ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಒಂದು ಪುಟ್ಟ ವಿಡಿಯೋ ಇದೀಗ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ತನ್ನ ಸಾಧನೆಯ ಹಾದಿ ಹೇಳಲು ಹೋದ ಅಧಿಕಾರಿಯೊಬ್ಬರು ಬಳಸಿದ ಶುಭಾಶಯದ ಮಾತುಗಳು ಆಡಳಿತ ಮತ್ತು ಸಾರ್ವಜನಿಕ ವಲಯದಲ್ಲಿ ಹೊಸ ಸಂಚಲನ ಮೂಡಿಸಿ, ಆ ಅಧಿಕಾರಿಯನ್ನ ವರ್ಗಾವಣೆ ಮಾಡಲಾಗಿದೆ. ಹೌದು, ಪಶ್ಚಿಮ ಬಂಗಾಳ ಕ್ಯಾಡರ್ನ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರು ತಮ್ಮ ನಾಗರಿಕ ಸೇವಾ ಪರೀಕ್ಷೆಯ ಯಶೋಗಾಥೆಯ ವಿಡಿಯೋವೊಂದರಲ್ಲಿ ಇಸ್ಲಾಮಿಕ್ ಪದಗಳನ್ನು ಬಳಸಿ, ಜೈ ಹಿಂದ್ ಅಥವಾ ವಂದೇ ಮಾತರಂ ಹೇಳದ ಕಾರಣಕ್ಕಾಗಿ ತೀವ್ರ ವಿವಾದಕ್ಕೀಡಾಗಿದ್ದು, ಅವರನ್ನು ಖರಗ್ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆಯಿಂದ ರಾಜ್ಯ ಸಶಸ್ತ್ರ ಪೊಲೀಸ್ ಪಡೆಯ ಡೆಪ್ಯೂಟಿ ಕಮಾಂಡೆಂಟ್ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ವಿವಾದಕ್ಕೆ ಕಾರಣವಾದ ವಿಡಿಯೋದಲ್ಲಿ ಏನಿದೆ?
2021ರ ಬ್ಯಾಚ್ನ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಅವರು ಸೌದಿ ಅರೇಬಿಯಾದಲ್ಲಿದ್ದ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ಭಾರತಕ್ಕೆ ಮರಳಿ, ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆದ ತಮ್ಮ ಪ್ರೇರಣಾದಾಯಕ ಜರ್ನಿಯನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದರು. ಈ ವಿಡಿಯೋದ ಆರಂಭದಲ್ಲಿ ಅವರು ಅಸ್ಸಲಾಮು ಅಲೈಕುಮ್ ಎಂದು ಶುರುಮಾಡಿ, ಮಧ್ಯದಲ್ಲಿ ಇನ್ಶಾ ಅಲ್ಲಾಹ್ ಮತ್ತು ಕೊನೆಯಲ್ಲಿ ಜಜಾಕಲ್ಲಾಹ್ ಎಂಬ ಉರ್ದು/ಅರೇಬಿಕ್ ಧಾರ್ಮಿಕ ಪದಗಳನ್ನು ಬಳಸಿದ್ದರು.
ಮುಂದುವರೆದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹಿಂದೂ ಲೀಗಲ್ ಫಂಡ್ ಎಂಬ ಸಂಘಟನೆಯು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ಅಧಿಕೃತ ದೂರು ಸಲ್ಲಿಸಿ, ಭಾರತ ಸರ್ಕಾರದ ಜವಾಬ್ದಾರಿಯುತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಸಾರ್ವಜನಿಕ ಸಂವಹನದಲ್ಲಿ ತಟಸ್ಥತೆ ಕಾಯ್ದುಕೊಳ್ಳಬೇಕು. ಆದರೆ ಇವರು ಧಾರ್ಮಿಕ ಪದಗಳನ್ನು ಬಳಸಿ, ಭಾರತೀಯತೆಯ ಪ್ರತೀಕವಾದ ಜೈ ಹಿಂದ್ ಅಥವಾ ವಂದೇ ಮಾತರಂ ಪದಗಳನ್ನು ಬಳಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು.
ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ತೀವ್ರ ಚರ್ಚೆ ಹಾಗೂ ದೂರು ದಾಖಲಾದ ಬೆನ್ನಲ್ಲೇ, ಪಶ್ಚಿಮ ಬಂಗಾಳ ಸರ್ಕಾರವು ಸೋಮವಾರ ಬುಷ್ರಾ ಬಾನೋ ಅವರನ್ನು ಖರಗ್ಪುರದಿಂದ ರಾಜ್ಯ ಸಶಸ್ತ್ರ ಪೊಲೀಸ್ ಪಡೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿದೆ. ಎತನ್ಮಧ್ಯೆ, ಈ ವರ್ಗಾವಣೆಯು ವಿಡಿಯೋ ವಿವಾದದ ಬೆನ್ನಲ್ಲೇ ನಡೆದಿದ್ದರೂ ಸಹ, ಸರ್ಕಾರದ ಆದೇಶದಲ್ಲಿ ಇದು ಕೇವಲ ಆಡಳಿತಾತ್ಮಕ ವರ್ಗಾವಣೆ ಎಂದು ಉಲ್ಲೇಖಿಸಲಾಗಿದೆಯೇ ಹೊರತು ವಿವಾದದ ಕಾರಣಕ್ಕಾಗಿ ಎಂದು ಸ್ಪಷ್ಟಪಡಿಸಿಲ್ಲ. ಜೊತೆಗೆ, ಈ ಕುರಿತು ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ಕಡೆಯಿಂದಲೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
ಯಾರು ಈ ಬುಷ್ರಾ ಬಾನೋ?
ಉತ್ತರ ಪ್ರದೇಶದ ಕನೌಜ್ ಮೂಲದ ಬುಷ್ರಾ ಬಾನೋ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್ ಅಧ್ಯಯನದಲ್ಲಿ ಪಿಎಚ್ಡಿ ಪೂರ್ಣಗೊಳಿಸಿ ಯುಜಿಸಿ ನೆಟ್ ಜೆಆರ್ಎಫ್ ನಲ್ಲಿಯೂ ಉತ್ತೀರ್ಣರಾಗಿದ್ದರು. ಮದುವೆ ಮತ್ತು ಕುಟುಂಬದ ನಡುವೆಯೂ ತಮ್ಮ ಕನಸನ್ನು ಕೈಬಿಡದೆ ಸೌದಿ ಅರೇಬಿಯಾದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬಳಿಕ ಭಾರತಕ್ಕೆ ಮರಳಿ ಕಠಿಣ ಪರಿಶ್ರಮದಿಂದ ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆ ತೇರ್ಗಡೆಯಾದರು. 2018 ರಲ್ಲಿ 277 ನೇ ಶ್ರೇಣಿಯೊಂದಿಗೆ ಐಆರ್ ಟಿಎಸ್ ಗೆ ಹಾಗೂ 2019 ರಲ್ಲಿ 234 ನೇ ಶ್ರೇಣಿಯೊಂದಿಗೆ ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾದರು.