ಪುಣೆ: ಆಸ್ತಿ ಮಾರಾಟ ಮಾಡಿದ್ದಕ್ಕೆ ಆಕ್ರೋಶಗೊಂಡ ಮಕ್ಕಳು, ನಡು ರಸ್ತೆಯಲ್ಲೇ ಹೆತ್ತ ತಂದೆ, ತಾಯಿಗೆ ನಡುರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿಸಿದ ಅಮಾನವೀಯ ಘಟನೆ ಪುಣೆಯ ಇಂದಾಪುರದಲ್ಲಿ ನಡೆದಿದೆ.
ಇಬ್ಬರು ಸಹೋದರರು ತಮ್ಮ ವೃದ್ಧ ಪೋಷಕರ ಮೇಲೆ ನಡುರಸ್ತೆಯಲ್ಲೇ ಮರದ ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
65 ವರ್ಷದ ತುಕಾರಾಂ ಕಿಸಾನ್ ರಾವತ್ ಮತ್ತು ಅವರ ಪತ್ನಿ ಅಂಜನಾ ಅವರ ಮೇಲೆ ಅವರ ಪುತ್ರರಾದ ಸಂಜಯ್ ಮತ್ತು ರಾಜೇಂದ್ರ ರಾವತ್ ಅವರು ಹಲ್ಲೆ ನಡೆಸಿದ್ದಾರೆ.
ಆಗಸ್ಟ್ 30ರ ಸಂಜೆ ದಂಪತಿ ವಾಕಿಂಗ್ಗೆಂದು ಹೊರಟ ವೇಳೆ ಅವರನ್ನು ತಡೆದ ಮಕ್ಕಳು, ಹಿಗ್ಗಾಮುಗ್ಗ ಥಳಿಸುತ್ತಿರುವ ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ನೀವು ಆಸ್ತಿಯನ್ನು ಯಾರನ್ನು ಕೇಳಿ ಮಾರಾಟ ಮಾಡಿದ್ದೀರಿ, ವಾಪಸ್ ಪಡೆದುಕೊಳ್ಳಿ ಎಂದು ದೊಣ್ಣೆಗಳಿಂದ ತಂದೆ ಮೇಲೆ ಏಕಾಏಕಿ ದಾಳಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂಜನಾ ಅವರಿಗೆ ಸೇರಿದ ಭೂಮಿಯನ್ನು ಮಾರಾಟ ಮಾಡುವ ತಂದೆಯ ನಿರ್ಧಾರದಿಂದ ಮಕ್ಕಳಿಬ್ಬರು ತೀವ್ರ ಆಕ್ರೋಶಗೊಂಡಿದ್ದರು. ಈ ಸಂಬಂಧ ಮಕ್ಕಳು ಮತ್ತು ಪೋಷಕರ ನಡುವೆ ಜಗಳ ನಡೆದಿದೆ. ಆಸ್ತಿಯನ್ನು ವಾಪಸ್ ಪಡೆಯುವಂತೆ ಹೇಳಿದರೂ ತಮ್ಮ ಮಾತು ಕೇಳದ ಪೋಷಕರನ್ನು ಥಳಿಸಿದ್ದಾರೆ ಎನ್ನಲಾಗಿದೆ.
ದೂರು ದಾಖಲು
ಮಕ್ಕಳು ತಮ್ಮನ್ನು ಥಳಿಸಿದ ಬಗ್ಗೆ ತುಕಾರಾಮ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಪ್ರಕಾರ, ಮಕ್ಕಳು ಕೋಲಿನಿಂದ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದಾಗ ನನ್ನ ಮೇಲೂ ಹಲ್ಲೆ ನಡೆಸಿದ್ದಾರೆ. ಪರಿಣಾಮ ಬೆನ್ನು, ಮುಖ ಮತ್ತು ಭುಜ ಸೇರಿದಂತೆ ದೇಹದ ಹಲವು ಭಾಗಕ್ಕೆ ಗಾಯವಾಗಿದೆ ಎಂದು ಹೇಳಿದ್ದಾರೆ.
ತುಕಾರಾಮ್ ಅವರ ದೂರಿನ ಮೇರೆಗೆ ಇಬ್ಬರು ಮಕ್ಕಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.