ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಂಗಳವಾರ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಮೂರೇ ತಿಂಗಳಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ಏಪ್ರಿಲ್ 9 ರಂದು ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಹಿಮಂತ ಶರ್ಮಾ, ರಾಜ್ಯದ ಬುಡಕಟ್ಟು ಜನಾಂಗದವರು ಮತ್ತು ಇತರ ಜನಾಂಗೀಯ ಸಮುದಾಯಗಳ ಹಕ್ಕುಗಳಿಗೆ ತೊಂದರೆಯಾಗದಂತೆ ಯುಸಿಸಿ ಜಾರಿಗೆ ತರಲಾಗುವುದು ಎಂದರು.
''ನಾವು 'ಲವ್ ಅಂಡ್ ಲ್ಯಾಂಡ್ ಜಿಹಾದ್' ವಿರುದ್ಧ ಕಠಿಣ ಕಾನೂನನ್ನು ಜಾರಿಗೆ ತರುತ್ತಿದ್ದೇವೆ ಮತ್ತು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಅಕ್ರಮ ವಲಸಿಗರ ಗಡಿಪಾರು ಕಾಯ್ದೆ, 1950 ಅನ್ನು ಜಾರಿಗೊಳಿಸಲು ಅಧಿಕಾರ ನೀಡುತ್ತೇವೆ. ಆ ಮೂಲಕ ಅವರಿಗೆ 24 ಗಂಟೆಗಳ ಒಳಗೆ ವಿದೇಶಿಯರನ್ನು ಹೊರಹಾಕುವ ಅಧಿಕಾರ ಇರುತ್ತದೆ'' ಎಂದು ಅಸ್ಸಾಂ ಸಿಎಂ ಹೇಳಿದರು.
ರಾಜ್ಯದಿಂದ ನುಸುಳುಕೋರರನ್ನು ಹೊರಹಾಕಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಕೇಳಿದಾಗ, "ಬಾಂಗ್ಲಾದೇಶ ಅಸ್ತಿತ್ವದಲ್ಲಿ ಇರುವವರೆಗೆ, ನುಸುಳುಕೋರರು ಬರುತ್ತಲೇ ಇರುತ್ತಾರೆ ಮತ್ತು ನಾವು ಅವರೊಂದಿಗೆ ಹೋರಾಡಬೇಕಾಗುತ್ತದೆ" ಎಂದು ಶರ್ಮಾ ಹೇಳಿದರು.
"ಭಾರತ ಮತ್ತು ಬಾಂಗ್ಲಾದೇಶ ನೆರೆಹೊರೆಯವರಾಗಿ ಅಸ್ತಿತ್ವದಲ್ಲಿರುವವರೆಗೆ, ಇದು ನಿರಂತರ ಯುದ್ಧವಾಗಿರುತ್ತದೆ ಮತ್ತು ನಾವು ಈ ಬೆದರಿಕೆಯ ವಿರುದ್ಧ ನಿರಂತರವಾಗಿ ಹೋರಾಡುತ್ತಲೇ ಇರಬೇಕಾಗುತ್ತದೆ" ಎಂದು ಅವರು ತಿಳಿಸಿದರು.
ಕಳೆದ ಐದು ವರ್ಷಗಳಲ್ಲಿ, "ನಾವು ಬಾಂಗ್ಲಾದೇಶಿ ಮಿಯಾಗಳ ಕೈ ಮತ್ತು ಕಾಲುಗಳನ್ನು ಮುರಿದಿದ್ದೇವೆ. ಈಗ ಅವರು ಅಧಿಕಾರದ ಸ್ಥಾನವೆಂದು ಪರಿಗಣಿಸಲಾದ ದಿಸ್ಪುರ್(ರಾಜ್ಯ ಸಚಿವಾಲಯ) ಬಳಿ ಎಲ್ಲಿಯೂ ಕಂಡುಬರುವುದಿಲ್ಲ" ಎಂದರು.
"ಈ ಬಾರಿ ನಾವು ರಾಜಕೀಯವಾಗಿ ಬಾಂಗ್ಲಾದೇಶಿ ಮಿಯಾಗಳ ಬೆನ್ನೆಲುಬನ್ನು ಮುರಿಯುತ್ತೇವೆ ಎಂಬುದು ನಮ್ಮ ಭರವಸೆಯಾಗಿದೆ" ಎಂದು ಅವರು ಹೇಳಿದರು.