ಮುಂಬೈ: ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯನ್ನು ಬೆಂಬಲಿಸಿ, ಹಿರಿಯ ನಾಯಕ ಸಚಿನ್ ಅಹಿರ್ ಅವರು ಮಹಾಯುತಿ ಅಭ್ಯರ್ಥಿಯಾಗಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನಕ್ಕೆ ಮಂಗಳವಾರ ನಾಮಪತ್ರ ಸಲ್ಲಿಸಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಮತ್ತೊಂದು ಹಿನ್ನಡೆ ಉಂಟಾಗಿದೆ.
ಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಅವರ ಆಪ್ತ ಎಂದು ಪರಿಗಣಿಸಲಾದ ಅಹಿರ್, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಸುನೇತ್ರಾ ಪವಾರ್ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಆರು ಸಂಸದರು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷವನ್ನು ತೊರೆದು ಆಡಳಿತಾರೂಢ ಶಿವಸೇನೆಗೆ ಸೇರಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ.
ಈ ಹುದ್ದೆಗೆ ವಿರೋಧ ಪಕ್ಷದ ಆಯ್ಕೆಯನ್ನು ದೃಢಪಡಿಸಿದ ಸೇನಾ (ಯುಬಿಟಿ) ನಾಯಕ ಅಂಬಾದಾಸ್ ದಾನ್ವೆ, ಎಂಎಲ್ಸಿ ಜಗನ್ನಾಥ್ ಅಭಯಂಕರ್ ಅವರು ಮಹಾ ವಿಕಾಸ್ ಅಘಾಡಿಯ ಅಭ್ಯರ್ಥಿ ಎಂದು ಹೇಳಿದರು.
ಅಹಿರ್ ಅವರ ಈ ನಡೆಯ ವಿಧಾನ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸಚಿವ ಮತ್ತು ಶಿವಸೇನಾ ನಾಯಕ ಉದಯ್ ಸಮಂತ್, 'ಸಚಿನ್ ಅಹಿರ್ ಒಬ್ಬ ಹಿರಿಯ ಎಂಎಲ್ಸಿ ಮತ್ತು ಅವರು ಮುಂಬೈ ಜನರ ಪರವಾಗಿ ಧ್ವನಿ ಎತ್ತಿದ್ದಾರೆ. ಅಂತಹ ಅನುಭವಿ ನಾಯಕ ಶಿವಸೇನೆಗೆ ಬರುತ್ತಿರುವುದು ನನಗೆ ಸಂತೋಷ ತಂದಿದೆ. ನಾವು ಎಲ್ಲ ಕಾನೂನು ಅಂಶಗಳನ್ನು ಪರಿಶೀಲಿಸಿದ್ದೇವೆ ಮತ್ತು ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸೇನಾ (ಯುಬಿಟಿ) ಶಾಸಕ ಸುನೀಲ್ ರಾವುತ್, 'ನಮಗೆ ಇಂತಹ ಅನೇಕ ಆಘಾತಗಳು ಎದುರಾಗಿವೆ. ಆದರೆ, ಪಕ್ಷವು ಎಂದಿಗೂ ಕುಗ್ಗಿಲ್ಲ. ಶಿವಸೇನೆ (ಯುಬಿಟಿ) ಗೆ ಈ ಆಘಾತ ದೊಡ್ಡದಲ್ಲ' ಎಂದು ತಿಳಿಸಿದರು.