ನವದೆಹಲಿ: ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಶನಿವಾರ ಸ್ವಯಂ ಘೋಷಿತ ಕಾಕ್ರೋಚ್ ಜನತಾ ಪಕ್ಷ(ಸಿಜೆಪಿ) ನೇತೃತ್ವದ ಆನ್ಲೈನ್ "ಜಿರಳೆ" ಆಂದೋಲನವನ್ನು ಬೆಂಬಲಿಸಿದ್ದು, ನಾನೊಬ್ಬ "ಗೌರವಾನ್ವಿತ ಜಿರಳೆ" ಎಂದು ಹೇಳಿಕೊಂಡಿದ್ದಾರೆ.
ಈ ಆನ್ಲೈನ್ ಆಂದೋಲನವನ್ನು ನಿಗ್ರಹಿಸುವ ಬದಲು ಯುವಜನರು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಸೋನಮ್ ವಾಂಗ್ಚುಕ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಆರಂಭವಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾದ ಕಾಕ್ರೋಚ್ ಜನತಾ ಪಾರ್ಟಿಯ ಬೆಳವಣಿಗೆಯಿಂದ ಆತಂಕಗೊಂಡ ಕೇಂದ್ರ ಸರ್ಕಾರ, ಅದರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ ಅಥವಾ ಹ್ಯಾಕ್ ಮಾಡಲಾಗಿದೆ ಎಂಬ ಆರೋಪಗಳ ನಡುವೆ ಈ ಆಂದೋಲನವು ನಿರುದ್ಯೋಗ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಸಾರ್ವಜನಿಕ ಹೊಣೆಗಾರಿಕೆ ಸೇರಿದಂತೆ ಇತರ ಸಮಸ್ಯೆಗಳನ್ನು ಪ್ರಸ್ತಾಪಿಸಿದೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ವಾಂಗ್ಚುಕ್, ಈ ಅಭಿಯಾನವನ್ನು ಪ್ರಜಾಪ್ರಭುತ್ವದ ಪ್ರತಿಕ್ರಿಯೆಯ ರೂಪವಾಗಿ ನೋಡಬೇಕು ಮತ್ತು ಬೆದರಿಕೆಯಾಗಿ ನೋಡಬಾರದು ಎಂದು ಹೇಳಿದರು. "ಮೊದಲನೆಯದಾಗಿ, ನಾನು ತುಂಬಾ ಪ್ರಭಾವಿತನಾಗಿದ್ದೇನೆ" ಎಂದು ವಾಂಗ್ಚುಕ್ ತಿಳಿಸಿದ್ದಾರೆ.
"ಕೇಂದ್ರ ಸರ್ಕಾರವು ಯುವಕರ ಧ್ವನಿಯನ್ನು ಕೇಳಿಸಿಕೊಳ್ಳಬೇಕು. ಅವರ ಸಂದೇಶವನ್ನು ಪರಿಗಣಿಸಬೇಕು - ಸಂದೇಶವಾಹಕನನ್ನು ಕೊಲ್ಲಬೇಡಿ. ನಾವು ಸಂದೇಶವಾಹಕನನ್ನು ಕೊಂದರೆ, ಸಂದೇಶವು ಕೊನೆಗೊಳ್ಳುವುದಿಲ್ಲ" ಎಂದಿದ್ದಾರೆ.
"ನಾನು ಸಿಜೆಪಿ ಸೇರುವುದಕ್ಕೆ ಅರ್ಹನಲ್ಲ ಎಂದು ಭಾವಿಸುತ್ತೇನೆ - ನಾನು ನಿರುದ್ಯೋಗಿಯೂ ಅಲ್ಲ ಅಥವಾ ಸೋಮಾರಿಯೂ ಅಲ್ಲ. ಆದ್ದರಿಂದ ನಾನು ಸದಸ್ಯನಾಗುವುದಿಲ್ಲ. ಆದರೆ ನಾನು ನನ್ನನ್ನು ಗೌರವಾನ್ವಿತ ಜಿರಳೆ ಎಂದು ಭಾವಿಸುತ್ತೇನೆ" ಎಂದು ವಾಂಗ್ಚುಕ್ ಹೇಳಿದ್ದಾರೆ.
ಸಿಜೆಪಿಯನ್ನು ಪತ್ರಿಕೆಗಳಲ್ಲಿ ಪ್ರಕಟವಾಗುವ ರಾಜಕೀಯ ವಿಡಂಬನೆ ಮತ್ತು ವ್ಯಂಗ್ಯಚಿತ್ರಗಳೊಂದಿಗೆ ಹೋಲಿಕೆ ಮಾಡಿದ ವಾಂಗ್ಚುಕ್, ಹಾಸ್ಯ ಮತ್ತು ಸಂಕೇತಗಳ ಮೂಲಕ ವ್ಯಕ್ತಪಡಿಸಿದ ಭಿನ್ನಾಭಿಪ್ರಾಯವು ಕಾನೂನುಬದ್ಧ ಪ್ರಜಾಪ್ರಭುತ್ವ ಸಾಧನವಾಗಿದೆ ಎಂದು ಹೇಳಿದರು.
"ಪತ್ರಿಕೆಗಳಲ್ಲಿನ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕಾಗಿ ನೀವು ಅವರಿಗೆ ಗುಂಡು ಹೊಡೆಯಲು ಆಗುವುದಿಲ್ಲ. ಏಕೆಂದರೆ ಅವರು ಪ್ರಧಾನಿ, ಗೃಹ ಸಚಿವರು ಅಥವಾ ರಕ್ಷಣಾ ಸಚಿವರ ವ್ಯಂಗ್ಯಚಿತ್ರವನ್ನು ಬಿಡಿಸುತ್ತಾರೆ. ಅದೇ ರೀತಿ, ಇದು ವಿಡಂಬನೆಯೂ ಆಗಿದೆ. ಇದನ್ನು ಪ್ರತಿಕ್ರಿಯೆಯಾಗಿ ನೋಡಿ" ಎಂದು ಅವರು ಹೇಳಿದರು.