ಮೊಬೈಲ್‌ ಟಾರ್ಚ್‌ ಬೆಳಕಲ್ಲೇ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ! 
ದೇಶ

ಆಪರೇಷನ್‌ ನಡೆಯುತ್ತಿದ್ದಾಗಲೇ ವಿದ್ಯುತ್‌ ಕಡಿತ; ಮೊಬೈಲ್‌ ಟಾರ್ಚ್‌ ಬೆಳಕಲ್ಲೇ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ! ಬಿಹಾರ ಆಸ್ಪತ್ರೆ ಅವ್ಯವಸ್ಥೆ!

ಮೂಲಗಳ ಪ್ರಕಾರ ಪೂಜಾ ಕುಮಾರಿ ಮತ್ತು ಅಂಜನಿ ಕುಮಾರಿ ಎಂಬ ಇಬ್ಬರು ಗರ್ಭಿಣಿಯರನ್ನು ಹೆರಿಗೆ ವಾರ್ಡ್‌ನಿಂದ ಆಪರೇಷನ್‌ ಥಿಯೇಟರ್‌ಗೆ ಸ್ಥಳಾಂತರಿಸಲಾಗಿತ್ತು.

ಪಾಟ್ನಾ: ಆಪರೇಷನ್‌ ಥಿಯೇಟರ್‌ನಲ್ಲಿ ವಿದ್ಯುತ್‌ ಕಡಿತಗೊಂಡ ಪರಿಣಾಮ, ಬಿಹಾರದ ಜಮುಯಿ ಸದರ್‌ ಆಸ್ಪತ್ರೆಯಲ್ಲಿ ಇಬ್ಬರು ಗರ್ಭಿಣಿಯರಿಗೆ ಮೊಬೈಲ್‌ ಫ್ಲ್ಯಾಶ್‌ಲೈಟ್‌ ಹಾಗೂ ಟಾರ್ಚ್‌ ಬೆಳಕಿನಲ್ಲೇ ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಸುಮಾರು 45 ನಿಮಿಷಗಳ ಕಾಲ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಪೂಜಾ ಕುಮಾರಿ ಮತ್ತು ಅಂಜನಿ ಕುಮಾರಿ ಎಂಬ ಇಬ್ಬರು ಗರ್ಭಿಣಿಯರನ್ನು ಹೆರಿಗೆ ವಾರ್ಡ್‌ನಿಂದ ಆಪರೇಷನ್‌ ಥಿಯೇಟರ್‌ಗೆ ಸ್ಥಳಾಂತರಿಸಲಾಗಿತ್ತು. ವಿದ್ಯುತ್‌ ಕಡಿತಗೊಳ್ಳುವ ವೇಳೆಗೆ ಇಬ್ಬರ ಶಸ್ತ್ರಚಿಕಿತ್ಸೆಯೂ ಆರಂಭವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ವಿದ್ಯುತ್‌ ಕಡಿತದ ಬಳಿಕ ಜನರೇಟರ್‌ನಿಂದ ತಕ್ಷಣವೇ ಪರ್ಯಾಯ ವಿದ್ಯುತ್‌ ಪೂರೈಕೆ ದೊರೆಯಲಿಲ್ಲ. ಹೀಗಾಗಿ ವೈದ್ಯಕೀಯ ತಂಡವು ಟಾರ್ಚ್‌ಗಳು ಮತ್ತು ಮೊಬೈಲ್‌ ಫೋನ್‌ಗಳ ಫ್ಲ್ಯಾಶ್‌ಲೈಟ್‌ಗಳ ನೆರವಿನಿಂದ ಶಸ್ತ್ರಚಿಕಿತ್ಸೆ ಮುಂದುವರಿಸಿದೆ ಎಂದು ಮೂಲಗಳು ತಿಳಿಸಿವೆ.

ಶಸ್ತ್ರಚಿಕಿತ್ಸೆಯಲ್ಲಿ ಭಾಗಿಯಾಗಿದ್ದ ವೈದ್ಯರಾದ ಡಾ. ಶಾಲಿನಿ ಕುಮಾರಿ, ಡಾ. ರಘುನಂದನ್‌ ಹಾಗೂ ಆಪರೇಷನ್ ಥಿಯೇಟರ್ ಸಹಾಯಕ ಅಮಿತ್‌ ಕುಮಾರ್‌ ಅವರು ಘಟನೆ ಕುರಿತು ಸಿವಿಲ್‌ ಸರ್ಜನ್‌ ಮತ್ತು ಆಸ್ಪತ್ರೆಯ ಅಧೀಕ್ಷಕರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ವಿಡಿಯೋ ವೈರಲ್‌

ಶಸ್ತ್ರಚಿಕಿತ್ಸೆಯೊಂದನ್ನು ಮೊಬೈಲ್‌ ಫೋನ್‌ ಬೆಳಕಿನಲ್ಲಿ ನಡೆಸುತ್ತಿರುವ ದೃಶ್ಯಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ, ಆಪರೇಷನ್‌ ಥಿಯೇಟರ್‌ನಲ್ಲಿ ಬಹಳ ಸಮಯದಿಂದ ವಿದ್ಯುತ್‌ ಇಲ್ಲದಿರುವ ಬಗ್ಗೆ ವ್ಯಕ್ತಿಯೊಬ್ಬರು ಮಾತನಾಡುವುದು ಕೇಳಿಸುತ್ತದೆ. ಹಿರಿಯ ಅಧಿಕಾರಿಗಳಿಗೆ ಸಮಸ್ಯೆ ತಿಳಿಸಿದರೂ ಪರಿಹಾರವಾಗಿಲ್ಲ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ಮತ್ತೊಂದೆಡೆ, ವೈದ್ಯರಿಗೆ ನೆರವಾಗಲು ನರ್ಸ್‌ವೊಬ್ಬರು ಶಸ್ತ್ರಚಿಕಿತ್ಸೆ ನಡೆಯುತ್ತಿದ್ದ ಸ್ಥಳದತ್ತ ಮೊಬೈಲ್‌ ಫ್ಲ್ಯಾಶ್‌ಲೈಟ್‌ ಹಿಡಿದಿರುವುದು ದೃಶ್ಯಗಳಲ್ಲಿ ಕಂಡುಬರುತ್ತದೆ.

ಹಿಂದೆಯೂ ಇದೇ ಸಮಸ್ಯೆ ಉಂಟಾಗಿತ್ತು ಎಂಬ ಆರೋಪ

ಆಸ್ಪತ್ರೆಯ ಆಂತರಿಕ ಗುಂಪಿನಲ್ಲಿಯೂ ವೈದ್ಯರು ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಆಸ್ಪತ್ರೆಯಲ್ಲಿ ಇದೇ ರೀತಿಯ ವಿದ್ಯುತ್‌ ಕಡಿತ ಸಂಭವಿಸಿತ್ತು. ವಿದ್ಯುತ್‌ ವ್ಯತ್ಯಯದ ವೇಳೆ ಮೊಬೈಲ್‌ ಫ್ಲ್ಯಾಶ್‌ಲೈಟ್‌ ಬಳಸಿ ಶಸ್ತ್ರಚಿಕಿತ್ಸೆ ನಡೆಸಿದ ಘಟನೆಗಳು ನಡೆದಿವೆ ಎಂದು ಕೆಲ ವೈದ್ಯರು ಆರೋಪಿಸಿದ್ದಾರೆ.

ಆದರೆ, ಆಸ್ಪತ್ರೆಯ ವ್ಯವಸ್ಥಾಪಕ ರಮೇಶ್‌ ಪಾಂಡೆ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ರೀತಿಯ ಯಾವುದೇ ಘಟನೆ ಹಿಂದೆ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉನ್ನತ ಮಟ್ಟದ ತನಿಖೆ ಆರಂಭ

ಘಟನೆ ಕುರಿತು ಆಸ್ಪತ್ರೆಯ ಆಡಳಿತಕ್ಕೆ ಮಾಹಿತಿ ದೊರೆತಿದ್ದು, ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದು ಜಮುಯಿ ಸದರ್‌ ಆಸ್ಪತ್ರೆಯ ಉಪ ಅಧೀಕ್ಷಕ ಡಾ. ಥಾನೇಶ್‌ ಕುಮಾರ್‌ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಪದೇಪದೇ ವಿದ್ಯುತ್‌ ಕಡಿತ ಹಾಗೂ ಪರ್ಯಾಯ ವಿದ್ಯುತ್‌ ಪೂರೈಕೆ ವ್ಯವಸ್ಥೆ ವಿಫಲವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಈ ಘಟನೆ ಆಸ್ಪತ್ರೆಯ ಆಡಳಿತ ವ್ಯವಸ್ಥೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಎಲ್ಲೇ ಗಣಪತಿ ಹಬ್ಬಕ್ಕೆ ತೊಂದರೆ ಆದರೂ ನಾನು ಬರ್ತೀನಿ: ಹಿಂದೂಗಳ ತಂಟೆಗೆ ಹೋದರೆ ಹುಷಾರ್: ಸರ್ಕಾರಕ್ಕೆ ಅಶೋಕ್ ವಾರ್ನಿಂಗ್

ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ ಭೀತಿ: ಏಕಾಏಕಿ ವಾಲಿದ ನಾಲ್ಕಂತಸ್ತಿನ ಕಟ್ಟಡ, ನೆಲಸಮಗೊಳಿಸಲು MCD ಸೂಚನೆ

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

BRICS summit 2026: ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣ ವಿರುದ್ಧ ಪ್ರಧಾನಿ ವಿರುದ್ಧ ಮೋದಿ ಎಚ್ಚರಿಕೆ! Video

‘ಹೂಡಿಕೆ ತರಲು ಹೋಗಿದ್ದಾರೋ?, ಸ್ನೇಹಿತನ Race ನೋಡಲು ಹೋಗಿದ್ದಾರೋ?’.. ವಿಜಯ್‌ಗೆ DMK ಪ್ರಶ್ನೆ, 'ತಪ್ಪೇನು?' TVK ಖಡಕ್ ತಿರುಗೇಟು