ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು “ಜಗತ್ತಿನಾದ್ಯಂತ ಇಸ್ರೇಲ್ ವಿರುದ್ಧ ವಾತಾವರಣ ನಿರ್ಮಾಣವಾಗಿದ್ದರೂ ಭಾರತ ನಮ್ಮ ಜೊತೆ ನಿಂತಿದೆ” ಎಂದು ಹೇಳಿದ್ದು, ಈ ಹೇಳಿಕೆ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಕುರಿತ ನಿಲುವನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್, “ಇದು ಭಾರತದ ನಿಲುವಲ್ಲ, ಬಿಜೆಪಿ ನಿಲುವು ಎಂದು ವಾಗ್ದಾಳಿ ನಡೆಸಿದೆ.
ಇಸ್ರೇಲ್ ಕುರಿತ ನಿಲುವನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, “ಅತಿಯಾದ ನೈತಿಕ ಭಯ” ಪ್ರದರ್ಶಿಸುತ್ತಿದ್ದಾರೆಂದು ಕಿಡಿಕಾರಿದ್ದಾರೆ. ಜೊತೆಗೆ ಮೋದಿ ಅವರ ನಿಲುವು ಭಾರತದ ಮೂಲ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, “ನೆತನ್ಯಾಹು ಅವರ ಅತಿದೊಡ್ಡ ಬೆಂಬಲಿಗರಾಗಿ ಮೋದಿ ಕಾಣಿಸಿಕೊಂಡಿದ್ದಾರೆ. ಇಸ್ರೇಲ್ ‘ಮೊದಾನಿ’ ಸಮೂಹದೊಳಗೆ ಬೆರೆತು ಹೋಗಿದೆ. ಮೋದಿ ಅವರ ನಿಲುವು ಭಾರತದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಇಸ್ರೇಲ್-ಇರಾನ್ ಉದ್ವಿಗ್ನತೆ, ಗಾಜಾ ಯುದ್ಧ ಹಾಗೂ ಲೆಬನಾನ್ ಮೇಲಿನ ದಾಳಿಗಳ ವಿಚಾರದಲ್ಲಿ ಮೋದಿ ಮೌನ ವಹಿಸಿರುವುದನ್ನೂ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
ಇರಾನ್ ನಾಯಕರ ಹತ್ಯೆ, ಗಾಜಾದಲ್ಲಿನ ಮಾನವೀಯ ಸಂಕಷ್ಟ ಹಾಗೂ ಲೆಬನಾನ್ ಮೇಲಿನ ಬಾಂಬ್ ದಾಳಿಗಳನ್ನು ಮೋದಿ ಎಂದಿಗೂ ಖಂಡಿಸಿಲ್ಲ ಎಂದು ಕಿಡಿಕಾರಿದ್ದಾರೆ.
ನೆತನ್ಯಾಹು ಹೇಳಿಕೆ ಭಾರತ ದೇಶದ ಸಮಗ್ರ ಅಭಿಪ್ರಾಯವನ್ನು ಪ್ರತಿಬಿಂಬಿಸುವುದಿಲ್ಲ. ಅದು ಮೋದಿಯವರ ಬಿಜೆಪಿಯ ಅಭಿಪ್ರಾಯ ಮಾತ್ರ ಎಂದು ಟೀಕಿಸಿದ್ದಾರೆ.
ಪಶ್ಚಿಮ ತೀರದಲ್ಲಿ ಪ್ಯಾಲೆಸ್ತೀನಿಯರ ಸ್ಥಳಾಂತರ, ನಾಗರಿಕ ಹಕ್ಕುಗಳ ನಿರ್ಬಂಧ ಮತ್ತು ಗಾಜಾದಲ್ಲಿನ ಸೈನಿಕ ಕಾರ್ಯಾಚರಣೆಗಳ ಬಗ್ಗೆ ಭಾರತ ಸರ್ಕಾರ ಮೌನವಾಗಿದೆ ಎಂಬ ಆರೋಪವನ್ನೂ ಕಾಂಗ್ರೆಸ್ ಮಾಡಿದೆ.
ವೆಸ್ಟ್ ಬ್ಯಾಂಕ್ನಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನವೊಂದರಲ್ಲಿ ಮಾತನಾಡಿದ್ದ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು, ಇಂದು ಜಗತ್ತಿನ ಬಹುತೇಕ ಭಾಗಗಳಲ್ಲಿ ನಾವು ಪ್ರತ್ಯೇಕತೆಯನ್ನು ಎದುರಿಸುತ್ತಿದ್ದೇವೆ. ಆದರೆ ಭಾರತದಲ್ಲಿ ಅಂತಹ ಯಾವುದೇ ಪರಿಸ್ಥಿತಿ ಇಲ್ಲ. ಅಲ್ಲಿ ಇಸ್ರೇಲ್ ಕುರಿತು ಸಂಪೂರ್ಣವಾಗಿ ಹುಚ್ಚರಂತೆ ಪ್ರೀತಿಸುವ ಜನರಿದ್ದಾರೆ, ಅದು ನಿಜಕ್ಕೂ ಅದ್ಭುತ ಎಂದು ಹೇಳಿದ್ದರು.