ಚೆನ್ನೈ: ತಮಿಳು ಕವಿ-ತತ್ವಜ್ಞಾನಿ ತಿರುವಳ್ಳುವರ್ ಅವರನ್ನು ಕೇಸರಿ ಉಡುಪಿನಲ್ಲಿ ಚಿತ್ರಿಸಿರುವುದಕ್ಕೆ ಆಡಳಿತಾರೂಢ ಟಿವಿಕೆ ಮತ್ತು ವಿರೋಧ ಪಕ್ಷ ಡಿಎಂಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಇದು ಅಧಿಕೃತವಾಗಿ ಗುರುತಿಸಲ್ಪಟ್ಟ ಬಿಳಿ ವಸ್ತ್ರದಲ್ಲಿರುವ ತಿರುವಳ್ಳುವರ್ ಅವರ ಚಿತ್ರಕ್ಕಿಂತ ಭಿನ್ನವಾಗಿದೆ.
ಮೇ 30 ರಂದು 'ವೈಕಾಸಿ ಅನುಷಂ' ಆಚರಣೆಯ ಸಂದರ್ಭದಲ್ಲಿ ಲೋಕ ಭವನದಲ್ಲಿ ಕೇಸರಿ ಉಡುಪಿನಲ್ಲಿ ಚಿತ್ರಿಸಲಾದ ತಿರುವಳ್ಳುವರ್ ಅವರ ಭಾವಚಿತ್ರಕ್ಕೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಗೌರವ ಸಲ್ಲಿಸಿದ್ದು, ಇದಕ್ಕೆ ಆಡಳಿತ ಹಾಗೂ ಪ್ರತಿಪಕ್ಷ ಎರಡೂ ತೀವ್ರ ವಿರೋಧ ವ್ಯಕ್ತಪಡಿಸಿವೆ.
ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿದ ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಅರುಣ್ರಾಜ್, ಕವಿಯನ್ನು ಕೇಸರಿ ಉಡುಪಿನಲ್ಲಿ ಚಿತ್ರಿಸಿರುವುದನ್ನು ಖಂಡಿಸಿದರು. ಕವಿ, ಸಂತ ತಿರುವಳ್ಳುವರ್ ಅವರು ಜಾತಿ ಹಾಗೂ ಧರ್ಮವನ್ನು ಮೀರಿದವರು ಎಂದು ಹೇಳಿದ್ದಾರೆ.
"ಲೋಕ ಭವನ ಅಥವಾ ಯಾವುದೇ ಸರ್ಕಾರ ಮತ್ತು ಸಾರ್ವಜನಿಕ ಸ್ಥಳದಲ್ಲಿ ತಿರುವಳ್ಳುವರ್ ಅವರನ್ನು ಕೇಸರಿ ಉಡುಪಿನಲ್ಲಿ ಚಿತ್ರಿಸುವುದು ಮೊದಲ ತಪ್ಪು. ತಿರುವಳ್ಳುವರ್ ಯಾವುದೇ ಧರ್ಮ, ಜಾತಿ, ಜನಾಂಗ ಅಥವಾ ರಾಷ್ಟ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಅವರ 'ತಿರುಕ್ಕುರಲ್' ಎಲ್ಲಾ ಮಾನವೀಯತೆಗೆ ಸಾಮಾನ್ಯ ಜೀವನ ಸಂಹಿತೆಯನ್ನು ಒದಗಿಸುತ್ತದೆ" ಎಂದು ಡಾ. ಅರುಣ್ರಾಜ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಿದ್ದಾರೆ.