ಮೆಹಬೂಬಾ ಮುಫ್ತಿ 
ದೇಶ

'ನಮಗೆ ಕುರ್ಚಿಯೇನೋ ಸಿಕ್ಕಿತು, ಆದರೆ ನಮ್ಮ ಬಾಯಿ ಮುಚ್ಚಿದೆ': ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ನಡೆ ಬಗ್ಗೆ ಮೆಹಬೂಬಾ ಮುಫ್ತಿ

ಜಗತ್ತು ಬಹು-ಧ್ರುವೀಯ ವ್ಯವಸ್ಥೆಯತ್ತ ಸಾಗುತ್ತಿದ್ದರೆ, ನವದೆಹಲಿಯು ಇನ್ನೂ 'ಸೂಪರ್ ಪವರ್'ಯ ಭ್ರಮೆಯಲ್ಲೇ ಸಿಲುಕಿಕೊಂಡಿದೆ ಎಂದು ಪಿಡಿಪಿ ಅಧ್ಯಕ್ಷರು ಹೇಳಿದರು.

ಶ್ರೀನಗರ: ಜಾಗತಿಕ ಮಾನವ ಹಕ್ಕುಗಳ ಪ್ರತಿಪಾದಕನಾಗಿ ಭಾರತದ ಐತಿಹಾಸಿಕ ಪಾತ್ರವನ್ನು ಪುನರುಚ್ಚರಿಸುವ ಅವಕಾಶವನ್ನು ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಳೆದುಕೊಂಡಿದ್ದಾರೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ಹೇಳಿದ್ದಾರೆ.

'ಬ್ರಿಕ್ಸ್‌ನ ಅಧ್ಯಕ್ಷರಾಗಿ ಮತ್ತು ಆತಿಥ್ಯ ವಹಿಸಿದವರಾಗಿ ನಮ್ಮ ಪ್ರಧಾನಿ ಯಾವ ರೀತಿಯಲ್ಲಿ ಹಾಗೂ ಎಷ್ಟೊಂದು ದೃಢತೆಯಿಂದ ಮಾತನಾಡಬೇಕಿತ್ತೋ, ಆ ವಿಷಯದಲ್ಲಿ ಅವರು ಹಿಂಜರಿದರು ಎಂದು ನನಗೆ ಅನ್ನಿಸುತ್ತದೆ. ಅವರು ತಮ್ಮ ಮಾತುಗಳನ್ನು ಅತ್ಯಂತ ಎಚ್ಚರಿಕೆಯಿಂದ ಆರಿಸಿಕೊಂಡರು' ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಮಾನವ ಹಕ್ಕುಗಳು, ಮಾನವೀಯತೆ ಮತ್ತು ಪ್ರಜಾಪ್ರಭುತ್ವದ ಪರವಾಗಿ ನಿಲ್ಲುವ ವಿಷಯದಲ್ಲಿ ಭಾರತವು ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ ಎಂದು ಅವರು ಹೇಳಿದರು.

'ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಸ್ವತಂತ್ರ ವಿದೇಶಾಂಗ ನೀತಿ ಮತ್ತು ಅಲಿಪ್ತ ನೀತಿಯನ್ನು ಅನುಸರಿಸುವ ಬಗ್ಗೆ ಭಾರತವು ಯಾವಾಗಲೂ ಹೆಮ್ಮೆ ಪಟ್ಟುಕೊಂಡಿದೆ. ಆದಾಗ್ಯೂ, 20,000 ದಿಂದ 22,000ದಷ್ಟು ಮುಗ್ಧ ಮಕ್ಕಳು ಬಲಿಯಾದ ಗಾಜಾ ವಿಷಯದಲ್ಲಿ ನಾವು ನಮ್ಮ ಕಡೆಯಿಂದ ಏನನ್ನೂ ಹೇಳಿಲ್ಲ. ಆ ನಂತರ ಇರಾನ್‌ನ ನಾಯಕತ್ವವು ಬಲಿಯಾಯಿತು ಮತ್ತು ಶಾಲೆಯೊಂದರೊಳಗೆ ಸುಮಾರು 150 ಶಾಲಾ ಬಾಲಕಿಯರನ್ನು ಕೊಲ್ಲಲಾಯಿತು. ಆಗಲೂ, ನಮ್ಮ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ' ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹೇಳಿದರು.

'ಬ್ರಿಕ್ಸ್ ಶೃಂಗಸಭೆಯಲ್ಲಿ ಮುಂಚೂಣಿಯಲ್ಲಿರುವ ವಿಷಯದಲ್ಲಿ ಭಾರತವು ಹಿಂದುಳಿದಿದೆ. ನಮಗೆ ಆ ಸ್ಥಾನ ಸಿಕ್ಕಿತು. ಆದರೆ, ನಮ್ಮ ಬಾಯಿ ಮುಚ್ಚಿತು. ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿದೆ ಮತ್ತು ಅಮೆರಿಕದಂತಹ ಮಹಾಶಕ್ತಿಗೆ ಕೂಡ ನವದೆಹಲಿಯು ಎಂದಿಗೂ ಕೇವಲ 'ಅನುಚರ'ನಾಗಿ (sidekick) ವರ್ತಿಸಿಲ್ಲ' ಎಂದು ಅವರು ಹೇಳಿದರು.

'ದುರದೃಷ್ಟವಶಾತ್, ಕಳೆದ ಹಲವು ವರ್ಷಗಳಿಂದ ನಮ್ಮ ವಿದೇಶಾಂಗ ನೀತಿಯು ಸಂಪೂರ್ಣವಾಗಿ ಬದಲಾಗುತ್ತಿದೆ; ಭಯೋತ್ಪಾದಕ ದಾಳಿಗಳನ್ನು ಖಂಡಿಸುವ ವಿಷಯದಲ್ಲಿ ನಾವು ಆಯ್ದ ಧೋರಣೆಯನ್ನು ಅನುಸರಿಸುತ್ತಿದ್ದೇವೆ' ಎಂದರು.

ಬ್ರಿಕ್ಸ್ ಶೃಂಗಸಭೆಯ 'ದೆಹಲಿ ಘೋಷಣೆ'ಯನ್ನು ಸ್ವಾಗತಿಸಿದ ಮೆಹಬೂಬಾ, ಈ ಘೋಷಣೆಯು ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸುವುದರ ಜೊತೆಗೆ ಪಶ್ಚಿಮ ಏಷ್ಯಾದ ವಿದ್ಯಮಾನಗಳ ಕುರಿತು ದೃಢವಾದ ನಿಲುವನ್ನು ವ್ಯಕ್ತಪಡಿಸಿತ್ತು ಎಂದಿದ್ದಾರೆ.

'ಬ್ರಿಕ್ಸ್‌ನಂತಹ ವೇದಿಕೆಯಲ್ಲಿ ನಮ್ಮ ದೇಶ ಮತ್ತು ನಮ್ಮ ಪ್ರಧಾನ ಮಂತ್ರಿಗಳು ಈ ವಿಷಯದ ಬಗ್ಗೆ ಬಲವಾಗಿ ಧ್ವನಿ ಎತ್ತಬೇಕಿತ್ತು; ಬದಲಾಗಿ, ಅವರೇ ಸ್ವತಃ ಈ ಘೋಷಣೆಗೆ ಮುನ್ನುಡಿ ಬರೆದು ಮುಂಚೂಣಿಯಲ್ಲಿ ನಿಲ್ಲಬೇಕಿತ್ತು. ಎಲ್ಲೋ ಒಂದು ಕಡೆ ನಾವು ಹಿಂದುಳಿದಿದ್ದೇವೆ ಮತ್ತು ನಮ್ಮ ಅನೇಕ ಮೌಲ್ಯಗಳು ಹಾಗೂ ದೇಶದ ತತ್ವಗಳ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದೇವೆ' ಎಂದು ಅವರು ಹೇಳಿದರು.

ಜಗತ್ತು ಬಹು-ಧ್ರುವೀಯ ವ್ಯವಸ್ಥೆಯತ್ತ ಸಾಗುತ್ತಿದ್ದರೆ, ನವದೆಹಲಿಯು ಇನ್ನೂ 'ಸೂಪರ್ ಪವರ್'ಯ ಭ್ರಮೆಯಲ್ಲೇ ಸಿಲುಕಿಕೊಂಡಿದೆ ಎಂದು ಪಿಡಿಪಿ ಅಧ್ಯಕ್ಷರು ಹೇಳಿದರು.

'ಜಗತ್ತು ಈಗ ಬಹು-ಸೂಪರ್ ಪವರ್ ಯುಗದತ್ತ ಸಾಗುತ್ತಿದೆ; ಚೀನಾ ಮತ್ತು ರಷ್ಯಾ ಪ್ರಬಲವಾಗಿವೆ. ಆದರೆ, ಅಮೆರಿಕದ ಸೂಪರ್‌ಪವರ್ ಸ್ಥಾನಮಾನ ಕುಸಿಯುತ್ತಿದೆ. ಇರಾನ್‌ನಲ್ಲಿ ಅವರಿಗೆ ಏನಾಯಿತು ಎಂಬುದನ್ನು ನಾವು ನೋಡಿದ್ದೇವೆ; ಅವರು ಹೇಗಾದರೂ ಮಾಡಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಮತ್ತೊಂದು ಕಟ್ಟಡ ಕುಸಿತ ಭೀತಿ: ಏಕಾಏಕಿ ವಾಲಿದ ನಾಲ್ಕಂತಸ್ತಿನ ಕಟ್ಟಡ, ನೆಲಸಮಗೊಳಿಸಲು MCD ಸೂಚನೆ

ಬಳ್ಳಾರಿ ಚಲೋ ನಡೆಸಿದ್ದ ಬಿಜೆಪಿ ನಾಯಕರಿಗೆ ಶಾಕ್; ಸೋಮಶೇಖರ್ ರೆಡ್ಡಿ, ರೇಣುಕಾಚಾರ್ಯ ಸೇರಿ 22 ಬಿಜೆಪಿ ನಾಯಕರ ಮೇಲೆ FIR

BRICS summit 2026: ತಂತ್ರಜ್ಞಾನ ಶಸ್ತ್ರಾಸ್ತ್ರೀಕರಣ ವಿರುದ್ಧ ಪ್ರಧಾನಿ ವಿರುದ್ಧ ಮೋದಿ ಎಚ್ಚರಿಕೆ! Video

‘ಹೂಡಿಕೆ ತರಲು ಹೋಗಿದ್ದಾರೋ?, ಸ್ನೇಹಿತನ Race ನೋಡಲು ಹೋಗಿದ್ದಾರೋ?’.. ವಿಜಯ್‌ಗೆ DMK ಪ್ರಶ್ನೆ, 'ತಪ್ಪೇನು?' TVK ಖಡಕ್ ತಿರುಗೇಟು

ಶೀಘ್ರದಲ್ಲೇ ಶಾಲೆಗಳ ಟೈಮ್ ಬದಲು? ಟ್ರಾಫಿಕ್ ಕಿರಿಕಿರಿ ತಪ್ಪಿಸಲು ವೇಳಾಪಟ್ಟಿ ಬದಲಾವಣೆಗೆ ಸರ್ಕಾರದ ಚಿಂತನೆ