ಚೆನ್ನೈ: ಸರ್ಕಾರ ನಡೆಸಲು ಹಣಕಾಸಿನ ಕುರಿತ ನೆಪಗಳ ಬದಲು "ಆಡಳಿತಾತ್ಮಕ ಇಚ್ಛಾಶಕ್ತಿ ಮತ್ತು ಆಡಳಿತ ನಡೆಸುವ ಸಾಮರ್ಥ್ಯ"ದ ಅಗತ್ಯವಿದೆ ಎಂದು ಡಿಎಂಕೆ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಭಾನುವಾರ ಹೇಳಿದ್ದಾರೆ.
ರಾಜ್ಯ ಹಣಕಾಸು ಕುರಿತ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, “ಆಡಳಿತ ನಡೆಸಲು ಕಾರಣಗಳಲ್ಲ, ಇಚ್ಛಾಶಕ್ತಿ ಬೇಕು” ಎಂದು ತಿರುಗೇಟು ನೀಡಿದ್ದಾರೆ.
ವಿಜಯ್ ಅವರು ತಮ್ಮ ಮೊದಲ ಭಾಷಣದಲ್ಲಿ ರಾಜ್ಯದ ಹಿಂದಿನ ಸರ್ಕಾರವು ರೂ.10 ಲಕ್ಷ ಕೋಟಿ ಸಾಲ ಹಾಗೂ ಖಾಲಿ ಖಜಾನೆ ನೀಡಿದೆ ಎಂದು ಹೇಳಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ಟಾಲಿನ್ ಅವರು, ತಮಿಳುನಾಡಿನ ಸಾಲದ ಪ್ರಮಾಣವು ಹಣಕಾಸು ನಿಯಮಗಳ ಮಿತಿಯಲ್ಲೇ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಫೆಬ್ರವರಿಯಲ್ಲಿ ಮಂಡಿಸಲಾದ ರಾಜ್ಯ ಬಜೆಟ್ನಲ್ಲೇ ಹಣಕಾಸು ಸ್ಥಿತಿಯ ವಿವರಗಳನ್ನು ಸಾರ್ವಜನಿಕವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಜನರಿಗೆ ತಪ್ಪು ಸಂದೇಶ ಹೋಗದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿರುವ ಸ್ಟಾಲಿನ್, ಚುನಾವಣಾ ಪ್ರಚಾರದಲ್ಲಿ ನೀಡುವ ಭರವಸೆಗಳು ಮತ್ತು ಆಡಳಿತದ ವಾಸ್ತವಿಕತೆಗಳು ವಿಭಿನ್ನವಾಗಿವೆ ಎಂದು ಹೇಳಿದ್ದಾರೆ.
ಆಡಳಿತ ನಡೆಸುವುದು ಕೇವಲ ಘೋಷಣೆಗಳಲ್ಲ, ಅದು ನಿರಂತರ ಜವಾಬ್ದಾರಿ ಮತ್ತು ನಿರ್ಧಾರಗಳನ್ನು ಒಳಗೊಂಡಿರುವ ಪ್ರಕ್ರಿಯೆ ಎಂದು ತಿಳಿಸಿದ್ದಾರೆ.
ಬಳಿಕ ಹಿಂದಿನ ಡಿಎಂಕೆ ಸರ್ಕಾರದ ಕಾರ್ಯಕ್ಷಮತೆಯನ್ನು ಸಮರ್ಥಿಸಿಕೊಂಡ ಸ್ಟಾಲಿನ್, ಕೊರೋನಾ ಮಹಾಮಾರಿ, ರಾಜ್ಯದ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಮತ್ತು ಕೇಂದ್ರ ಸರ್ಕಾರದಿಂದ ಬಂದ ಆರ್ಥಿಕ ಒತ್ತಡಗಳ ನಡುವೆಯೂ ಹಲವು ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ವಿಜಯ್ ನೇತೃತ್ವದ ಹೊಸ ಸರ್ಕಾರಕ್ಕೆ ಶುಭಾಶಯ ಕೋರಿರುವ ಅವರು, ರಾಜ್ಯದ ಅಭಿವೃದ್ಧಿ ಮುಂದುವರಿಯಬೇಕು ಮತ್ತು ಜನಪರ ಆಡಳಿತ ನಡೆಯಬೇಕು ಎಂದು ಆಶಿಸಿದ್ದಾರೆ. ಆದರೆ, ಜೊತೆಯಲ್ಲೇ, ಆಡಳಿತ ನಡೆಸುವುದು ಕಠಿಣ ಜವಾಬ್ದಾರಿ ಎಂದೂ ಎಚ್ಚರಿಕೆ ನೀಡಿದ್ದಾರೆ