಿಖರವಾಗಿ ಬಹಿರಂಗಪಡಿಸುತ್ತದೆ. 'ಕ್ಷುಲ್ಲಕ ರಾಜಕೀಯ'ಕ್ಕೆ ಒಂದು ಮುಖವಿದ್ದರೆ, ಅದು ನಿಸ್ಸಂದೇಹವಾಗಿಯೂ ನಿಮ್ಮಂತೆ ಕಾಣುತ್ತದೆ" ಎಂದು ಟೀಕಿಸಿದ್ದಾರೆ.
"ದೀರ್ಘಕಾಲದಿಂದ ಮಮತಾ ಬ್ಯಾನರ್ಜಿಗೆ ರಕ್ಷಣೆ ನೀಡುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ತೆಗೆದುಹಾಕುವುದು ಆಡಳಿತಾತ್ಮಕ ಕ್ರಮವಲ್ಲ; ಇದು ಅವರನ್ನು ಪ್ರತ್ಯೇಕಿಸಲು ಮತ್ತು ಅಪಾಯಕ್ಕೆ ಸಿಲುಕಿಸಲು ತೆಗೆದುಕೊಂಡ ಉದ್ದೇಶಪೂರ್ವಕ ಕ್ರಮವಾಗಿದೆ" ಎಂದು ಟಿಎಂಸಿ ಆರೋಪಿಸಿದೆ.
ಬಿಜೆಪಿ ನೇತೃತ್ವದ ಸರ್ಕಾರವು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆಯನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಿದೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
"ಮೂರು ಬಾರಿ ಮುಖ್ಯಮಂತ್ರಿಯಾಗಿ ಮತ್ತು ಏಳು ಬಾರಿ ಸಂಸದೆಯಾಗಿ ಆಯ್ಕೆಯಾಗಿರುವ ಮಮತಾ ಬ್ಯಾನರ್ಜಿ ಅವರನ್ನು ನಾಚಿಕೆಯಿಲ್ಲದ ಬಿಜೆಪಿ ಸರ್ಕಾರವು ಪ್ರತೀಕಾರ ತೀರಿಸಿಕೊಳ್ಳಲು ಅವರನ್ನು ಅವಮಾನಿಸಿ ಅಪಾಯಕ್ಕೆ ಸಿಲುಕಿಸಿದೆ. ಮೋಹನ್ ಭಾಗವತ್ ನಮ್ಮ ಖರ್ಚಿನಲ್ಲಿ 100 ಕಮಾಂಡೋ ಕಾರುಗಳೊಂದಿಗೆ XYZ +++ ಭದ್ರತೆಯನ್ನು ಅನುಭವಿಸುತ್ತಿದ್ದಾರೆ" ಎಂದು ಮೊಯಿತ್ರಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.