ನವದೆಹಲಿ: ಪಾನ್ ಮಸಾಲ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಸರ್ಕಾರ ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ದೆಹಲಿ ಹೈಕೋರ್ಟ್ನ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ಪ್ರಕರಣದ ವಿಚಾರಣೆ ನಡೆಸಿ "ಈ ವಿಷಯವು ದೆಹಲಿ ಹೈಕೋರ್ಟ್ನ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ" ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅರ್ಜಿ ಸಲ್ಲಿಸಿದ್ದು ಯಾರು?
ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯು ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿಯನ್ನು ನಟರು ಸಲ್ಲಿಸಿರಲಿಲ್ಲ, ಬದಲಿಗೆ ವಿಮಲ್ ಇಲಾಯ್ಚಿ ಉತ್ಪನ್ನದ ತಯಾರಿಕಾ ಸಂಸ್ಥೆಯಾದ ಪಿಬಿ ಆಗ್ರೋ ಎಲ್ಎಲ್ಪಿ ನ್ಯಾಯಾಲಯದ ಮೆಟ್ಟಿಲೇರಿ, "ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ತನ್ನ ಬ್ರಾಂಡ್ ಅಂಬಾಸಿಡರ್ಗಳಾದ ಶಾರುಖ್, ಅಜಯ್ ಮತ್ತು ಟೈಗರ್ಗೆ ನೀಡಿರುವ ನೋಟಿಸ್ನಿಂದ ಕಂಪನಿಯ ವ್ಯವಹಾರಕ್ಕೆ ಧಕ್ಕೆಯಾಗುತ್ತದೆ" ಎಂದು ಸಂಸ್ಥೆ ವಾದಿಸಿತ್ತು.
ಹಾಗಾದ್ರೆ, ಮಹಾರಾಷ್ಟ್ರ FDA ನೀಡಿದ್ದ ನೋಟಿಸ್ನಲ್ಲಿ ಏನಿತ್ತು?
ಮಹಾರಾಷ್ಟ್ರದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಆದರೆ, ಈ ಮೂವರು ನಟರು ವಿಮಲ್ ಇಲಾಯ್ಚಿ ಹೆಸರಿನಲ್ಲಿ ಪರೋಕ್ಷವಾಗಿ ನಿಷೇಧಿತ ಪಾನ್ ಮಸಾಲವನ್ನು ಪ್ರಮೋಟ್ ಮಾಡುತ್ತಿದ್ದಾರೆ ಎಂದು ಮಹಾರಾಷ್ಟ್ರ FDA ಆರೋಪಿಸಿತ್ತು. ಅದರಂತೆ, ಮಹಾರಾಷ್ಟ್ರ ಎಫ್ಡಿಎ ಕಮಿಷನರ್ ತುಕಾರಾಂ ಮುಂಢೆ ನೇತೃತ್ವದಲ್ಲಿ ಈ ಮೂವರು ನಟರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಈ ಜಾಹೀರಾತು ಪ್ರಚಾರವನ್ನು ತಕ್ಷಣವೇ ನಿಲ್ಲಿಸುವಂತೆ, ಸಾಮಾಜಿಕ ಜಾಲತಾಣಗಳಿಂದ ಇದರ ಪ್ರಚಾರದ ಕಂಟೆಂಟ್ ತೆಗೆದುಹಾಕುವಂತೆ ಹಾಗೂ ಒಪ್ಪಂದದ ವಿವರಗಳೊಂದಿಗೆ 15 ದಿನಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ನಟರಿಗೆ ಸೂಚಿಸಲಾಗಿತ್ತು.
ಇದರ ನಡುವೆ, ಪಾನ್ ಮಸಾಲಾ ಕಂಪನಿಯು ಈ ನೋಟಿಸ್ಗಳನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು. "ವಿಮಲ್ ಪಾನ್ ಮಸಾಲಾವನ್ನು 2001 ರಿಂದಲೇ ಮಹಾರಾಷ್ಟ್ರದಲ್ಲಿ ತಯಾರಿಸುತ್ತಿಲ್ಲ ಅಥವಾ ಮಾರಾಟ ಮಾಡುತ್ತಿಲ್ಲ, ಹೀಗಾಗಿ ಎಫ್ಡಿಎ ಆದೇಶ ಕಾನೂನುಬಾಹಿರ" ಎಂದು ಸಂಸ್ಥೆ ವಾದಿಸಿತ್ತು. ಆದರೆ, ಹೈಕೋರ್ಟ್ ಈ ವಾದವನ್ನು ಆಲಿಸಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿದೆ. ಒಟ್ಟಾರೆಯಾಗಿ, ಕೋರ್ಟ್ನ ಈ ಆದೇಶದಿಂದಾಗಿ ಶಾರುಖ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಸದ್ಯಕ್ಕೆ ಯಾವುದೇ ರಿಲೀಫ್ ಸಿಕ್ಕಿಲ್ಲ.