ಚೆನ್ನೈ: ತಮಿಳಿನ ಸೂಪರ್ಸ್ಟಾರ್ ರಜಿನಿಕಾಂತ್ ಅವರು ರಾಜಕೀಯ ಪ್ರವೇಶಿಸಲು ಮುಂದಾದಾಗ ಅವರಿಗೆ ಡಿಎಂಕೆ 'ಬೆದರಿಕೆ' ಹಾಕಿತ್ತು ಎಂಬ ಟಿವಿಕೆ ನಾಯಕ ಆಧವ್ ಅರ್ಜುನ್ ಆರೋಪವನ್ನು ನಟ ಮಂಗಳವಾರ ತಳ್ಳಿಹಾಕಿದ್ದಾರೆ ಮತ್ತು ಕಾಲವೇ ಇದಕ್ಕೆಲ್ಲ ಉತ್ತರ ನೀಡುತ್ತದೆ' ಎಂದು ಹೇಳಿದ್ದಾರೆ.
'ಸಮಯವು ಮಾತನಾಡುವುದಿಲ್ಲ ಆದರೆ, ಕಾಯುತ್ತದೆ ಮತ್ತು ಉತ್ತರಿಸುತ್ತದೆ' ಎಂದು ರಜಿನಿಕಾಂತ್ ಸಾಮಾಜಿಕ ಮಾಧ್ಯಮ 'X' ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸೂಪರ್ಸ್ಟಾರ್ ಕುರಿತು ಆಧವ್ ಅರ್ಜುನ ಅವರ ಹೇಳಿಕೆಗೆ ನಟನ ಅಭಿಮಾನಿಗಳು, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿ, ಕೇಂದ್ರ ಸಚಿವ ಎಲ್ ಮುರುಗನ್ ಮತ್ತು ರಾಜ್ಯ ಸಚಿವ ಎಸ್ ರೇಗುಪತಿ, ಬಿಜೆಪಿ ರಾಜ್ಯ ಮಾಜಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಮತ್ತು ರಜನಿಕಾಂತ್ ಅವರ ಮಾಜಿ ಸಲಹೆಗಾರ ರಾ. ಅರ್ಜುನಮೂರ್ತಿ ಕಿಡಿಕಾರಿದ್ದರು.
ಮಾರ್ಚ್ 12 ರಂದು ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದ ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ್, 'ರಜಿನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸಲು ಪ್ರಯತ್ನಿಸಿದಾಗ ಡಿಎಂಕೆ ಬೆದರಿಕೆ ಹಾಕಿತು' ಎಂದು ಆರೋಪಿಸಿದ್ದರು.
ತಾವು ನಟನನ್ನು ಟೀಕಿಸುತ್ತಿಲ್ಲ. ಆದರೆ, ಟಿವಿಕೆ ಸಂಸ್ಥಾಪಕ ವಿಜಯ್ ಅವರಿಗೆ ಇಂತಹ ಎಲ್ಲ ರೀತಿಯ ಒತ್ತಡವನ್ನು ಮೆಟ್ಟಿನಿಲ್ಲುವ ಧೈರ್ಯವನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸಲು ಈ ವಿಚಾರವನ್ನು ಹೇಳಿದ್ದಾಗಿ ತಿಳಿಸಿದರು.
ಈ ಹೇಳಿಕೆಯನ್ನು ಖಂಡಿಸಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ, ರಜನಿ ಅವರು ಎಲ್ಲ ವರ್ಗದ ಜನರಿಂದ ಗೌರವ ಗಳಿಸಿದ್ದಾರೆ ಮತ್ತು ನಟನ ಪ್ರತಿಷ್ಠೆಗೆ ಕಳಂಕ ತರುವ ರೀತಿಯಲ್ಲಿ ಮಾತನಾಡುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
'ರಾಜಕೀಯಕ್ಕೆ ಪ್ರವೇಶಿಸುವುದು ಅಥವಾ ಅದರಿಂದ ದೂರವಿರುವುದು ವ್ಯಕ್ತಿಯ ಹಕ್ಕುಗಳ ವಿಷಯವಾಗಿದೆ. ರಾಜಕೀಯ ಉದ್ದೇಶಗಳನ್ನು ಆರೋಪಿಸುವ ಮತ್ತು ರಾಜಕೀಯ ಸಭ್ಯತೆಯಿಲ್ಲದ ಮಾನಹಾನಿಕರ ಹೇಳಿಕೆಗಳನ್ನು ಹೇಳುವುದಕ್ಕಿಂತ ನಾವು ಅವರ ನಿರ್ಧಾರವನ್ನು ಗೌರವಿಸಬೇಕು' ಎಂದು ಮಾಜಿ ಮುಖ್ಯಮಂತ್ರಿ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಜಿನಿಕಾಂತ್ ತಮ್ಮ ಸಂಕ್ಷಿಪ್ತ ಹೇಳಿಕೆಯಲ್ಲಿ, ಸತತವಾಗಿ ತಮ್ಮನ್ನು ಬೆಂಬಲಿಸಿದ ಎಲ್ಲ ರಾಜಕೀಯ ಪಕ್ಷದ ನಾಯಕರು, ಸಚಿವರು, ಹಿತೈಷಿಗಳು ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.