ನವದೆಹಲಿ: ದೇಶಾದ್ಯಂತ ತೈಲ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಆಡಳಿತ ಪಕ್ಷವು ಸಾಮಾನ್ಯ ಜನರ ದುಡಿಮೆಯನ್ನು 'ಕಂತುಗಳಲ್ಲಿ ಲೂಟಿ' ಮಾಡುತ್ತಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ದರಗಳು ಶನಿವಾರ ಮತ್ತೆ ಲೀಟರ್ಗೆ 91 ಪೈಸೆವರೆಗೆ ಏರಿಕೆಯಾಗಿದ್ದು, ಇದು ಕಳೆದ 10 ದಿನಗಳಲ್ಲಿ ನಡೆದಿರುವ ಮೂರನೇ ಹೆಚ್ಚಳವಾಗಿದೆ.
ಈ ಬೆಲೆ ಏರಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಖರ್ಗೆ ಅವರು, ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರವಾಗಿ ಕುಸಿದಿದ್ದಾಗಲೂ ಅದರ ಆರ್ಥಿಕ ಲಾಭವನ್ನು ಕೇಂದ್ರ ಸರ್ಕಾರ ದೇಶದ ನಾಗರಿಕರಿಗೆ ವರ್ಗಾಯಿಸದೆ ವಂಚಿಸಿದೆ ಎಂದು ದೂರಿದ್ದಾರೆ.
ಈ ಕುರಿತು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ವೈಫಲ್ಯವೇ ಈ ಪರಿಸ್ಥಿತಿಗೆ ಕಾರಣ ಎಂದು ಟೀಕಿಸಿದ್ದಾರೆ.
ಪೆಟ್ರೋಲ್ ಬೆಲೆ ಈಗ ಮತ್ತೆ 100 ರೂಪಾಯಿ ಗಡಿ ದಾಟಿದೆ ಎಂದು ಆಕ್ರೋಶ ಹೊರಹಾಕಿರುವ ಅವರು, ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಪ್ರತಿದಿನ ಬರೋಬ್ಬರಿ 1,000 ಕೋಟಿ ರೂಪಾಯಿ ಕೇಂದ್ರ ತೆರಿಗೆ ವಿಧಿಸುತ್ತಿದ್ದರೂ ಬಿಜೆಪಿಯ ಹಸಿವು ತೀರುತ್ತಿಲ್ಲ. ಜಾಗತಿಕವಾಗಿ ತೈಲ ಬೆಲೆ ಕಡಿಮೆ ಇದ್ದಾಗ ಇವರು ಜನರಿಗೆ ರಿಯಾಯಿತಿ ನೀಡಲಿಲ್ಲ. ಬದಲಿಗೆ ನಿರಂತರವಾಗಿ ಸುಲಿಗೆ ಮಾಡಿದರು. ಈಗ ಬಿಕ್ಕಟ್ಟು ಎದುರಾದಾಗ ಚುನಾವಣೆಗಳಲ್ಲಿ ಮುಳುಗಿ, ಚುನಾವಣೆ ಮುಗಿದ ಮೇಲೆ ಜನರಿಗೆ ತ್ಯಾಗದ ಪಾಠ ಬೋಧಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ಇದೇ ವೇಳೆ ಭಾರತದಲ್ಲಿ ಇಂಧನ ದರಗಳು ವಿದೇಶಗಳಿಗಿಂತ ಕಡಿಮೆ ಇವೆ ಎಂಬ ಸರ್ಕಾರದ ವಾದವನ್ನು ಖರ್ಗೆ ತಳ್ಳಿಹಾಕಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷದ ಸಂದರ್ಭದಲ್ಲಿ ಜಾಗತಿಕ ಇಂಧನ ಬಿಕ್ಕಟ್ಟಿನಿಂದ ತಮ್ಮ ನಾಗರಿಕರನ್ನು ರಕ್ಷಿಸಲು ವಿಶ್ವದ ಇತರ ದೇಶಗಳು ಕೈಗೊಂಡಿರುವ ಜನಪರ ಕ್ರಮಗಳ ತುಲನಾತ್ಮಕ ವಿವರವನ್ನು ನೀಡಿದ್ದಾರೆ.
ಇಟಲಿ ದೇಶವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿ ಜನರಿಗೆ ಪರಿಹಾರ ನೀಡಿದೆ. ಆಸ್ಟ್ರೇಲಿಯಾ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಮೂಲಕ ನಾಗರಿಕರಿಗೆ ಪೆಟ್ರೋಲ್ ಬೆಲೆಯಲ್ಲಿ ಲೀಟರ್ಗೆ ಸುಮಾರು ರೂ.17 ಕಡಿತಗೊಳಿಸಿದೆ.
ಜರ್ಮನಿ ತೈಲ ಮೇಲಿನ ತೆರಿಗೆಯನ್ನು ಇಳಿಸಿ, ಇಂಧನ ದರವನ್ನು ಲೀಟರ್ಗೆ ರೂ.17 ರಿಂದ ರೂ.19 ರಷ್ಟು ಕಡಿಮೆ ಮಾಡಿದೆ. ಬ್ರಿಟನ್ (UK) ಪ್ರತಿ ಮನೆಗೆ £100 ತೈಲ ಸಹಾಯಧನ ನೀಡಿದ್ದಲ್ಲದೆ, ಇಂಧನ ಮತ್ತು ವಿದ್ಯುತ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ.
ಹಾಗೆಯೇ ಐರ್ಲೆಂಡ್ ದೇಶವು 250 ಮಿಲಿಯನ್ ಯುರೋಗಳ ಪರಿಹಾರ ಪ್ಯಾಕೇಜ್ ಘೋಷಿಸಿ, ಪೆಟ್ರೋಲ್ ಬೆಲೆಯನ್ನು ಸರಿಸುಮಾರು ರೂ.14 ಮತ್ತು ಡೀಸೆಲ್ ಬೆಲೆಯನ್ನು ರೂ.18 ರಷ್ಟು ಇಳಿಸಿದೆ ಎಂದು ವಿವರಿಸಿದ್ದಾರೆ.
ಮೋದಿ ಅವರೇ, ಈ ಕಂತು ಆಧಾರಿತ ಲೂಟಿಯ ಪಾಲು ಯಾರಿಗೆಲ್ಲ ತಲುಪುತ್ತಿದೆ ಎಂದು ದೇಶಕ್ಕೆ ತಿಳಿಸಿ. ಈ ಸರ್ಕಾರದ ನಿಜವಾದ ಬಿಕ್ಕಟ್ಟು ಇರುವುದು ನಾಯಕತ್ವದಲ್ಲಿ. ಇದನ್ನು ದೇಶದ 140 ಕೋಟಿ ಭಾರತೀಯರು ಈಗ ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಜಾಗತಿಕ ಇಂಧನ ದರಗಳು ಏರಿಕೆಯಾಗುತ್ತಿದ್ದು, ದೇಶಿ ತೈಲ ಕಂಪನಿಗಳು ಮೇ 15 ರಿಂದ ಸಾರ್ವಜನಿಕರ ಮೇಲೆ ಇದರ ಹೊರೆಯನ್ನು ವರ್ಗಾಯಿಸಲು ಆರಂಭಿಸಿವೆ.
ಮೇ 15 ರಂದು ಲೀಟರ್ಗೆ ಭರ್ಜರಿ ರೂ.3 ಏರಿಕೆ ಮಾಡಲಾಗಿತ್ತು, ತದನಂತರ ಮೇ 19 ರಂದು 90 ಪೈಸೆ ಹೆಚ್ಚಿಸಲಾಯಿತು. ಶನಿವಾರದ ಏರಿಕೆಯೂ ಸೇರಿದಂತೆ ಕಳೆದ 10 ದಿನಗಳಲ್ಲಿ ಇಂಧನ ದರಗಳು ಒಟ್ಟು ರೂ.5 ರಷ್ಟು ಹೆಚ್ಚಳವಾಗಿದೆ.
ಈ ಬೆಲೆ ಏರಿಕೆಯೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ದರ ರೂ.99.51 ಕ್ಕೆ ಹಾಗೂ ಡೀಸೆಲ್ ದರ ರೂ.92.49 ಕ್ಕೆ ತಲುಪಿದ್ದು, ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಈಗಾಗಲೇ ರೂ.100ರ ಗಡಿ ದಾಟಿ ಸಾರ್ವಜನಿಕರಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.