ಚೆನ್ನೈ: ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಕಾರಣರಾದ ಮಹಿಳೆಯರ ವಿರುದ್ಧದ ನಿಂದನಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ, ನನ್ನ ರಾಜಕೀಯ ಗೆಲುವಿಗೆ ಮಹಿಳೆಯರೇ ಪ್ರಮುಖ ಕಾರಣ. ಮಹಿಳೆಯರ ವಿರುದ್ಧದ ಯಾವುದೇ ನಿಂದನಾತ್ಮಕ ಭಾಷೆಯನ್ನು ನಾನು ಸಹಿಸುವುದಿಲ್ಲ. ಕಠಿಣ ರಾಜಕೀಯ ಟೀಕೆಗಳಿರಬಹುದು, ಆದರೆ ಮಹಿಳೆಯರ ವಿರುದ್ಧ ಯಾವುದೇ ಅವಹೇಳನಕಾರಿ ಹೇಳಿಕೆಗಳು ಇರಬಾರದು ಎಂದರು. ಆದಾಗ್ಯೂ ತಮ್ಮ ಹೇಳಿಕೆಯಲ್ಲಿ ಯಾರ ಹೆಸರನ್ನೂ ಪ್ರಸ್ತಾಪಿಸಲಿಲ್ಲ.
ವಿಜಯ್ ಅವರ ಆಪ್ತ ಗೆಳತಿ ಎನ್ನಲಾದ ನಟಿ ತ್ರಿಶಾ ಕೃಷ್ಣನ್ ಅವರ ವಿರುದ್ಧ ಡಿಎಂಕೆ ಹಿರಿಯ ನಾಯಕ ಉದಯನಿಧಿ ಸ್ಟಾಲಿನ್ ಆಕ್ಷೇಪಾರ್ಹ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ವಿಜಯ್ ಈ ಪ್ರತಿಕ್ರಿಯೆ ನೀಡಿದ್ದಾರೆ. ರಾಜಕೀಯ ನಾಯಕರು ಮತ್ತು ಇತರರು ವೈಯಕ್ತಿಕ ದಾಳಿಗಳಿಂದ, ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸುವ ದಾಳಿಗಳಿಂದ ದೂರವಿರಬೇಕು ಎಂದು ವಿಜಯ್ ಒತ್ತಾಯಿಸಿದರು.
ಮಹಿಳೆಯರ ವಿರುದ್ಧ ವೈಯಕ್ತಿಕ ದಾಳಿಗಳನ್ನು ಮಾಡಬೇಡಿ. ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಲ್ಲಿ ನಿಂದನೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಮಹಿಳೆಯರ ವಿರುದ್ಧ ಕೆಲವರು ದ್ವಂದ್ವಾರ್ಥದ ಭಾಷೆಯನ್ನು ಹೇಗೆ ಬಳಸುತ್ತಿದ್ದಾರೆ ಎಂಬುದನ್ನು ಜನರು ಗಮನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. 1989ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಆದ "ಅಪಮಾನ"ವನ್ನೂ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.
ಉದಯನಿಧಿ ವಿವಾದದಿಂದ ರಾಜಕೀಯ ಸಂಘರ್ಷ: ಕಳೆದ ತಿಂಗಳು ಕಾವೇರಿ ನದಿ ನೀರು ಹಂಚಿಕೆ ವಿವಾದದ ಕುರಿತಾದ ಪ್ರತಿಭಟನೆ ವೇಳೆ ನಟಿ ತ್ರಿಶಾ ಕೃಷ್ಣನ್ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಉದಯನಿಧಿ ಸ್ಟಾಲಿನ್, ಡಬಲ್ ಮೀನಿಂಗ್ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
ವಿಜಯ್ ಅವರ ಆಪ್ತ ಸ್ನೇಹಿತೆಯಾಗಿರುವ ನಟಿ ತ್ರಿಶಾ ಅವರನ್ನು, ಪ್ರತಿಪಕ್ಷ ಡಿಎಂಕೆ ನಾಯಕರು ಪದೇ ಪದೇ ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಅವರಿಬ್ಬರ ಸಂಬಂಧದ ಬಗ್ಗೆ ಕೀಳು ಮಟ್ಟದ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಟಿವಿಕೆ ಮುಖ್ಯಸ್ಥರು ಮಹಿಳಾ ನಿಂದಕರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.