ಅಮೃತಸರ: ಪಂಜಾಬ್ನಲ್ಲಿ ಭದ್ರತಾ ನೆಲೆಗಳನ್ನು ಗುರಿಯಾಗಿಸಿಕೊಂಡು ಸತತ ಎರಡು ಬಾಂಬ್ ಸ್ಫೋಟಗಳು ಸಂಭವಿಸಿದ್ದು, ಭೀತಿ ಸೃಷ್ಟಿಸಿದೆ. ಈ ಘಟನೆಗಳನ್ನು ರಾಜ್ಯವನ್ನು "ಅಸ್ಥಿರಗೊಳಿಸುವ" ಪ್ರಯತ್ನಗಳು ಎಂದು ವಿರೋಧ ಪಕ್ಷಗಳು ಖಂಡಿಸಿವೆ.
ಜಲಂಧರ್ನಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಗಡಿ ಭದ್ರತಾ ಪಡೆಯ ಪಂಜಾಬ್ ಗಡಿನಾಡಿನ ಪ್ರಧಾನ ಕಚೇರಿಯ ಹೊರಗೆ ಮೊದಲ ಸ್ಫೋಟ ಸಂಭವಿಸಿದೆ, ಆದರೆ ಎರಡನೇ ಸ್ಫೋಟವು ರಾತ್ರಿ 11 ಗಂಟೆ ಸುಮಾರಿಗೆ ಅಮೃತಸರದ ಸೇನಾ ಕಂಟೋನ್ಮೆಂಟ್ ಬಳಿ ಸಂಭವಿಸಿದೆ.
ಈ ಸ್ಫೋಟಗಳಲ್ಲಿ ಯಾರಿಗೂ ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡೂ ಘಟನೆಗಳ ಬಗ್ಗೆ ತನಿಖೆ
ಖಾಸಾದ ರಸ್ತೆಯೊಂದರಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ದೊಡ್ಡ ಶಬ್ದ ಕೇಳಿಸಿದ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ ಎಂದು ಅಮೃತಸರ (ಗ್ರಾಮೀಣ) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಹೇಲ್ ಮಿರ್ ಖಾಸಿಮ್ ಅವರು ಹೇಳಿದ್ದಾರೆ.
ನಮ್ಮ ತಂಡಗಳು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದವು. ಪ್ರಾಥಮಿಕ ತಪಾಸಣೆಯಲ್ಲಿ ಯಾರೋ ಗಡಿ ಗೋಡೆಯ ಕಡೆಗೆ ಸ್ಫೋಟಕ ಸಾಧನವನ್ನು ಎಸೆದಿದ್ದಾರೆ, ಇದು ಸ್ಫೋಟಕ್ಕೆ ಕಾರಣವಾಯಿತು ಎಂದು ಎಸ್ಎಸ್ಪಿ ತಿಳಿಸಿದ್ದಾರೆ.
ಸ್ಫೋಟದ ನಂತರ, ವಿಧಿವಿಜ್ಞಾನ ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡವು ಮಾದರಿಗಳನ್ನು ಸಂಗ್ರಹಿಸಲು ಸ್ಥಳಕ್ಕೆ ಭೇಟಿ ನೀಡಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಅಮೃತಸರ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಎಸ್ ವಾರಿಯರ್, ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ರಾತ್ರಿ ವೇಳೆ ಸ್ಫೋಟ ಸಂಭವಿಸಿರುವುದು ಕಂಡುಬರುತ್ತಿದೆ. ಸ್ಫೋಟದ ನಂತರ ಅಪರಿಚಿತ ವ್ಯಕ್ತಿಯೊಬ್ಬರು ರಕ್ಷಣೆಗಾಗಿ ಓಡುತ್ತಿರುವುದು ಕಂಡುಬಂದಿದೆ.
ಸ್ಫೋಟದ ದೊಡ್ಡ ಶಬ್ದದ ನಂತರ ಸ್ವಲ್ಪ ಹೊತ್ತಿನಲ್ಲಿಯೇ ಬಿಎಸ್ಎಫ್ ಪ್ರಧಾನ ಕಚೇರಿಯ ಹೊರಗೆ ನಿಲ್ಲಿಸಲಾಗಿದ್ದ ಸ್ಕೂಟರ್ ಬೆಂಕಿಗೆ ಆಹುತಿಯಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಲಂಧರ್ನ ಗಡಿ ಭದ್ರತಾ ಪಡೆ(ಬಿಎಸ್ಎಫ್) ಪ್ರಧಾನ ಕಚೇರಿಯ ಹೊರಗೆ ಸ್ಫೋಟ ಸಂಭವಿಸಿದ ಒಂದು ದಿನದ ನಂತರ, ಬುಧವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಖಲಿಸ್ತಾನ್ ಲಿಬರೇಶನ್ ಆರ್ಮಿ(ಕೆಎಲ್ಎ) ಎಂದು ಗುರುತಿಸಿಕೊಳ್ಳುವ ಗುಂಪು ಈ ಘಟನೆಯ ಹೊಣೆಯನ್ನು ಹೊತ್ತುಕೊಂಡಿದೆ. ಆದರೆ ಭದ್ರತಾ ಸಂಸ್ಥೆಗಳು ಈ ಹೇಳಿಕೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ ಎಂದು ಹೇಳಿವೆ.
ಪೋಸ್ಟ್ನಲ್ಲಿ, ಕೆಎಲ್ಎ ಈ ಸ್ಫೋಟವನ್ನು "ಆಪರೇಷನ್ ನವ ಸವೈರ್" ನ ಭಾಗವೆಂದು ಹೇಳಿದ್ದು, ಡಿಐಜಿ ಸಂದೀಪ್ ಗೋಯಲ್ ಸೇರಿದಂತೆ ಹಿರಿಯ ಬಿಎಸ್ಎಫ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದೆ. ಸಾವುನೋವುಗಳ ಬಗ್ಗೆಯೂ ಅದು ಹೇಳಿಕೆ ನೀಡಿದ್ದು, ಅಧಿಕಾರಿಗಳು ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ ಮತ್ತು ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ ಎಂದು ದೃಢಪಡಿಸಿದ್ದಾರೆ.
ಪಂಜಾಬ್ ಸಿಎಂ ಹೇಳಿದ್ದೇನು?
ಇನ್ನು ಅಮೃತಸರ ಹಾಗೂ ಜಲಂಧರ್ನಲ್ಲಿ ನಡೆದ ಸ್ಫೋಟಗಳ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಪ್ರತಿಕ್ರಿಯಿಸಿದ್ದು, "ಈ ಸಣ್ಣ ಸ್ಫೋಟಗಳ ಕುರಿತು ತನಿಖೆ ನಡೆಯುತ್ತಿದೆ. ಇದು ಪಂಜಾಬ್ ಚುನಾವಣೆಗೆ ಬಿಜೆಪಿಯ ಸಿದ್ಧತೆ. ಜನರಲ್ಲಿ ಹಿಂಸಾಚಾರ ಮತ್ತು ಭಯವನ್ನು ಹರಡುವ ಮೂಲಕ ಬಿಜೆಪಿ ಮತಗಳನ್ನು ಪಡೆಯುತ್ತದೆ. ನಾನು ಬಿಜೆಪಿಗೆ ಇದನ್ನು ನಿಲ್ಲಿಸುವಂತೆ ಹೇಳಲು ಬಯಸುತ್ತೇನೆ. ಪಂಜಾಬ್ನ ಜನ ಯಾವಾಗಲೂ ಶಾಂತಿಯನ್ನು ಬಯಸುತ್ತಾರೆ. ಬಿಜೆಪಿ ಎಲ್ಲೆಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಅಲ್ಲಿಗೆ ಹೋಗಿ ಸಂಘರ್ಷ ಸೃಷ್ಟಿಸುತ್ತದೆ" ಎಂದು ಆರೋಪಿಸಿದ್ದಾರೆ.