ಮುಂಬೈ: ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷ ಶಿವಸೇನೆ-ಯುಬಿಟಿಯಲ್ಲಿನ ಸಂಸದರಲ್ಲಿ ಕಳೆದ ಒಂದು ವರ್ಷದಿಂದ ಅಸಮಾಧಾನವಿತ್ತು. ಅದು ಈಗ ಮುನ್ನೆಲೆಗೆ ಬಂದಿದೆ ಎಂದು ಸಚಿವ ಮತ್ತು ಶಿವಸೇನೆ ನಾಯಕ ಸಂಜಯ್ ಶಿರ್ಸಾತ್ ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿರ್ಸಾತ್, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಬಿಕ್ಕಟ್ಟಿಗೆ ಸಂಜಯ್ ರಾವತ್ ಅವರನ್ನು ಹೆಚ್ಚಾಗಿ ದೂಷಿಸಿದರು. ಆಪರೇಷನ್ ಟೈಗರ್" ನೊಂದಿಗೆ ತಮ್ಮ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಮತ್ತು ಅದು ಸೇನಾ (ಯುಬಿಟಿ) ಆಂತರಿಕ ವಿಷಯ ಎಂದರು.
ಶಿವಸೇನೆ(ಯುಬಿಟಿ)ಯ ಒಂಬತ್ತು ಸಂಸದರಲ್ಲಿ ಆರು ಸಂಸದರು ಸಂಸದೀಯ ಪಕ್ಷದ ಸಭೆಗೆ ಗೈರು ಆಗಿದ್ದು, ಏಕನಾಥ್ ಶಿಂಧೆ ನೇತೃತ್ವದ ಆಡಳಿತಾರೂಢ ಶಿವಸೇನೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಜೊತೆಗೆ ಸಂಸದರಾದ ಅರವಿಂದ್ ಸಾವಂತ್, ಅನಿಲ್ ದೇಸಾಯಿ ಮತ್ತು ರಾಜಭಾವು ವಾಜೆ ಮಾತ್ರ ಈ ಸಭೆಯಲ್ಲಿ ಭಾಗವಹಿಸಿದ್ದರು.
ಉಳಿದ ಆರು ಸಂಸದರಾದ ನಾಗೇಶ್ ಆಶ್ತಿಕರ್, ಸಂಜಯ್ ದೇಶಮುಖ್, ಸಂಜಯ್ ಜಾಧವ್, ಸಂಜಯ್ ದಿನಾ ಪಾಟೀಲ್, ಓಂಪ್ರಕಾಶ್ ರಾಜೇನಿಂಬಾಳ್ಕರ್ ಮತ್ತು ಭೌಸಾಹೇಬ್ ವಾಕ್ಚೌರೆ ಅವರು ಸಭೆಗೆ ಗೈರು ಆಗಿದ್ದಾರೆ.
ಗೈರಾದ ಆರು ಸಂಸದರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸೇರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರ ನಡುವೆ ಸಭೆಗೆ ಗೈರಾದ ಸಂಸದರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಉದ್ಧವ್ ಸೇನಾ ನಾಯಕತ್ವ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ. ಈ 'ಆಪರೇಷನ್ ಟೈಗರ್' ಗೂ ನಮಗೂ ಯಾವುದೇ ಸಂಬಂಧವಿಲ್ಲ ಇದು ಸಂಪೂರ್ಣವಾಗಿ ಅವರ ಆಂತರಿಕ ವಿಷಯ,'' ಎಂದು ಶಿರ್ಸಾತ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
'ಅನೇಕ ಚುನಾವಣೆಗಳಲ್ಲಿ ಗೆದ್ದ ಸಂಸದರು ಅಥವಾ ಪಕ್ಷದ ಕಾರ್ಯಕರ್ತರನ್ನು ಆ ಪಕ್ಷದಲ್ಲಿ ಚೆನ್ನಾಗಿ ನಡೆಸಿಕೊಳ್ಳಲಾಗುತ್ತಿಲ್ಲ. ಇದನ್ನು ಪಕ್ಷದ ನಾಯಕರಿಗೆ ಹಲವು ಬಾರಿ ತಿಳಿಸಲಾಗಿದೆ. ನಿನ್ನೆ ಸುದ್ದಿಗೋಷ್ಠಿಯಲ್ಲಿ ಅವರ ಸ್ವಂತ ಸಂಸದರ ಮೇಲೆ ಅಶ್ಲೀಲ ಪದಗಳನ್ನು ಬಳಸಲಾಗಿದೆ,'' ಎಂದು ರಾವತ್ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದರು. ಈ ಅಶಾಂತಿ ಹೊಸದಲ್ಲ ಮತ್ತು ಒಂದು ವರ್ಷದಿಂದ ನಡೆಯುತ್ತಿದೆ. ಇದು ನಿನ್ನೆಯಷ್ಟೇ ಹೊರಬಂದಿದೆ ಎಂದು ಶಿರ್ಸಾತ್ ಹೇಳಿಕೊಂಡರು.
"ನಮ್ಮ ಪಕ್ಷವನ್ನು ದೂಷಿಸುವ ಬದಲು, ಶಿವಸೇನೆ (ಯುಬಿಟಿ) ತಮ್ಮ ಪಕ್ಷದೊಳಗಡೆಯೇ ನೋಡಬೇಕು. ಮಹಾರಾಷ್ಟ್ರದಾದ್ಯಂತ ಜನರು ಈಗ ಏಕನಾಥ್ ಶಿಂಧೆ ಅವರ ಬಳಿಗೆ ಬರುತ್ತಿರುವುದು ಕಂಡುಬರುತ್ತಿದೆ. ಪಕ್ಷಕ್ಕೆ ಹಾನಿ ಮಾಡಿದವರಿಂದ ಸೇನಾ ಯುಬಿಟಿ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ರಾವತ್ ಹೋದ ಕಡೆಯಲೆಲ್ಲಾ ಪಕ್ಷಕ್ಕೆ ಸಾಕಷ್ಟು ಹಾನಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.