ಪರಾಗ್ ಶಾ ಅವರ ಒಟ್ಟು ಆಸ್ತಿ ಮೌಲ್ಯ ₹5,000 ಕೋಟಿ. ಅವರು ಮುಂಬೈನ ಘಾಟ್ಕೋಪರ್ ಪೂರ್ವ ಕ್ಷೇತ್ರದಿಂದ ಆಯ್ಕೆಯಾದ ಬಿಜೆಪಿ ಶಾಸಕರಾಗಿದ್ದಾರೆ. ತಮಗೆ ಬೇಕಾಗಿದ್ದೆಲ್ಲವನ್ನೂ ಚಿಟಿಕೆ ಹೊಡೆಯುವಷ್ಟರಲ್ಲಿ ಖರೀದಿಸುವ ಸಾಮರ್ಥ್ಯವಿದ್ದರೂ ಅವರು ಭಿಕ್ಷುಕನ ವೇಷ ಧರಿಸಿ, ಬೀದಿಗಳಲ್ಲಿ ಭಿಕ್ಷೆ ಬೇಡಿದರು; ಜೊತೆಗೆ ಹವಾಮಾನದ ವೈಪರೀತ್ಯಗಳು, ದೈಹಿಕ ಶ್ರಮ ಮತ್ತು ದಾರಿಹೋಕರ ಕಟು ಮಾತುಗಳನ್ನು ಸಹಿಸಿಕೊಂಡಿದ್ದು ಒಂದು ಉದಾತ್ತ ಉದ್ದೇಶಕ್ಕಾಗಿ.
ಶಾ ಅವರು ದೇಶದ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. ಆದಾಗ್ಯೂ, ತಮ್ಮ ಆಧ್ಯಾತ್ಮಿಕ ಗುರುವಿನ ಸಲಹೆಯ ಮೇರೆಗೆ ಅವರು ತಮ್ಮ ಐಷಾರಾಮಿ ಕಾರುಗಳು, ಭದ್ರತಾ ವ್ಯವಸ್ಥೆ ಮತ್ತು ಇತರ ಸೌಕರ್ಯಗಳನ್ನು ತಾತ್ಕಾಲಿಕವಾಗಿ ತ್ಯಜಿಸಿದ್ದರು.
ಜೈನ ಧರ್ಮದ 'ಚಾತುರ್ಮಾಸ'ದ ಅವಧಿಯಲ್ಲಿ, ಆಧ್ಯಾತ್ಮಿಕ ಗುರುಗಳಾದ ನಮ್ರಮುನಿ ಮಹಾರಾಜ್ ಅವರು ಶಾಸಕ ಪರಾಗ್ ಶಾ ಅವರಿಗೆ ಒಂದು ವಿಶಿಷ್ಟ ಸಲಹೆಯನ್ನು ನೀಡಿದರು. ಜೀವನದ ನೈಜ ಸ್ವರೂಪ ಹಾಗೂ ಜನರು ದಿನನಿತ್ಯ ಎದುರಿಸುವ ಕಷ್ಟ-ಕಾರ್ಪಣ್ಯಗಳನ್ನು ಅರಿತುಕೊಳ್ಳುವ ಸಲುವಾಗಿ, ಒಂದು ದಿನ ಭಿಕ್ಷುಕನಾಗಿ ಬದುಕುವಂತೆ ಅವರು ಶಾ ಅವರಿಗೆ ಸೂಚಿಸಿದರು.
ಗುರುಗಳ ಆದೇಶವನ್ನು ಪಾಲಿಸುತ್ತಾ, ಕೋಟ್ಯಧಿಪತಿಯಾದ ಆ ಶಾಸಕರು ತಮ್ಮ ಎಲ್ಲ ಐಷಾರಾಮಿ ಸೌಕರ್ಯಗಳನ್ನು ತ್ಯಜಿಸಿದರು. ಮೇಕಪ್ ಮೂಲಕ ಭಿಕ್ಷುಕನ ವೇಷ ಧರಿಸಿ ಘಾಟ್ಕೋಪರ್ನ ಬೀದಿಗಿಳಿದರು. ಅಲ್ಲಿ ಅವರು ಭಿಕ್ಷೆ ಬೇಡಿದರು, ಅಲ್ಲೇ ಊಟ ಮಾಡಿದರು ಮತ್ತು ಭಿಕ್ಷುಕನಾಗಿ ಬದುಕುವಾಗ ಎದುರಾಗುವ ನೈಜ ನೋವು ಹಾಗೂ ಅವಮಾನವನ್ನು ಅನುಭವಿಸಿದರು.
ಆ ಅನುಭವ ಎಷ್ಟು ಗಾಢವಾಗಿತ್ತೆಂದರೆ, ನಂತರ ಪರಾಗ್ ಶಾ ತಮ್ಮ ವೇಷವನ್ನು ತೆಗೆದುಹಾಕಿ, ಭಿಕ್ಷುಕನಾಗಿ ತಾವು ಭೇಟಿ ನೀಡಿದ್ದ ಅದೇ ಸ್ಥಳಗಳಿಗೆ ಮರಳಿದರು. ಅವರು ಅಲ್ಲಿನ ಜನರನ್ನು ಭೇಟಿಯಾಗಿ, ಪರಿಸ್ಥಿತಿಯ ಕುರಿತು ಅವರೊಂದಿಗೆ ಚರ್ಚಿಸಿದರು.
'ಅದು ನನ್ನ ಗುರುವಿನ ಆದೇಶವಾಗಿದ್ದರಿಂದ, ನಾನು ಒಂದು ದಿನ ಭಿಕ್ಷುಕನ ವೇಷದಲ್ಲಿ ಘಾಟ್ಕೋಪರ್ನಲ್ಲಿ ಅಲೆದಾಡಿದೆ. ನನ್ನ ಗುರುಗಳು ಹೇಳಿದ್ದೆಲ್ಲವೂ ನನ್ನ ಒಳಿತಿಗಾಗಿಯೇ ಇರಬೇಕು' ಎಂದು ಅವರು ಹೇಳಿದರು.
ಹಣ, ಖ್ಯಾತಿ ಮತ್ತು ಅಧಿಕಾರವು ವ್ಯಕ್ತಿಯಲ್ಲಿ ಅಹಂಕಾರವನ್ನು ಹುಟ್ಟುಹಾಕುತ್ತದೆ ಎಂಬುದನ್ನು ಅವರು ಒಪ್ಪಿಕೊಂಡರು. ಈ ಅನುಭವವು ಆ ಅಹಂಕಾರವನ್ನು ಹೋಗಲಾಡಿಸಲು ಅವರಿಗೆ ಸಹಾಯ ಮಾಡಿತು ಮತ್ತು ಅವರನ್ನು ವಿನಮ್ರರಾಗಿರುವಂತೆ ಮಾಡಿತು ಎಂದರು.
ಅಲ್ಲದೆ, ತಮ್ಮನ್ನು ಆಳವಾಗಿ ಕಲಕಿದ ಒಂದು ಘಟನೆಯನ್ನು ಅವರು ಹಂಚಿಕೊಂಡರು.
'ನಾನು ಭಿಕ್ಷುಕನ ವೇಷದಲ್ಲಿ ನನ್ನದೇ ಅಪಾರ್ಟ್ಮೆಂಟ್ ಸಂಕೀರ್ಣದೊಳಗೆ ಹೋದಾಗ, ನನ್ನದೇ ಕಾವಲುಗಾರ ನನ್ನನ್ನು ಹೊರಗೆ ತಳ್ಳಿದನು. ನನ್ನ ಸ್ನೇಹಿತನೊಬ್ಬ ಆಗಾಗ್ಗೆ ಜನರಿಗೆ ಸಹಾಯ ಮಾಡುತ್ತಾನೆ ಮತ್ತು ಯಾವಾಗಲೂ ನನಗೆ ಏನನ್ನಾದರೂ ನೀಡಲು ಪಟ್ಟು ಹಿಡಿಯುತ್ತಾನೆ. ಆದರೆ ನಾನು ಭಿಕ್ಷುಕನ ವೇಷದಲ್ಲಿ ಅವನ ಬಳಿಗೆ ಹೋದಾಗ, ಆತ ಕೂಡ ನನ್ನನ್ನು ಓಡಿಸಿದನು' ಎಂದರು.
ಈ ಘಟನೆಯು ಶಾ ಅವರಿಗೆ ಕಠೋರವಾದ ಪಾಠವೊಂದನ್ನು ಕಲಿಸಿತು: ಜನರು ವ್ಯಕ್ತಿಗಿಂತ ಹೆಚ್ಚಾಗಿ ಹಣ, ಹುದ್ದೆ ಮತ್ತು ಅಧಿಕಾರಕ್ಕೆ ಮೌಲ್ಯ ನೀಡುತ್ತಾರೆ.
'ಮುಂಬೈನಲ್ಲಿ ಮಾನವೀಯತೆ ಇನ್ನೂ ಜೀವಂತವಾಗಿದೆ. ಕೆಲ ಯುವಕರು ನನ್ನ ಸ್ಥಿತಿಯನ್ನು ಕಂಡು ಮರುಗಿ ನನಗೆ ₹20 ರೂಪಾಯಿ ನೀಡಿದರು' ಎಂದು ಅವರು ಹೇಳಿದರು.