ಭೋಪಾಲ್: ಭೋಪಾಲ್ ನ್ಯಾಯಾಲಯವು, ನಿವೃತ್ತ ನ್ಯಾಯಾಧೀಶರ ಸೊಸೆ ಟ್ವಿಷಾ ಶರ್ಮಾ (Twisha Sharma) ಅವರ ಸಾವಿನ ಪ್ರಕರಣದಲ್ಲಿ, ಎಐಐಎಂಎಸ್ ದೆಹಲಿಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೇಳಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಟ್ವಿಷಾ ಶರ್ಮಾ ಈ ತಿಂಗಳ ಆರಂಭದಲ್ಲಿ ಭೋಪಾಲ್ನಲ್ಲಿರುವ ತನ್ನ ಗಂಡನೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣ ಸಂಬಂಧ ಮೇ 19ರಂದು ಸಲ್ಲಿಸಲಾದ ಹೊಸ ಮರಣೋತ್ತರ ಪರೀಕ್ಷೆ ಮತ್ತು ಫೊರೆನ್ಸಿಕ್ ವಿಶ್ಲೇಷಣೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ವೇಳೆ, ಭೋಪಾಲ್ ಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.
ಅಲ್ಲದೆ ಮೇ 13ರಿಂದ ಎಐಐಎಂಎಸ್ ಭೋಪಾಲ್ ಶವಾಗಾರದಲ್ಲಿ ಇರಿಸಲಾಗಿರುವ ಮೃತದೇಹದ ಸಂರಕ್ಷಣೆ ಕುರಿತು ನ್ಯಾಯಾಲಯ ಗಂಭೀರ ಕಳವಳ ವ್ಯಕ್ತಪಡಿಸಿದೆ.
ನ್ಯಾಯಾಲಯವು ಕಟಾರಾ ಹಿಲ್ಸ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಅವರಿಗೆ, ಮಧ್ಯಪ್ರದೇಶ ಹಾಗೂ ರಾಜ್ಯದ ಇತರೆ ಮಹಾನಗರಗಳ ವೈದ್ಯಕೀಯ ಸಂಸ್ಥೆಗಳಲ್ಲಿ ಅತಿ ಕಡಿಮೆ ತಾಪಮಾನದಲ್ಲಿ ಮೃತದೇಹ ಸಂರಕ್ಷಿಸುವ ಸೌಲಭ್ಯಗಳಿವೆಯೇ ಎಂಬುದರ ಕುರಿತು ತಕ್ಷಣವೇ ಲಿಖಿತ ಮಾಹಿತಿ ಸಂಗ್ರಹಿಸಲು ನಿರ್ದೇಶಿಸಿದೆ.
ನ್ಯಾಯಾಲಯಕ್ಕೆ ಸಲ್ಲಿಸಲಾದ ಪೊಲೀಸ್ ವರದಿ ಪ್ರಕಾರ, ಟ್ವಿಷಾ ಅವರ ಮೃತದೇಹವನ್ನು ಪ್ರಸ್ತುತ ಎಐಐಎಂಎಸ್ ಭೋಪಾಲ್ನಲ್ಲಿ ಮೈನಸ್ 4 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂರಕ್ಷಿಸಲಾಗಿದೆ. ದೀರ್ಘಕಾಲಿಕ ಸಂರಕ್ಷಣೆಗೆ ಮೈನಸ್ 80 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಗತ್ಯವಿದ್ದು, ಅಂತಹ ಸೌಲಭ್ಯ ಭೋಪಾಲ್ನಲ್ಲಿ ಲಭ್ಯವಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಲಯವು “19-05-26 ರಂದು ನೀಡಲಾದ, ಎಐಐಎಂಎಸ್ ದೆಹಲಿಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ಮತ್ತು ಮೃತರ ಫೊರೆನ್ಸಿಕ್ ವಿಶ್ಲೇಷಣೆ ನಡೆಸುವಂತೆ ನೀಡಿದ್ದ ನಿರ್ದೇಶನಗಳನ್ನು ಈ ಮೂಲಕ ವಜಾಗೊಳಿಸಲಾಗುತ್ತದೆ” ಎಂದು ಹೇಳಿದೆ.
ಇದರ ಜೊತೆಗೆ, ಮಧ್ಯಪ್ರದೇಶದ ಯಾವುದೇ ಉನ್ನತ ವೈದ್ಯಕೀಯ ಸಂಸ್ಥೆಯಲ್ಲಿ ಅಗತ್ಯ ಸಂರಕ್ಷಣಾ ಸೌಲಭ್ಯವಿದೆಯೇ ಎಂಬುದರ ಕುರಿತು ತಕ್ಷಣ ವರದಿ ಸಲ್ಲಿಸಬೇಕೆಂದು ನ್ಯಾಯಾಲಯ ಹೇಳಿದೆ.
ಆರೋಪಿಗಳ ಬಂಧನಕ್ಕೆ ತನಿಖೆ ಚುರುಕು
ಈ ಪ್ರಕರಣದಲ್ಲಿ ಟ್ವಿಶಾ ಅವರ ಪತಿ, ವಕೀಲ ಸಮರ್ಥ್ ಸಿಂಗ್ ಮತ್ತು ಅತ್ತೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಸಾವು ಹಾಗೂ ಕಿರುಕುಳದ ಪ್ರಕರಣ ದಾಖಲಾಗಿದೆ. ಪೊಲೀಸರು ಪರಾರಿಯಾಗಿರುವ ಸಮರ್ಥ್ ಸಿಂಗ್ ಬಂಧನಕ್ಕೆ ಮಾಹಿತಿ ನೀಡುವವರಿಗೆ ₹10,000 ಬಹುಮಾನ ಘೋಷಿಸಿದ್ದಾರೆ.
ಮೇ 13ರಿಂದ ಶವಾಗಾರದಲ್ಲೇ ಇರುವ ಮೃತದೇಹ
ಇನ್ನು ಟ್ವಿಷಾ ಶರ್ಮಾ ಮೇ 12ರ ರಾತ್ರಿ ಭೋಪಾಲ್ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತಮ್ಮ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ನಂತರ ಪೊಲೀಸರು, ಅವರ ಪತಿ ವಕೀಲ ಸಮರ್ಥ್ ಸಿಂಗ್ ಮತ್ತು ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಸಾವು ಮತ್ತು ಕಿರುಕುಳ ಆರೋಪಗಳಡಿ ಎಫ್ಐಆರ್ ದಾಖಲಿಸಿದ್ದರು.
ನೊಯ್ಡಾದಲ್ಲಿ ವಾಸಿಸುವ ಟ್ವಿಷಾ ಕುಟುಂಬವು, ವರದಕ್ಷಿಣೆ ಕಿರುಕುಳ ಮತ್ತು ತನಿಖೆಯಲ್ಲಿನ ಲೋಪಗಳನ್ನು ಆರೋಪಿಸಿ, ಎಐಐಎಂಎಸ್ ದೆಹಲಿಯಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಮನವಿ ಮಾಡಿತ್ತು.
ತಮ್ಮ ಅರ್ಜಿಯಲ್ಲಿ, ಟ್ವಿಷಾ ಸಾವಿನ ಮೂರು ದಿನಗಳ ನಂತರ ಎಫ್ಐಆರ್ ದಾಖಲಿಸಲಾಗಿದೆ. ಇದು ಅನುಮಾನಕ್ಕೆ ಕಾರಣವಾಗಿದೆ ಎಂದು ಕುಟುಂಬ ಆರೋಪಿಸಿದ್ದು, ಮೊದಲ ಮರಣೋತ್ತರ ಪರೀಕ್ಷೆಯ ವೇಳೆ ನೇಣು ಬಿಗಿಯಲು ಬಳಸಲಾಗಿದೆ ಎನ್ನಲಾದ ವಸ್ತುವನ್ನು ತನಿಖಾಧಿಕಾರಿಗಳು ಒದಗಿಸಲಿಲ್ಲ ಎಂದೂ ಹೇಳಿದೆ. ಎರಡನೇ ಮರಣೋತ್ತರ ಪರೀಕ್ಷೆ ನಡೆಯುವವರೆಗೆ ಮೃತದೇಹವನ್ನು ಸಂರಕ್ಷಿಸುವಂತೆ ಕುಟುಂಬವು ಅಧಿಕಾರಿಗಳಿಗೆ ಮನವಿ ಮಾಡಿತ್ತು.
ಮೃತದೇಹ ಕೊಳೆಯುವ ಅಪಾಯದ ಎಚ್ಚರಿಕೆ ನೀಡಿದ ಪೊಲೀಸರು
ಈ ವಾರದ ಆರಂಭದಲ್ಲಿ, ಮೃತದೇಹ ಕೊಳೆಯುವ ಅಪಾಯ ಹೆಚ್ಚುತ್ತಿದೆ ಎಂದು ಎಚ್ಚರಿಸಿ, ಟ್ವಿಷಾ ಕುಟುಂಬವು ಮೃತದೇಹದ ವಶ ಪಡೆಯಬೇಕೆಂದು ಭೋಪಾಲ್ ಪೊಲೀಸರು ಮನವಿ ಮಾಡಿದ್ದರು.
ಟ್ವಿಷಾ ತಂದೆ ನವನಿಧಿ ಶರ್ಮಾ ಅವರಿಗೆ ಕಟಾರಾ ಹಿಲ್ಸ್ ಪೊಲೀಸರು ಬರೆದ ಪತ್ರದಲ್ಲಿ, ದೀರ್ಘಕಾಲಿಕ ಸಂರಕ್ಷಣೆಗೆ ಅಗತ್ಯವಾದ ಮೂಲಸೌಕರ್ಯ ಎಐಐಎಂಎಸ್ ಭೋಪಾಲ್ನಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.
“ಮೃತದೇಹವನ್ನು ಪ್ರಸ್ತುತ ಎಐಐಎಂಎಸ್ ಭೋಪಾಲ್ ಶವಾಗಾರದಲ್ಲಿ ಮೈನಸ್ 4 ಡಿಗ್ರಿ ಸೆಲ್ಸಿಯಸ್ನಲ್ಲಿ ಸಂರಕ್ಷಿಸಲಾಗಿದೆ,” ಎಂದು ಪತ್ರದಲ್ಲಿ ಹೇಳಲಾಗಿದ್ದು, ದೀರ್ಘಾವಧಿ ಸಂರಕ್ಷಣೆಗೆ ಮೈನಸ್ 80 ಡಿಗ್ರಿ ಸೆಲ್ಸಿಯಸ್ ತಾಪಮಾನ ಅಗತ್ಯವಿದೆ ಎಂದು ತಿಳಿಸಲಾಗಿದೆ.