ನಾಸಿಕ್: ನಾಸಿಕ್ನಲ್ಲಿ ಜ್ಯೋತಿಷ್ಯದ ಹೆಸರಿನಲ್ಲಿ 150ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಮಾಡಿ ಜೈಲು ಪಾಲಾಗಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರು ಬಳಸುತ್ತಿದ್ದ ನಾಲ್ಕು ಮೊಬೈಲ್ ಸಿಮ್ ಕಾರ್ಡ್ಗಳನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ಮಂಗಳವಾರ ವಶಪಡಿಸಿಕೊಂಡಿದೆ.
ಈ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಸರ್ಕಾರ ತೇಜಸ್ವಿ ಸತ್ಪುಟೆ ನೇತೃತ್ವದಲ್ಲಿ ಎಸ್ಐಟಿಯನ್ನು ರಚಿಸಿದ್ದು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದೆ.
ಎಸ್ಐಟಿ ಖರತ್ ಅವರನ್ನು ಐದು ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ವಿಚಾರಣೆಯ ಸಮಯದಲ್ಲಿ, ಅವರು ವಿಭಿನ್ನ ಉದ್ದೇಶಗಳಿಗಾಗಿ ನಾಲ್ಕು ಪ್ರತ್ಯೇಕ ಸಿಮ್ ಕಾರ್ಡ್ಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ.
"ಅಶೋಕ್ ಖರತ್ ಅವರಿಂದ ಪಡೆದ ದತ್ತಾಂಶದಲ್ಲಿ, ಒಂದು ಮೊಬೈಲ್ ಸಿಮ್ ಕಾರ್ಡ್ ಸಂಖ್ಯೆಯನ್ನು ವಿಶೇಷವಾಗಿ ಮತ್ತು ಪ್ರತ್ಯೇಕವಾಗಿ ವಿಐಪಿಗಳಿಗೆ ಬಳಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಇನ್ನೊಂದು ಸಿಮ್ ಕಾರ್ಡ್ ಮಹಿಳಾ ಭಕ್ತರಿಗೆ ಬಳಸಲಾಗಿದೆ. ಮೂರನೇ ಮೊಬೈಲ್ ಸಿಮ್ ಅನ್ನು ಹಣಕಾಸಿನ ವಹಿವಾಟುಗಳಿಗೆ ಬಳಸಲಾಗುತ್ತಿತ್ತು ಮತ್ತು ನಾಲ್ಕನೆಯದನ್ನು ಸಾಮಾನ್ಯ ಭಕ್ತರಿಗೆ ಸಂವಹನಕ್ಕಾಗಿ ಬಳಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ರಾಜಕಾರಣಿಗಳು, ಉದ್ಯಮಿಗಳು ಮತ್ತು ಅಧಿಕಾರಿಗಳಂತಹ ಅನೇಕ ವಿಐಪಿಗಳ ಹೆಸರುಗಳನ್ನು ಕೋಡ್ ಹೆಸರಿನೊಂದಿಗೆ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡಿದ್ದರು ಎಂದು ಡೇಟಾ ಬಹಿರಂಗಪಡಿಸಿದೆಎಂದು ಎಸ್ಐಟಿ ತನಿಖೆಯ ಮೂಲವೊಂದು ತಿಳಿಸಿದೆ.
ಹಲವು ವರ್ಷಗಳಿಂದ ಮಹಾರಾಷ್ಟ್ರದ ಹಲವಾರು ಪ್ರಮುಖ ರಾಜಕಾರಣಿಗಳು ಸೇರಿದಂತೆ ನೂರಾರು ಮಹಿಳೆಯರು ಖರತ್ ಅವರನ್ನು ಭೇಟಿ ಮಾಡಿದ್ದು, ಹಲವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮೂರು ವರ್ಷಗಳ ಕಾಲ ತನ್ನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ ನಂತರ ಮಾರ್ಚ್ 18 ರಂದು ಅಶೋಕ್ ಖರತ್ ಅವರನ್ನು ಬಂಧಿಸಲಾಗಿದೆ.