ಪಣಜಿ: ಮುಂಬೈ-ಗೋವಾ ಹೆದ್ದಾರಿ ವಿಸ್ತರಣೆಯಲ್ಲಿನ ದೀರ್ಘಕಾಲದ ವಿಳಂಬದ ಬಗ್ಗೆ ನನಗೆ ನಾಚಿಕೆಯಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ
ಬುಧವಾರ ಪಣಜಿ ಸಮೀಪದ ಪೋರ್ವೊರಿಮ್ನಲ್ಲಿ ಆರು ಪಥದ ಎತ್ತರಿಸಿದ ರಸ್ತೆ ಕಾರಿಡಾರ್ ಉದ್ಘಾಟಿಸಿದ ನಂತರ ಮಾತನಾಡಿದ ಗಡ್ಕರಿ, ಹೆದ್ದಾರಿ ಪೂರ್ಣಗೊಳ್ಳುವಲ್ಲಿನ ವಿಳಂಬವಾಗಿದೆ. ಹೀಗಾಗಿ ಯೋಜನೆ ಅಂತಿಮವಾಗಿ ಪೂರ್ಣಗೊಂಡಾಗ ಅದರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಮುಂಬೈ-ಗೋವಾ ಹೆದ್ದಾರಿ (ವಿಸ್ತರಣೆ) ಕಾಮಗಾರಿ ಇಷ್ಟು ವಿಳಂಬವಾಗಿರುವುದಕ್ಕೆ ನನಗೆ ಮುಜುಗರವಾಗಿದ್ದರಿಂದ, ಅದರ ಉದ್ಘಾಟನೆಗೆ ಬರುವುದಿಲ್ಲ ಎಂದು ನಾನು (ಈಗಾಗಲೇ) ನಿರ್ಧರಿಸಿದ್ದೆ ಎಂದು ಅವರು ಹೇಳಿದರು. ಈ ವಿಷಯದ ಕುರಿತು ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಮತ್ತು ಅಕ್ಟೋಬರ್ನಲ್ಲಿ ತಾವು ಸ್ವತಃ ಹೆದ್ದಾರಿಯನ್ನು ಪರಿಶೀಲಿಸುವುದಾಗಿ ಕೇಂದ್ರ ಸಚಿವರು ತಿಳಿಸಿದರು.
ನಾನು ಅಕ್ಟೋಬರ್ನಲ್ಲಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿ, ರಸ್ತೆ ಮಾರ್ಗವಾಗಿ ಗೋವಾಗೆ ಪ್ರಯಾಣಿಸುವ ಮೂಲಕ ಹೆದ್ದಾರಿಯನ್ನು ಖುದ್ದಾಗಿ ಪರಿಶೀಲಿಸುತ್ತೇನೆ ಮತ್ತು ಪ್ರಯಾಣಿಕರಿಗೆ ಪ್ರಯಾಣವು ಅನುಕೂಲಕರವಾಗಿದೆಯೇ ಎಂದು ಮೌಲ್ಯಮಾಪನ ಮಾಡುತ್ತೇನೆ," ಎಂದು ಅವರು ಹೇಳಿದರು.
ಮೂಲಸೌಕರ್ಯ ಯೋಜನೆಗಳ ವಿಳಂಬ ಮತ್ತು ಕಳಪೆ ಅನುಷ್ಠಾನಕ್ಕೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಷಯದಲ್ಲಿ "ದಾಖಲೆ ನಿರ್ಮಿಸಲು" ಬಯಸುವುದಾಗಿಯೂ ಗಡ್ಕರಿ ಹೇಳಿದರು.
"ಈಗ ನಾನು ಒಂದು ವರ್ಷದೊಳಗೆ ಗರಿಷ್ಠ ಸಂಖ್ಯೆಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವ ಹಾಗೂ ಅಧಿಕಾರಿಗಳನ್ನು ಅಮಾನತುಗೊಳಿಸುವ ದಾಖಲೆಯನ್ನು ನಿರ್ಮಿಸಲು ಬಯಸುತ್ತೇನೆ ಎಂದು ಅವರು ಹೇಳಿದರು.
440 ಕಿ.ಮೀ ಉದ್ದದ ಮುಂಬೈ-ಗೋವಾ ಹೆದ್ದಾರಿ ವಿಸ್ತರಣೆಯು ವರ್ಷಗಳ ಕೆಲಸ ಮತ್ತು ಭಾರಿ ವೆಚ್ಚದ ಹೊರತಾಗಿಯೂ ಪದೇ ಪದೇ ವಿಳಂಬವನ್ನು ಎದುರಿಸಿದೆ; ಇತ್ತೀಚೆಗೆ ಮೇಲ್ದರ್ಜೆಗೇರಿಸಲಾದ ರಸ್ತೆಯ ಕೆಲವು ಭಾಗಗಳಲ್ಲಿ ಮೊದಲ ಮಳೆಗಾಲದ ಮಳೆಯ ನಂತರ ಗುಂಡಿಗಳು ಬಿದ್ದಿವೆ ಮತ್ತು ಮೇಲ್ಮೈಗೆ ಹಾನಿಯಾಗಿದೆ.
ಮೇ ತಿಂಗಳಲ್ಲಿ ಖಾರ್ಪಡಾ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಣೆ ಪ್ರಾರಂಭವಾಗಿದ್ದರೂ, ಹೆದ್ದಾರಿಯಲ್ಲಿ ವಾಹನಗಳ ದಾರಿ ಬದಲಾವಣೆ (ಡೈವರ್ಶನ್), ನೀರು ನಿಲ್ಲುವಿಕೆ, ದುರಸ್ತಿ ಕಾರ್ಯಗಳು ಮತ್ತು ಸಂಚಾರ ದಟ್ಟಣೆ ಮುಂದುವರಿದಿದೆ. 2021ರಲ್ಲಿ ಕನ್ನಾಲಾ ಪ್ರಾಣಿಧಾಮದ ಬಳಿ ನಿರ್ಮಿಸಲಾಗಿದ್ದ ಮಂಗಗಳ ಮೇಲ್ಸೇತುವೆಯೂ ಕುಸಿದುಬಿದ್ದಿದ್ದು, ಈ ಮಾರ್ಗದಲ್ಲಿ ಮತ್ತೊಂದು ಸುರಕ್ಷತಾ ಆತಂಕವನ್ನು ಹುಟ್ಟುಹಾಕಿದೆ.