ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ (TVK) ಪಕ್ಷದ ಹಲವಾರು ಸ್ಪರ್ಧಿಗಳು ಡಿಎಂಕೆ ಮತ್ತು ಎಐಎಡಿಎಂಕೆಯ ಹಿರಿಯ ನಾಯಕರನ್ನು ಹಿಂದಿಕ್ಕಿ, ಗೆಲುವು ಸಾಧಿಸಿದ್ದಾರೆ. ಆದರೆ, ಹಲವಾರು ಮತದಾರರು ವಿಧಾನಸಭಾ ಚುನಾವಣೆಯಲ್ಲಿ ತಾವು ಆಯ್ಕೆ ಮಾಡಿದ ಟಿವಿಕೆ ಅಭ್ಯರ್ಥಿಯ ಹೆಸರೇಳಲು ಹೆಣಗಾಡಿದರು. ಪಕ್ಷದ ಕೆಲವು ಬೆಂಬಲಿಗರು ಸ್ಥಳೀಯ ಅಭ್ಯರ್ಥಿ ಪ್ರಚಾರ ಮಾಡುವುದನ್ನು ತಾವು ಎಂದಿಗೂ ನೋಡಿಲ್ಲ ಎಂದು ಹೇಳಿದರು.
ಟಿವಿಕೆಗೆ ಮತ ಹಾಕಿದವರಲ್ಲಿ ಒಂದು ವರ್ಗವು ತಮ್ಮ ಕ್ಷೇತ್ರದ ಅಭ್ಯರ್ಥಿ ತಮ್ಮ ಪ್ರದೇಶದಲ್ಲಿ ಪ್ರಚಾರ ಮಾಡುವುದನ್ನು ಎಂದಿಗೂ ನೋಡಿಯೇ ಇಲ್ಲ ಎಂದು ಟಿಎನ್ಐಇಗೆ ತಿಳಿಸಿದೆ. ಟಿವಿಕೆ ಸದಸ್ಯರು ಮನೆ ಮನೆಗೆ ಪ್ರಚಾರ ನಡೆಸಿಲ್ಲ ಅಥವಾ ಕರಪತ್ರಗಳನ್ನು ಹಂಚಿಲ್ಲ. ಅಭ್ಯರ್ಥಿಯ ಬಗ್ಗೆ, ಅವರ ಹೆಸರಿನ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ನಟ ವಿಜಯ್ ಅವರನ್ನು ಬೆಂಬಲಿಸಿ, ಹೆಚ್ಚಿನ ಸಂಖ್ಯೆಯ ಜನರು 'ಶಿಳ್ಳೆ'ಗೆ ಮತ ಮತ ಚಲಾಯಿಸಿದ್ದಾರೆ.
ಕೊರಟ್ಟೂರಿನ ಟಿಎನ್ಎಚ್ಬಿ ಕಾಲೋನಿಯ 32 ವರ್ಷದ ಐಟಿ ಉದ್ಯೋಗಿ ಮತ್ತು ಎರಡು ಮಕ್ಕಳ ತಾಯಿ ಎಸ್. ವಿದ್ಯಾಲಕ್ಷ್ಮಿ, ಟಿವಿಕೆ ಪಕ್ಷದ ಸ್ಥಳೀಯ ಅಭ್ಯರ್ಥಿಯ ಹೆಸರು ಸಹ ನೆನಪು ಬರುತ್ತಿಲ್ಲ ಎಂದು ಹೇಳಿದರು.
'ನಾನು ಮತಗಟ್ಟೆಯಲ್ಲಿದ್ದಾಗ ಮಾತ್ರ ಅವರ ಹೆಸರನ್ನು ಗಮನಿಸಿದೆ. ಅವರ ಬಗ್ಗೆ ನನಗೆ ಏನೂ ತಿಳಿದಿಲ್ಲ. ನನಗೆ ವಿಜಯ್ ಇಷ್ಟ ಮತ್ತು ಅವರು ಯಶಸ್ವಿಯಾಗಬೇಕೆಂದು ನಾನು ಬಯಸಿದ್ದೆ; ಆದ್ದರಿಂದ ನಾನು ಟಿವಿಕೆಗೆ ಮತ ಹಾಕಿದೆ' ಎಂದು ಅಂಬತ್ತೂರು ಕ್ಷೇತ್ರದ ನಿವಾಸಿ ಹೇಳಿದರು.
ಉತ್ತರ ಕೊರಟ್ಟೂರಿನ 24 ವರ್ಷದ ಎಸ್. ಪವಿತ್ರಾ ಎಂಬ ಮತ್ತೊಬ್ಬರು, ಡಿಎಂಕೆ ಮತ್ತು ಪಿಎಂಕೆಯ ಅಂಬತ್ತೂರು ಕ್ಷೇತ್ರದ ಅಭ್ಯರ್ಥಿಗಳಾದ ಎಪಿ ಪೂರ್ಣಿಮಾ ಮತ್ತು ಕೆಎನ್ ಶೇಖರ್ ಪ್ರಚಾರ ಮಾಡುವುದನ್ನು ತಾನು ನೋಡಿದ್ದೇನೆ. ಆದರೆ, ಟಿವಿಕೆ ಅಭ್ಯರ್ಥಿ ಇಲ್ಲಿ ಪ್ರಚಾರ ಮಾಡಿದ್ದನ್ನು ನಾನು ನೋಡಿಲ್ಲ. ಮತದಾನಕ್ಕೆ ಎರಡು ಅಥವಾ ಮೂರು ದಿನಗಳ ಮೊದಲು ಪಕ್ಷದ ಬೈಕ್ ರ್ಯಾಲಿಯನ್ನು ನಾನು ನೋಡಿದೆ. ಅದನ್ನು ಹೊರತುಪಡಿಸಿ, ಯಾವುದೇ ಪ್ರಚಾರ ಇರಲಿಲ್ಲ. ಟಿವಿಕೆ ಅಭ್ಯರ್ಥಿಯ ಬಗ್ಗೆ ನನಗೆ ತಿಳಿದಿಲ್ಲ, ಆದರೂ ನಾನು ಅವರಿಗೆ ಮತ ಹಾಕಿದ್ದೇನೆ' ಎಂದು ಖಾಸಗಿ ಸಂಸ್ಥೆಯ ಉದ್ಯೋಗಿ ಹೇಳಿದರು.
ಕುಮಾರನ್ ನಗರ ಮತ್ತು ಕೊಳತ್ತೂರು ಮತ್ತು ಅಣ್ಣಾ ನಗರ ಕ್ಷೇತ್ರಗಳ ವ್ಯಾಪ್ತಿಯ ಹತ್ತಿರದ ಪ್ರದೇಶಗಳ ಹಲವಾರು ನಿವಾಸಿಗಳು, ಅಭ್ಯರ್ಥಿಯ ಬಗ್ಗೆ ಏನೂ ತಿಳಿಯದೆ 'ಶಿಳ್ಳೆ' ಚಿಹ್ನೆಗೆ ಮತ ಹಾಕಿದ್ದೇವೆ ಎಂದು ಹೇಳಿದರು. ಅಣ್ಣಾ ನಗರದ ಪೊನ್ನಿ ಕಾಲೋನಿಯ ಎಸ್ ಕುಮಾರವೇಲ್, 'ಡಿಎಂಕೆ ಅಭ್ಯರ್ಥಿಗಳು ಮತಗಳಿಗಾಗಿ ಹಲವಾರು ಬಾರಿ ಪ್ರಚಾರ ಮಾಡುವುದನ್ನು ನಾನು ನೋಡಿದೆ. ಆದರೆ, ನನಗೆ ಟಿವಿಕೆ ಅಭ್ಯರ್ಥಿಯ ಹೆಸರೂ ತಿಳಿದಿರಲಿಲ್ಲ. ಆದರೂ, ನಾನು ಅವರಿಗೆ ಮತ ಹಾಕಿದ್ದೇನೆ. ಟಿವಿಕೆ ಅಭ್ಯರ್ಥಿ ನಮ್ಮ ಪ್ರದೇಶದಲ್ಲಿ ಪ್ರಚಾರ ಮಾಡಿರಲಿಲ್ಲ' ಎಂದು ಹೇಳಿದರು.