ಚೆನ್ನೈ: ತಮಿಳುನಾಡಿನ ಚುನಾವಣೆಯಲ್ಲಿ ಟಿವಿಕೆ 108 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಸಂಸ್ಥಾಪಕ ವಿಜಯ್ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ಮ್ಯಾಟಿನಿ ಐಕಾನ್ ಎನ್ಟಿಆರ್ ನಡುವೆ ಒಂದು ವಿಶಿಷ್ಟವಾದ ಸಾಮ್ಯತೆ ಇದೀಗ ಬಹಿರಂಗಗೊಂಡಿದೆ.
ತೆಲುಗು ದೇಶಂ ಪಕ್ಷದ (ಟಿಡಿಪಿ) ಸಂಸ್ಥಾಪಕ ಎನ್ಟಿ ರಾಮರಾವ್ ನಂತರ, ಸ್ವಂತ ಪಕ್ಷವನ್ನು ರಚಿಸಿದ ಕೇವಲ ಎರಡು ವರ್ಷಗಳೊಳಗೆ ಚುನಾವಣೆಗಳನ್ನು ಗೆದ್ದು ಯಶಸ್ಸು ಸಾಧಿಸಿದ ಎರಡನೇ ನಾಯಕ ವಿಜಯ್ ಆಗಿದ್ದಾರೆ.
ದಿವಂಗತ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ 1972ರಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು. ಆದರೆ, 1977ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದರು.
ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆ ಏಪ್ರಿಲ್ 23 ರಂದು ಸೋಮವಾರ ನಡೆಯಿತು. ಅಂತಿಮವಾಗಿ ನಟ ವಿಜಯ್ ಅವರ ಟಿವಿಕೆ ತನ್ನ ದ್ರಾವಿಡ ಪ್ರತಿಸ್ಪರ್ಧಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆಗಿಂತ ಮುಂದಿದೆ. ಟಿವಿಕೆ 108 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದು ಡಿಎಂಕೆ 73 ಮತ್ತು ಎಐಎಡಿಎಂಕೆ 52 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ.
234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ 118 ಶಾಸಕರ ಅಗತ್ಯವಿದೆ.
ತಮ್ಮ ಪಕ್ಷವನ್ನು ಸ್ಥಾಪಿಸಿದ ಒಂಬತ್ತು ತಿಂಗಳೊಳಗೆ, ಎನ್ಟಿಆರ್ 1983ರ ಅವಿಭಜಿತ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ, 27 ವರ್ಷಗಳ ಕಾಂಗ್ರೆಸ್ ಆಳ್ವಿಕೆಗೆ ತೆರೆ ಎಳೆದರು. ಜನವರಿ 9, 1983 ರಂದು ಅವರು ಮುಖ್ಯಮಂತ್ರಿಯಾದರು.
ಇತರ ಅನೇಕ ತಾರೆಯರು ಇದೇ ರೀತಿಯ ಯಶಸ್ಸನ್ನು ಸಾಧಿಸಲು ಸಾಧ್ಯವಾಗದಿದ್ದರೂ, ಎರಡು ವರ್ಷಗಳ ಹಿಂದಷ್ಟೇ ತಮ್ಮ ಪಕ್ಷವನ್ನು ಸ್ಥಾಪಿಸಿದ ವಿಜಯ್, ಚಿತ್ರ ತಾರೆಯಾಗಿ ಹೊಂದಿರುವ ಜನಪ್ರಿಯತೆಯು ರಾಜಕೀಯ ಲಾಭಗಳಾಗಿ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಚಲನಚಿತ್ರ ತಾರೆಯರು ರಾಜಕೀಯ ಪ್ರವೇಶಿಸುವುದು ಅಸಾಮಾನ್ಯ ವಿಚಾರವೇನಲ್ಲ. ಆದಾಗ್ಯೂ, ರಾಜಕೀಯಕ್ಕೆ ಕಾಲಿಟ್ಟ ಹಲವಾರು ನಟರು ತಮ್ಮ ಅಸ್ತಿತ್ವವನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸೂಪರ್ಸ್ಟಾರ್ ಚಿರಂಜೀವಿ 2008ರಲ್ಲಿ ತಮ್ಮದೇ ಆದ ಪ್ರಜಾ ರಾಜ್ಯಂ ಪಕ್ಷವನ್ನು ಸ್ಥಾಪಿಸಿದರು. ನಂತರ ಅದು 2011ರಲ್ಲಿ ಕಾಂಗ್ರೆಸ್ನೊಂದಿಗೆ ವಿಲೀನವಾಯಿತು. ಪ್ರಜಾ ರಾಜ್ಯಂ 2009ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ 294 ಸದಸ್ಯ ಬಲದ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ (ಅವಿಭಜಿತ) 18 ಸ್ಥಾನಗಳನ್ನು ಗೆದ್ದಿತು. ನಂತರ, ಚಿರಂಜೀವಿ ಸಕ್ರಿಯ ರಾಜಕೀಯದಿಂದ ದೂರ ಉಳಿದರು.
ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ್ 2014ರಲ್ಲಿ ಜನ ಸೇನಾ ಪಕ್ಷವನ್ನು ಸ್ಥಾಪಿಸಿದರು. ಆದರೆ, ಆ ವರ್ಷ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ. ಬದಲಿಗೆ 2019ರಲ್ಲಿ ಚುನಾವಣಾ ಕಣಕ್ಕೆ ಇಳಿದರು. ಆದರೆ, ಅವರು ಸ್ಪರ್ಧಿಸಿದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋತರು. ಆದರೆ, ಅವರ ಪಕ್ಷದಿಂದ ಒಬ್ಬ ಅಭ್ಯರ್ಥಿ ಮಾತ್ರ ಗೆಲುವು ಸಾಧಿಸಿದರು. 2024ರಲ್ಲಿ ಅವರು ತೆಲುಗು ದೇಶಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು ಮತ್ತು ಅವರ ಪಕ್ಷವು ಅತ್ಯುತ್ತಮ ಪ್ರದರ್ಶನ ನೀಡಿತು. 21 ಸ್ಥಾನಗಳಲ್ಲಿ ಸ್ಪರ್ಧಿಸಿ ಎಲ್ಲ 21 ಕ್ಷೇತ್ರಗಳಲ್ಲಿಯೂ ಗೆಲುವು ಸಾಧಿಸಿತು.
ತಮಿಳುನಾಡಿನಲ್ಲಿ, ನಟ ಕಮಲ್ ಹಾಸನ್ 2018ರಲ್ಲಿ ಮಕ್ಕಳ್ ನೀಧಿ ಮಯ್ಯಮ್ ಪಕ್ಷವನ್ನು ಸ್ಥಾಪಿಸಿದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಅವರು ಕೊಯಮತ್ತೂರು ದಕ್ಷಿಣದಿಂದ ಸ್ಪರ್ಧಿಸಿದರು. ಆದರೆ, ಸ್ವಲ್ಪ ಅಂತರದಲ್ಲಿ ಸೋತರು. ನಂತರ, ಅವರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು 2025ರಲ್ಲಿ ರಾಜ್ಯಸಭಾ ಸದಸ್ಯರಾದರು.
'ಕ್ಯಾಪ್ಟನ್' ಎಂದೇ ಖ್ಯಾತರಾದ ಮತ್ತೊಬ್ಬ ಜನಪ್ರಿಯ ತಮಿಳು ನಟ ವಿಜಯಕಾಂತ್ 2005ರಲ್ಲಿ ದೇಶಿಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಸ್ಥಾಪಿಸಿದರು. ಮುಂದಿನ ವರ್ಷ ನಡೆದ ತನ್ನ ಮೊದಲ ಚುನಾವಣೆಯಲ್ಲಿ, ಡಿಎಂಡಿಕೆ ಉತ್ತಮ ಪ್ರದರ್ಶನ ನೀಡಿತು. ವಿಜಯಕಾಂತ್ ವೃದ್ದಾಚಲಂನಿಂದ ಗೆದ್ದರು.
2011ರ ಚುನಾವಣೆಯಲ್ಲಿ ಅವರು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡು ವಿರೋಧ ಪಕ್ಷದ ನಾಯಕರಾದರು. ವಿಜಯಕಾಂತ್ ಡಿಸೆಂಬರ್ 2023 ರಲ್ಲಿ ನಿಧನರಾದರು ಮತ್ತು ಅವರ ಪಕ್ಷವು ಈಗ ಡಿಎಂಕೆ ನೇತೃತ್ವದ ಎಸ್ಪಿಎಯ ಭಾಗವಾಗಿದೆ.