ನವದೆಹಲಿ: 'ಟಿಎಂಸಿ ಅಧ್ಯಾಯ ಮುಗಿದಿದೆ'. ಐದು ಕೋಟಿ ರೂಪಾಯಿ ನೀಡಲು ನಿರಾಕರಿಸಿದ್ದಕ್ಕಾಗಿ ಪಕ್ಷವು ಹೌರಾದ ಶಿಬ್ಪುರ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮತ್ತು ತೃಣಮೂಲ ಕಾಂಗ್ರೆಸ್ ಶಾಸಕ ಮನೋಜ್ ತಿವಾರಿ ಮಂಗಳವಾರ ಆರೋಪಿಸಿದ್ದಾರೆ.
ಭಾರತದ ಮಾಜಿ ಬ್ಯಾಟ್ಸ್ಮನ್ ಮತ್ತು ಬಂಗಾಳ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ (10,195 ಪ್ರಥಮ ದರ್ಜೆ ರನ್ಗಳು) 40 ವರ್ಷದ ಅವರು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿದ್ದರು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವುದರೊಂದಿಗೆ ಟಿಎಸಿಯ 15 ವರ್ಷಗಳ ಅಧಿಕಾರಾವಧಿ ಕೊನೆಗೊಂಡಿದೆ.
'ನೋಡಿ, ಈ ಸೋಲಿನಿಂದ ನನಗೆ ಸ್ವಲ್ಪವೂ ಆಶ್ಚರ್ಯವಿಲ್ಲ. ಇಡೀ ಪಕ್ಷವೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಇಲ್ಲದಿರುವಾಗ ಇದು ಸಂಭವಿಸುವುದು ಖಚಿತ' ಎಂದು ತಿವಾರಿ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಭಾರಿ ಹಣ ಪಾವತಿಸಬಲ್ಲವರು ಮಾತ್ರ ಟಿಕೆಟ್ ಖರೀದಿಸಬಹುದು. ಈ ಬಾರಿ ಕನಿಷ್ಠ 70-72 ಅಭ್ಯರ್ಥಿಗಳು ಟಿಕೆಟ್ ಪಡೆಯಲು ಸುಮಾರು ಐದು ಕೋಟಿ ರೂ. ಪಾವತಿಸಿದ್ದಾರೆ. ನನ್ನನ್ನು ಕೇಳಲಾಯಿತು ಆದರೆ ನಾನು ಹಣ ನೀಡಲು ನಿರಾಕರಿಸಿದೆ. ಹಣ ಪಾವತಿಸಿದವರಲ್ಲಿ ಎಷ್ಟು ಮಂದಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದನ್ನು ಪರಿಶೀಲಿಸಿ. ನನ್ನ ಪಾಲಿಗೆ ಟಿಎಂಸಿಯ ಅಧ್ಯಾಯ ಮುಗಿದಿದೆ' ಎಂದು ಅವರು ಹೇಳಿದರು.
ಮನೋಜ್ ತಿವಾರಿ 2019ರಲ್ಲಿ ಟಿಎಂಸಿಯು ಲೋಕಸಭಾ ಟಿಕೆಟ್ ನೀಡಿದ್ದರೂ ಆರಂಭದಲ್ಲಿ ರಾಜಕೀಯ ಪ್ರವೇಶಿಸಲು ನಿರಾಕರಿಸಿದರು. ಆದಾಗ್ಯೂ, ನಂತರ ಅವರು 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡರು ಮತ್ತು ಶಿಬ್ಪುರದಿಂದ ಗೆದ್ದರು.
'ಆ ಸಮಯದಲ್ಲಿ, ನಾನು ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದೆ ಮತ್ತು ದೀದಿ (ಮಮತಾ) ನಾನು ಲೋಕಸಭೆಗೆ ಸ್ಪರ್ಧಿಸಬೇಕೆಂದು ಬಯಸಿದಾಗಲೂ ರಣಜಿ ಟ್ರೋಫಿಯನ್ನು ಗಂಭೀರವಾಗಿ ಆಡುತ್ತಿದ್ದೆ. ನಾನು ನಯವಾಗಿ ನಿರಾಕರಿಸಿದ್ದೆ. ಆದರೆ, 2021ರ ಚುನಾವಣೆಗೆ ಮೊದಲು, ದೀದಿ ಮತ್ತೊಮ್ಮೆ ಕರೆ ಮಾಡಿ 'ಮನೋಜ್, ನಾನು ನಿಮಗಾಗಿ ಒಂದು ಸಂದೇಶವನ್ನು ಹೊಂದಿದ್ದೇನೆ ಮತ್ತು ಅರೂಪ್ ನಿಮಗೆ ಹೇಳುತ್ತಾನೆ' ಎಂದು ಹೇಳಿದರು. ಶಿಬ್ಪುರದಿಂದ ಸ್ಪರ್ಧಿಸಲು ನನ್ನನ್ನು ಕೇಳಲಾಯಿತು ಮತ್ತು ನಾನು ಅರ್ಥಪೂರ್ಣ ಬದಲಾವಣೆಯನ್ನು ಮಾಡಬಹುದೆಂದು ಭಾವಿಸಿದೆ' ಎಂದು ತಿವಾರಿ ನೆನಪಿಸಿಕೊಂಡರು.
ಅಭಿವೃದ್ಧಿ ಕಾರ್ಯಗಳಿಗೆ ಸ್ವಂತ ಜೇಬಿನಿಂದ ಹಣ ಪಾವತಿ
ತೃಣಮೂಲ ಕಾಂಗ್ರೆಸ್ನಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕೊರತೆಯಿದೆ. ರಾಜ್ಯ ಸಚಿವರನ್ನಾಗಿ ಮಾಡಿರುವುದು ಕೇವಲ 'ಲಾಲಿಪಾಪ್' (ನಿಜವಾದ ಅಧಿಕಾರವಿಲ್ಲದ ಸಾಂಕೇತಿಕ ಹುದ್ದೆ) ಆಗಿತ್ತು. ಹಿರಿಯ ನಾಯಕರೊಂದಿಗಿನ ಸಭೆಗಳಲ್ಲಿಯೂ ಸಹ, ಅವರು ತಮ್ಮ ಮಾತುಗಳನ್ನು ಕೇಳಿಸಿಕೊಂಡಂತೆ ಭಾಸವಾಗಲಿಲ್ಲ. ನಾನು ಎದ್ದುನಿಂತು 'ದೀದಿ, ನಾನು ಒಂದು ನಿರ್ದಿಷ್ಟ ಸಮಸ್ಯೆಯತ್ತ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ' ಎಂದು ಹೇಳಿದರೆ, ಅವರು 'ನನಗೆ ಸಮಯವಿಲ್ಲ' ಎಂದು ಹೇಳುತ್ತಿದ್ದರು ಎಂದು ತಿವಾರಿ ತಿಳಿಸಿದರು.
'ಹೌರಾ ಜಿಲ್ಲೆಯಲ್ಲಿ ದೀರ್ಘಕಾಲದಿಂದಲೂ ಇರುವ ಒಳಚರಂಡಿ ವ್ಯವಸ್ಥೆಗಳ ವೈಫಲ್ಯದ ಸಮಸ್ಯೆಯನ್ನು ಪದೇ ಪದೆ ಪ್ರಯತ್ನಿಸಿದರೂ ಪರಿಹರಿಸಲಾಗಿಲ್ಲ. ಅವರು ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸುತ್ತಿದ್ದರು, ಅದು ತುಂಬಾ ಮೂಲಭೂತವಾದದ್ದು. ನಾನು ಮಾಡಿದ ಕೆಲವು ಕೆಲಸಗಳು ಶಾಸಕರ ನಿಧಿಯಿಂದ ಮಾತ್ರವಲ್ಲ, ಯೋಜನೆಗಳನ್ನು ಪೂರ್ಣಗೊಳಿಸಲು ನನ್ನ ಸ್ವಂತ ಜೇಬಿನಿಂದ ಹಣವನ್ನೂ ನೀಡಿದ್ದೇನೆ ಎಂದು ನಾನು ನಿಮಗೆ ಹೇಳಬಲ್ಲೆ. ಪ್ರತಿ ವರ್ಷ ದೀದಿ ಭೂಗತ ಒಳಚರಂಡಿ ವ್ಯವಸ್ಥೆಯ ಉನ್ನತೀಕರಣಕ್ಕಾಗಿ ಮಾಸ್ಟರ್ ಪ್ಲಾನ್ ಘೋಷಿಸುತ್ತಿದ್ದರು. ಆದರೆ, ಅದು ಕೇವಲ ಬಾಯಿ ಮಾತಾಗಿರುತ್ತಿತ್ತು'