ರಾಂಚಿ: ಭಾರತೀಯರು ಸರಸ್ವತಿ ಪೂಜೆ ಮಾಡುತ್ತಾರೆ, ಆದರೆ, ನಿಜವಾದ ಪ್ರತಿಭಾವಂತರು ವಿದೇಶಗಳಲ್ಲಿದ್ದಾರೆ. ಲಕ್ಷ್ಮಿ ಪೂಜೆ ಮಾಡಿದರೂ ಸಮೃದ್ಧಿ ವಿದೇಶಗಳಲ್ಲೇ ಹೆಚ್ಚಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಹೇಳಿಕೆ ನೀಡಿದ್ದು, ಈ ಹೇಳಿಕೆ ವಿವಾದ ಸ್ವರೂಪ ಪಡೆದುಕೊಂಡಿದೆ.
ಜಾರ್ಖಂಡ್ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಾತನಾಡಿರುವ ಅವರು, ನಮ್ಮ ದೇಶದಲ್ಲಿ ಅತಿ ಹೆಚ್ಚು ಸರಸ್ವತಿ ಪೂಜೆ ನಡೆಯುತ್ತದೆ. ಆದರೆ, ನಿಜವಾದ ಬುದ್ಧಿವಂತ ಮಕ್ಕಳು ಜಪಾನ್ ಮತ್ತು ಇತರ ವಿದೇಶಗಳಲ್ಲಿ ಹುಟ್ಟುತ್ತಿದ್ದಾರೆ. ನಮ್ಮಲ್ಲಿ ಹೆಚ್ಚು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ, ಆದರೆ, ಹಣ ಮತ್ತು ಸಮೃದ್ಧಿ ವಿದೇಶಗಳಲ್ಲೇ ಹೆಚ್ಚಿದೆ. ಇದನ್ನೆಲ್ಲ ನೋಡಿದರೆ ಎಲ್ಲೋ ಏನೋ ತಪ್ಪಿದೆ ಎಂದು ಅನ್ನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು.
ನಮ್ಮ ಜನರು ಕೇವಲ ಪೂಜೆಗಳಿಗೆ ಒತ್ತು ನೀಡುತ್ತಿದ್ದಾರೆ, ಆದರೆ, ಶಿಕ್ಷಣದ ಬಗ್ಗೆ ಸಾಕಷ್ಟು ಚರ್ಚೆ ಮಾಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾವು ವಿಶ್ವಗುರು ಆಗುವುದು ಹೇಗೆ? ಎಂದೂ ಟೀಕಿಸಿದ್ದರು.
ಈ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಹಿಂದೂ ದೇವತೆಗಳಾದ ಸರಸ್ವತಿ ಮತ್ತು ಲಕ್ಷ್ಮಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದೆ.
ಜಾರ್ಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಆದಿತ್ಯ ಸಾಹು ಅವರು ಮಾತನಾಡಿ, ಸರಸ್ವತಿ ಪೂಜೆ, ಲಕ್ಷ್ಮಿ ಪೂಜೆ, ವಿಶ್ವಕರ್ಮ ಪೂಜೆ, ರಾಮನವಮಿ ಹಬ್ಬಗಳ ಬಗ್ಗೆ ಸೊರೇನ್ ಅವರ ಹೇಳಿಕೆಗಳು ಧಕ್ಕೆತಂದಿವೆ. ಅಧಿಕಾರದ ಲಾಲಸೆ ಮತ್ತು ಓಲೈಕೆ ರಾಜಕೀಯದಿಂದ ಪ್ರೇರಿತರಾದ ಕಾಂಗ್ರೆಸ್ ಎಲ್ಲಾ ಮಿತಿಗಳನ್ನು ಮೀರಿದೆ. ಸೋರೆನ್ ಈಗ ರಾಹುಲ್ ಗಾಂಧಿಯನ್ನು ಅನುಸರಿಸುತ್ತಿರುವುದು ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಎಲ್ಲಾ ಧರ್ಮಗಳಿಗೂ ಗೌರವ ನೀಡಬೇಕು. ಸೊರೇನ್ ಕುಟುಂಬದೊಂದಿಗೆ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳುತ್ತಾರೆ, ಆದರೆ, ಮತ ರಾಜಕಾರಣವು ಅವರ ವ್ಯಕ್ತಿತ್ವವನ್ನು ನಾಶಪಡಿಸುತ್ತಿದೆ. ಸೋರೇನ್ ಅವರಿಗೆ ಧೈರ್ಯವಿದ್ದರೆ ಇತರೆ ಧರ್ಮಗಳ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಲಿ ಎಂದೂ ಸವಾಲು ಹಾಕಿದ್ದಾರೆ. ಅಲ್ಲದೆ,ಹೇಳಿಕೆ ಕುರಿತು ಕೂಡಲೇ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ.
ವಿರೋಧ ಪಕ್ಷದ ಮಾಜಿ ನಾಯಕ ಅಮರ್ ಕುಮಾರ್ ಬೌರಿ ಕೂಡ ಸೊರೇನ್ ಅವರ ಈ ಹೇಳಿಕೆಗಳನ್ನು “ನಾಚಿಕೆಗೇಡಿನ” ಎಂದು ಹೇಳಿ ಕಿಡಿರಿದ್ದಾರೆ. ಇಂತಹ ಹೇಳಿಕೆ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿದ್ದಾರೆ.
ಆದಾಗ್ಯೂ, ಹೇಮಂತ್ ಸೊರೇನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಪಕ್ಷವು ಬಿಜೆಪಿಯನ್ನು ಟೀಕಿಸಿದ್ದು, ಮುಖ್ಯಮಂತ್ರಿಗಳ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಸೊರೇನ್ ಅವರು ಕೇವಲ ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವದ ಅಗತ್ಯತೆಯ ಬಗ್ಗೆ ಮಾತನಾಡಿದ್ದಾರೆ ಎಂದು ಸ್ಪಷ್ಟಪಡಿಸಿದೆ.