ಚೆನ್ನೈ: ಗುರುವಾರ ಇಲ್ಲಿನ ಲೋಕ ಭವನದಲ್ಲಿ ನಡೆದ ತಮಿಳುನಾಡು ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ 'ತಮಿಳು ತಾಯಿ ವಾಜ್ತು' (ತಮಿಳು ಪ್ರಾರ್ಥನೆ ಗೀತೆ) ಯನ್ನು ಕೊನೆಯದಾಗಿ ಹಾಡಿದ್ದರಿಂದ ಹೊಸ ರಾಜಕೀಯ ವಿವಾದ ಭುಗಿಲೆದ್ದಿತು.
ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಸಮ್ಮುಖದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ವಂದೇ ಮಾತರಂ ನಂತರ ತಮಿಳು ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವುದಕ್ಕೆ ಎಡಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು.
ಗುರುವಾರ 21 ಟಿವಿಕೆ ಶಾಸಕರು ಮತ್ತು ಇಬ್ಬರು ಕಾಂಗ್ರೆಸ್ ಶಾಸಕರು ವಿಜಯ್ ನೇತೃತ್ವದ ಟಿವಿಕೆ ಸಂಪುಟಕ್ಕೆ ಸೇರ್ಪಡೆಗೊಂಡರು. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಹೊಸದಾಗಿ ಸೇರ್ಪಡೆಗೊಂಡ 23 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು.
ಮೇ 10 ರಂದು ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ರಾಜ್ಯ ಸರ್ಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ಯಾವಾಗಲೂ ಹಾಡಲಾಗುವ ತಮಿಳು ಗೀತೆಯನ್ನು ಮೊದಲಿಗೆ ಹಾಡದೆ ವಂದೇ ಮಾತರಂ ಮತ್ತು ಜನ ಗಣ ಮನದ ನಂತರ ಮೂರನೆಯದಾಗಿ ಪಠಿಸಿದ್ದಕ್ಕೆ ಇದೇ ರೀತಿಯ ವಿವಾದ ಹುಟ್ಟಿಕೊಂಡಿತು.
ತಮಿಳುನಾಡು ರಾಜ್ಯಪಾಲರು ತಮಿಳು ತಾಯಿ ವಾಜ್ತುವಿಗೆ ಆದ್ಯತೆ ನೀಡಬೇಕು ಎಂದು ಹೇಳಿದ ಸಿಪಿಐ ರಾಜ್ಯ ಕಾರ್ಯದರ್ಶಿ ಎಂ. ವೀರಪಾಂಡ್ಯನ್, ತಮಿಳು ಜನರ ಭಾವನೆಗಳನ್ನು ಸಹ ಸೂಕ್ತವಾಗಿ ಪರಿಗಣಿಸಬೇಕು ಎಂದು ಒತ್ತಿ ಹೇಳಿದರು.
'ರಾಜ್ಯಪಾಲರು ತಮಿಳು ಗೀತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಾವು ಪುನರುಚ್ಚರಿಸುತ್ತೇವೆ. ನಾವು ಭಾರತದ ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಅನ್ನು ಗೌರವಿಸುತ್ತೇವೆ. ಆದರೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜ್ಯಪಾಲರು ತಮಿಳು ಗೀತೆಗೆ ಆದ್ಯತೆ ನೀಡಬೇಕು ಎಂದು ನಾವು ಪುನರುಚ್ಚರಿಸುತ್ತೇವೆ' ಎಂದು ವೀರಪಾಂಡ್ಯನ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಪಿ ಷಣ್ಮುಗಂ ಮಾತನಾಡಿ, ತಮಿಳು ತಾಯಿ ವಾಜ್ತುವನ್ನು ಕೊನೆಯಲ್ಲಿ ಹಾಡುವ ವಿಷಯವನ್ನು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದಾಗ, ರಾಜ್ಯಪಾಲರು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಮೊದಲು ಹಾಡಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು.