ನವದೆಹಲಿ: ಪಶ್ಚಿಮ ಏಷ್ಯಾ ಸಂಘರ್ಷದಿಂದ ದೇಶದಲ್ಲಿ ತೈಲ ಬಿಕ್ಕಟ್ಟು ಎದುರಾಗಿದ್ದು, ಇಂಧನ ಉಳಿತಾಯ ಮಾಡಲು ಮನೆಯಿಂದ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಎಲ್ಲಾ ಹೈಕೋರ್ಟ್ಗಳು ಆನ್ಲೈನ್ನಲ್ಲಿ ವಿಚಾರಣೆ ನಡೆಸುವಂತೆ ಕೇಳಿಕೊಳ್ಳಲಾಗಿದ್ದು, ಬಹುತೇಕ ಎಲ್ಲರೂ ಈಗಾಗಲೇ ಅದನ್ನು ಜಾರಿಗೆ ತಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯ ಕಾಂತ್ ಅವರು ಗುರುವಾರ ಹೇಳಿದ್ದಾರೆ.
ದೆಹಲಿಯ ಎಲ್ಲಾ ನ್ಯಾಯಾಲಯಗಳು ಆನ್ಲೈನ್ ವಿಚಾರಣೆಗೆ ಹೋಗಬೇಕು ಎಂದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ಕೋರಿ ಸಿಜೆಐ ನೇತೃತ್ವದ ಪೀಠದ ಮುಂದೆ ಪ್ರಸ್ತಾಪಿಸಿದಾಗ ಸೂರ್ಯ ಕಾಂತ್ ಅವರು ಈ ವಿಚಾರ ತಿಳಿಸಿದರು.
"ನಾನು ಈಗಾಗಲೇ ಎಲ್ಲಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ವಿನಂತಿಸಿದ್ದೇನೆ. ಹೆಚ್ಚಿನವರು ಈಗಾಗಲೇ ಜಾರಿಗೆ ತಂದಿದ್ದಾರೆ. ಇದು ಬಾರ್ ಮತ್ತು ಬೆಂಚ್ ಎರಡೂ ಸ್ವಯಂಪ್ರೇರಿತ ನಿರ್ಧಾರವಾಗಿರಬೇಕು" ಎಂದು ಸಿಜೆಐ ಕಾಂತ್ ಹೇಳಿದರು.
ದೇಶದ ಹಿತದೃಷ್ಟಿಯಿಂದ ಮೂರು ತಿಂಗಳ ಕಾಲ ಆನ್ಲೈನ್ನಲ್ಲಿ ವಿಚಾರಣೆಗಳನ್ನು ನಡೆಸುವಂತೆ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ವಕೀಲರು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದರು.
"ಜಿಲ್ಲಾ ನ್ಯಾಯಾಲಯಗಳು ಹೈಕೋರ್ಟ್ಗಳ ವ್ಯಾಪ್ತಿಗೆ ಬರುತ್ತವೆ. ಜಿಲ್ಲಾ ನ್ಯಾಯಾಲಯಗಳು ಹೈಕೋರ್ಟ್ಗಳ ಆಡಳಿತಾತ್ಮಕ ಕ್ಷೇತ್ರದಲ್ಲಿವೆ. ಅವರು ನಿರ್ಧಾರ ತೆಗೆದುಕೊಳ್ಳಲಿ. ಜಿಲ್ಲಾ ನ್ಯಾಯಾಲಯಗಳಿಗೂ ನಾನು ವಿನಂತಿಸಿದ್ದೇನೆ" ಎಂದರು.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಉಳಿತಾಯ ಮಾಡಲು ಸೋಮವಾರ ಮತ್ತು ಶುಕ್ರವಾರ ಆನ್ಲೈನ್ನಲ್ಲಿ ವಿಚಾರಣೆ ನಡೆಸುವಂತೆ ಎಲ್ಲಾ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸೋಮವಾರ ಸಿಜೆಐ ವಿನಂತಿಸಿದ್ದರು.