ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಪ್ರಸ್ತುತ ನೌಕಾಪಡೆ ಮುಖ್ಯಸ್ಥರಾಗಿರುವ ದಿನೇಶ್ ಕುಮಾರ್ ತ್ರಿಪಾಠಿ ಅವರು ಮೇ 31ರಂದು ನಿವೃತ್ತಿಯಾಗಲಿದ್ದು, ಅವರ ನಂತರ ಸ್ವಾಮಿನಾಥನ್ ಅಧಿಕಾರ ಸ್ವೀಕರಿಸಲಿದ್ದಾರೆ. ಈ ನೇಮಕಾತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.
ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರು ಪ್ರಸ್ತುತ ಪಶ್ಚಿಮ ನೌಕಾ ಕಮಾಂಡ್ನ 34ನೇ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದು, 2025ರ ಜುಲೈ 31ರಂದು ಈ ಹುದ್ದೆ ಸ್ವೀಕರಿಸಿದ್ದರು.
ಅವರು 1987ರ ಜುಲೈ 1ರಂದು ಭಾರತೀಯ ನೌಕಾಪಡೆಯಲ್ಲಿ ನಿಯೋಜಿತರಾಗಿದ್ದು, ಸಂವಹನ ಮತ್ತು ಎಲೆಕ್ಟ್ರಾನಿಕ್ ಯುದ್ಧತಂತ್ರದಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆ ವಿದ್ಯಾರ್ಥಿಯಾಗಿದ್ದು, ಯುನೈಟೆಡ್ ಕಿಂಗ್ಡಮ್ನ ಜಂಟಿ ಸೇವೆ ಕಮಾಂಡ್ ಮತ್ತು ಸಿಬ್ಬಂದಿ ಕಾಲೇಜು, ಕರಂಜಾದ ನೌಕಾಪಡೆ ಅಭಿವೃದ್ಧಿ ಕಾಲೇಜು ಹಾಗೂ ಅಮೆರಿಕದ ರೋಡ್ ಐಲ್ಯಾಂಡ್ನ ನ್ಯೂಪೋರ್ಟ್ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ನೇವಲ್ ವಾರ್ ಕಾಲೇಜುಗಳಲ್ಲಿಯೂ ಅಧ್ಯಯನ ಮಾಡಿದ್ದಾರೆ.
ತಮ್ಮ ನೌಕಾಪಡೆಯ ಸೇವೆಯಲ್ಲಿ ಅವರು ಹಲವು ಕಾರ್ಯಾಚರಣೆ, ಆಡಳಿತ ಮತ್ತು ತರಬೇತಿ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಕ್ಷಿಪಣಿ ನೌಕೆಗಳಾದ ಐಎನ್ ಎಸ್ ವಿದ್ಯುತ್ ಮತ್ತು ಐಎನ್ ಎಸ್ ವಿನಾಶ್, ಕ್ಷಿಪಣಿ ಕಾರ್ವೆಟ್ ಐಎನ್ ಎಸ್ ಕುಲಿಶ್, ಮಾರ್ಗದರ್ಶಿತ ಕ್ಷಿಪಣಿ ನಾಶಕ ಐಎನ್ ಎಸ್ ಮೈಸೂರು ಹಾಗೂ ವಿಮಾನವಾಹಕ ನೌಕೆ ಐಎನ್ ಎಸ್ ವಿಕ್ರಮಾದಿತ್ಯ ಗಳಿಗೆ ಅವರು ಕಮಾಂಡ್ ವಹಿಸಿದ್ದರು.
ಅತ್ಯುತ್ತಮ ಸೇವೆಗಾಗಿ ಅವರಿಗೆ ಪರಮ ವಿಶಿಷ್ಠ ಸೇವಾ ಪದಕ, ಅತಿ ವಿಶಿಷ್ಠ ಸೇವಾ ಪದಕ, ವಿಶಿಷ್ಟ ಸೇವಾ ಪದಕ ಪ್ರಶಸ್ತಿಗಳು ಲಭಿಸಿವೆ.
ರಿಯರ್ ಅಡ್ಮಿರಲ್ ಆಗಿ ಪದೋನ್ನತಿ ಪಡೆದ ನಂತರ ಅವರು ಕೊಚ್ಚಿಯ ದಕ್ಷಿಣ ನೌಕಾ ಕಮಾಂಡ್ ಮುಖ್ಯಾಲಯದಲ್ಲಿ ಮುಖ್ಯ ಸಿಬ್ಬಂದಿ ಅಧಿಕಾರಿ (ತರಬೇತಿ) ಆಗಿ ಸೇವೆ ಸಲ್ಲಿಸಿ, ನೌಕಾಪಡೆಯ ತರಬೇತಿ ಚಟುವಟಿಕೆಗಳ ಮೇಲ್ವಿಚಾರಣೆ ಮಾಡಿದರು. ವಿವಿಧ ನೌಕಾ ವಿಭಾಗಗಳ ಕಾರ್ಯಾಚರಣಾ ಸುರಕ್ಷತೆಯನ್ನು ಮೇಲ್ವಿಚಾರಣೆ ಮಾಡುವ ಭಾರತೀಯ ನೌಕಾಪಡೆಯ ಸುರಕ್ಷತಾ ತಂಡ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ನಂತರ ಅವರು ನೌಕಾಪಡೆಯ ವರ್ಕ್ ಅಪ್ ಸಂಸ್ಥೆಯ ಮುಖ್ಯಸ್ಥರಾಗಿ ಫ್ಲಾಗ್ ಆಫೀಸರ್ ಸೀ ಟ್ರೈನಿಂಗ್ ಹುದ್ದೆ ವಹಿಸಿಕೊಂಡು, ಬಳಿಕ ಪಶ್ಚಿಮ ನೌಕಾಪಡೆಯ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿ ಸೇವೆ ಸಲ್ಲಿಸಿದರು. ಬಳಿಕ ಅವರನ್ನು ಫ್ಲಾಗ್ ಆಫೀಸರ್ ಆಫ್ಶೋರ್ ಡಿಫೆನ್ಸ್ ಅಡ್ವೈಸರಿ ಗ್ರೂಪ್ ಹಾಗೂ ಭಾರತ ಸರ್ಕಾರದ ಆಫ್ಶೋರ್ ಭದ್ರತಾ ಮತ್ತು ರಕ್ಷಣಾ ಸಲಹೆಗಾರರಾಗಿ ನೇಮಕ ಮಾಡಲಾಯಿತು.
ವೈಸ್ ಅಡ್ಮಿರಲ್ ಹುದ್ದೆಗೆ ಏರಿದ ಬಳಿಕ ಅವರು ಪಶ್ಚಿಮ ನೌಕಾ ಕಮಾಂಡ್ನ ಮುಖ್ಯ ಸಿಬ್ಬಂದಿ ಅಧಿಕಾರಿ, ಸಿಬ್ಬಂದಿ ಸೇವೆಗಳ ನಿಯಂತ್ರಕ ಹಾಗೂ ನೌಕಾಪಡೆ ಮುಖ್ಯಾಲಯದ ಮುಖ್ಯ ಸಿಬ್ಬಂದಿ ಅಧಿಕಾರಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅವರು ನೌಕಾಪಡೆಯ ಉಪ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರಿಗೆ ವಿಜ್ಞಾನ, ದೂರಸಂಪರ್ಕ, ರಕ್ಷಣಾ ಅಧ್ಯಯನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶೈಕ್ಷಣಿಕ ಹಿನ್ನೆಲೆ ಇದೆ. ಅವರು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ, ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ದೂರಸಂಪರ್ಕದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ಬಳಿಕ ಕಿಂಗ್ಸ್ ಕಾಲೇಜ್ ಲಂಡನ್ ನಿಂದ ರಕ್ಷಣಾ ಅಧ್ಯಯನದಲ್ಲಿ ಎಂಎ ಪದವಿ ಪಡೆದಿದ್ದಾರೆ. ಜೊತೆಗೆ ಮುಂಬೈ ವಿಶ್ವವಿದ್ಯಾಲಯದಿಂದ ತಂತ್ರಯುಕ್ತ ಅಧ್ಯಯನದಲ್ಲಿ ಎಂಫಿಲ್ ಹಾಗೂ ಅಂತಾರಾಷ್ಟ್ರೀಯ ಅಧ್ಯಯನದಲ್ಲಿ ಪಿಎಚ್ಡಿ ಪದವಿಯನ್ನು ಪಡೆದಿದ್ದಾರೆ.