ಕೋಲ್ಕತ್ತಾ: ಸೇವಾಶ್ರಯ (ವೈದ್ಯಕೀಯ ಶಿಬಿರ) ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿಗೆ ಕೋಲ್ಕತ್ತಾ ಹೈಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದಲ್ಲಿ ವಿಷ್ಣುಪುರ ಪೊಲೀಸ್ ಠಾಣೆಯಲ್ಲಿ ಎರಡು ಮತ್ತು ರವೀಂದ್ರನಗರ ಪೊಲೀಸ್ ಠಾಣೆಯಲ್ಲಿ ಒಂದು ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಅವರು, ಅಭಿಷೇಕ್ ವಿರುದ್ಧ ಬಂಧನ ಸೇರಿದಂತೆ ಯಾವುದೇ ಬಲವಂತದ ಕ್ರಮಕ್ಕೆ ತಡೆ ನೀಡಿದ್ದುಈ ರಕ್ಷಣೆ ನವೆಂಬರ್ 30ರವರೆಗೆ ಮುಂದುವರೆಯಲಿದೆ. ಆದಾಗ್ಯೂ, ನ್ಯಾಯಾಲಯವು ಪೊಲೀಸರಿಗೆ ತನಿಖೆಯನ್ನು ಮುಂದುವರಿಸಲು ಅವಕಾಶ ನೀಡಿದೆ.
ವಿಚಾರಣೆಗೆ ಕರೆಸಬೇಕಾದರೆ ಕನಿಷ್ಠ 48 ಗಂಟೆಗಳ ಮೊದಲು ನೋಟಿಸ್ ನೀಡಬೇಕು ಎಂದು ಕೋರ್ಟ್ ಹೇಳಿದ್ದು ಅಭಿಷೇಕ್ ತನಿಖೆಗೆ ಸಹಕರಿಸುವಂತೆ ಸೂಚಿಸಿದೆ. ಅಗತ್ಯವಿದ್ದರೆ ಸೆಪ್ಟೆಂಬರ್ 26 ರ ನಂತರ ಅವರನ್ನು ವಿಚಾರಣೆಗೆ ಕರೆಸಬಹುದು ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 23ರಂದು ನಡೆಯಲಿದೆ. ಅಭಿಷೇಕ್ ಅವರ ವಕೀಲರು ತಮ್ಮ ಕಕ್ಷಿದಾರರು ಸೆಪ್ಟೆಂಬರ್ 3 ರಂದು ಕಣ್ಣಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿದ್ದಾರೆ. ಸೆಪ್ಟೆಂಬರ್ 22ರಂದು ಹಿಂತಿರುಗುತ್ತಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಮಾಹಿತಿಯ ಆಧಾರದ ಮೇಲೆ, ಅಗತ್ಯವಿದ್ದರೆ ಸೆಪ್ಟೆಂಬರ್ 26 ರ ನಂತರ ಅವರನ್ನು ಸಮನ್ಸ್ ಮಾಡಲು ನ್ಯಾಯಾಲಯ ಒಪ್ಪಿಕೊಂಡಿದೆ. ವಿಚಾರಣೆಯ ಸಮಯದಲ್ಲಿ, ದೂರುದಾರರ ಪುನರಾವರ್ತಿತ ಆರೋಪಗಳ ಬಗ್ಗೆ ನ್ಯಾಯಾಲಯವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮೇ 21 ರಿಂದ ನ್ಯಾಯಾಲಯವು ಅದೇ ದೂರುಗಳನ್ನು ಕೇಳಲು ಆಯಾಸಗೊಂಡಿದೆ ಎಂದು ನ್ಯಾಯಮೂರ್ತಿ ಸೌಗತ ಭಟ್ಟಾಚಾರ್ಯ ಹೇಳಿದರು.
ನ್ಯಾಯಾಲಯವು ಪ್ರಾಥಮಿಕ ಆಧಾರವಿಲ್ಲದ ಕನಿಷ್ಠ ಮೂರು ಎಫ್ಐಆರ್ಗಳನ್ನು ಪರಿಶೀಲಿಸಿದೆ. ನ್ಯಾಯಾಲಯದ ಅನುಮತಿಯಿಲ್ಲದೆ ಅಭಿಷೇಕ್ ವಿರುದ್ಧ ಯಾವುದೇ ಹೊಸ ಎಫ್ಐಆರ್ಗಳನ್ನು ದಾಖಲಿಸಬಾರದು, ಇಲ್ಲದಿದ್ದರೆ ನ್ಯಾಯಾಲಯವು ಈ ನಿಟ್ಟಿನಲ್ಲಿ ಆದೇಶವನ್ನು ನೀಡಬೇಕಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದರು.