ರಾಹುಲ್ ಗಾಂಧಿ 
ದೇಶ

ವ್ಯವಸ್ಥೆ ಪ್ರಶ್ನೆ ಮಾಡದ 'ಅಂಧಭಕ್ತ'ರ ಬಯಸುತ್ತದೆ, ವಿದ್ಯಾರ್ಥಿಗಳಿಗೆ ಅವರು ವಿರುದ್ಧ: Rahul Gandhi

“ವ್ಯವಸ್ಥೆಯ ವಿರುದ್ಧದ ಹೋರಾಟ ಇದು. ವ್ಯವಸ್ಥೆಯು ಪ್ರಶ್ನೆ ಕೇಳುವ ವಿದ್ಯಾರ್ಥಿಗಳಿಂದ ಬೆದರಿಕೆಯನ್ನು ಅನುಭವಿಸುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದರು.

ಇಂದೋರ್: ಪ್ರಶ್ನೆ ಕೇಳುವ ವಿದ್ಯಾರ್ಥಿಗಳಿಗೂ, ಪ್ರಶ್ನಿಸದೆ ಇರುವ ‘ಅಂಧಭಕ್ತ’ರಿಗೂ ವ್ಯತ್ಯಾಸವಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಶನಿವಾರ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ರಾಹುಲ್ ಗಾಂಧಿ ಅವರು, ‘ಅಂಧಭಕ್ತ’ ಎಂಬ ಪದ ಬಳಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

“ವ್ಯವಸ್ಥೆಯ ವಿರುದ್ಧದ ಹೋರಾಟ ಇದು. ವ್ಯವಸ್ಥೆಯು ಪ್ರಶ್ನೆ ಕೇಳುವ ವಿದ್ಯಾರ್ಥಿಗಳಿಂದ ಬೆದರಿಕೆಯನ್ನು ಅನುಭವಿಸುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಪ್ರಶ್ನೆ ಕೇಳುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದರು.

ವಿದ್ಯಾರ್ಥಿಗಳು ಅವರ ವಿರುದ್ಧ

ವಿದ್ಯಾರ್ಥಿಯೊಬ್ಬರು ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಕ್ರಿಕೆಟ್‌ ಆಡಳಿತ ಸಂಸ್ಥೆಯ ಅಧ್ಯಕ್ಷರಾಗಿದ್ದು ಹೇಗೆ?, ಇಬ್ಬರು ವ್ಯಕ್ತಿಗಳು ಭಾರತದ ಸಂಪೂರ್ಣ ಉದ್ಯಮ ವಲಯವನ್ನು ಹೇಗೆ ತಮ್ಮ ಹಿಡಿತಕ್ಕೆ ತೆಗೆದುಕೊಂಡರು?, ನ್ಯಾಯಾಂಗ ಹಾಗೂ ಇತರ ಸಂಸ್ಥೆಗಳು ತಮ್ಮ ಕೆಲಸವನ್ನು ಏಕೆ ಸಮರ್ಪಕವಾಗಿ ಮಾಡುತ್ತಿಲ್ಲ, ಚುನಾವಣಾ ಆಯೋಗ ತನ್ನ ಕರ್ತವ್ಯ ನಿರ್ವಹಿಸುತ್ತಿದೆಯೇ ಎಂಬಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಅವರು ಹೇಳಿದರು.

“ಅದಕ್ಕಾಗಿಯೇ ವ್ಯವಸ್ಥೆಗೆ ವಿದ್ಯಾರ್ಥಿಗಳು ಬೇಡ, ‘ಅಂಧಭಕ್ತರು’ ಬೇಕು. ಅಂಧಭಕ್ತರು ವಿದ್ಯಾರ್ಥಿಗಳ ಸಂಪೂರ್ಣ ವಿರುದ್ಧ. ವಿದ್ಯಾರ್ಥಿ ಪ್ರಶ್ನೆ ಕೇಳುತ್ತಾನೆ, ಕುತೂಹಲ ಹೊಂದಿರುತ್ತಾನೆ. ಆದರೆ ಅಂಧಭಕ್ತ ತನ್ನದೇ ಭ್ರಮೆಯ ಲೋಕದಲ್ಲಿ ಬದುಕುತ್ತಾನೆ. ವಿದ್ಯಾರ್ಥಿ ನಿರ್ಭೀತನಾಗಿದ್ದರೆ, ಅಂಧಭಕ್ತ ಹೆದರುವವನು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪೇಪರ್‌ ಲೀಕ್‌ ಬಗ್ಗೆಯೂ ಪ್ರಸ್ತಾಪ

ಇದೇ ವೇಳೆ ಶಿಕ್ಷಣ ಸಂಸ್ಥೆಗಳ ಸ್ಥಿತಿ, ಮೂಲಸೌಕರ್ಯ ಕುಸಿತ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಗಳ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನೆ ಎತ್ತಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದು, “ನಮ್ಮ ಶಾಲೆ-ಕಾಲೇಜುಗಳ ಸ್ಥಿತಿ ಹೀಗೇಕಾಗಿದೆ? ಮೂಲಸೌಕರ್ಯ ಏಕೆ ಹದಗೆಟ್ಟಿದೆ? ಪ್ರಶ್ನೆಪತ್ರಿಕೆಗಳು ಏಕೆ ಸೋರಿಕೆಯಾಗುತ್ತಿವೆ?” ಎಂಬ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಬೇಕು ಎಂದು ಅವರು ಹೇಳಿದರು.

8 ವರ್ಷಗಳಿಂದ ನೇಮಕಾತಿ ವಿಳಂಬ?

ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಲೋಕಸೇವಾ ಆಯೋಗದ (MPSC/MPPSC) ಪರೀಕ್ಷಾರ್ಥಿಗಳು ನೇಮಕಾತಿ ವಿಳಂಬ, ಖಾಲಿ ಹುದ್ದೆಗಳು ಮತ್ತು ಪರೀಕ್ಷೆಗಳ ಪಾರದರ್ಶಕತೆ ಕುರಿತು ತಮ್ಮ ಸಮಸ್ಯೆಗಳನ್ನು ರಾಹುಲ್ ಗಾಂಧಿ ಅವರ ಮುಂದೆ ಹಂಚಿಕೊಂಡರು.

ಒಬ್ಬ ಪರೀಕ್ಷಾರ್ಥಿಯ ಪ್ರಕಾರ, ಮಧ್ಯಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ಸಮಸ್ಯೆ ಎದುರಿಸುತ್ತಿದ್ದು, ಪ್ರಿಲಿಮ್ಸ್‌, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಸೇರಿದಂತೆ ವಿವಿಧ ಹಂತಗಳಲ್ಲಿ ಸುಮಾರು ಶೇ.13ರಷ್ಟು ಹುದ್ದೆಗಳನ್ನು ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು. ಇದರಿಂದ ಹಲವು ಯುವಕರು ವಯೋಮಿತಿ ಮೀರಿ ಕಾಯುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ನೇಮಕಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರೂ ಫಲಿತಾಂಶಗಳನ್ನು ತಡೆಹಿಡಿಯಲಾಗುತ್ತಿದೆ ಮತ್ತು ಹಲವು ಹುದ್ದೆಗಳನ್ನು ಪ್ರಕಟಿಸದೇ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ ಎಂದು ಮತ್ತೊಬ್ಬ ಪರೀಕ್ಷಾರ್ಥಿ ಆರೋಪಿಸಿದರು. ಇವು ವಿದ್ಯಾರ್ಥಿಗಳು ಮತ್ತು ಪರೀಕ್ಷಾರ್ಥಿಗಳು ಮಾಡಿದ ಆರೋಪಗಳಾಗಿವೆ.

10 ಸಾವಿರ ಹುದ್ದೆಗಳು ಬಾಕಿ ಎಂದ ವಿದ್ಯಾರ್ಥಿನಿ

ರಾಜ್‌ಗಢ ಜಿಲ್ಲೆಯ ಸಪ್ನಾ ಗುರ್ಜರ್ ಎಂಬ ವಿದ್ಯಾರ್ಥಿನಿ ಮಾತನಾಡಿ ಮೀಸಲಾತಿ ಸಂಬಂಧಿತ ಸಮಸ್ಯೆಗಳಿಂದ ನೇಮಕಾತಿ ಬಾಕಿ ಉಳಿದಿರುವ ಬಗ್ಗೆ ಪ್ರಸ್ತಾಪಿಸಿದರು. ಸುಮಾರು 10,000 ಹುದ್ದೆಗಳು ಎಂಟು ವರ್ಷಗಳಿಂದ ಬಾಕಿ ಉಳಿದಿದ್ದು, ಸಾವಿರಾರು ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕಾಗಿ ಕಾಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಪರೀಕ್ಷೆಗಳ ಪಾರದರ್ಶಕತೆ, ನೇಮಕಾತಿ ವಿಳಂಬ, ಖಾಲಿ ಹುದ್ದೆಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರ ಗಮನಕ್ಕೆ ತಂದರು. ಈ ಸಂದರ್ಭದಲ್ಲಿ ನಡೆಯುತ್ತಿರುವ ಶಿಕ್ಷಕರ ನೇಮಕಾತಿ ಆಕಾಂಕ್ಷಿಗಳ ಪ್ರತಿಭಟನೆಯಲ್ಲಿ ತಾನೂ ಭಾಗವಹಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ ಎಂದು ವರದಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆ? ಸುಳಿವು ಕೊಟ್ಟ ಸಿಎಂ ಡಿಕೆ ಶಿವಕುಮಾರ್!

'UPI ಪಾವತಿ ಸ್ವೀಕರಿಸಲ್ಲ.. ಕ್ಯಾಶ್‌ ಕೊಡಿ': ಅಂಗಡಿಗಳ ಮುಂದೆ ಬೋರ್ಡ್ ಹಾಕಿದ ವ್ಯಾಪಾರಿಗಳು!

ವಂದೇ ಮಾತರಂ ಜಟಾಪಟಿ: ಎರಡೇ ಚರಣ ಗಾಯನಕ್ಕೆ ಶಾಸಕ ಚನ್ನಬಸಪ್ಪ ಆಕ್ಷೇಪ, ಸಿಎಂ ಡಿಕೆ ಶಿವಕುಮಾರ್ ತಿರುಗೇಟು!

ಬಂಗಾಳ Bypoll, ಕ್ಷಣಕ್ಕೊಂದು ತಿರುವು: ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

ಮಳೆರಾಯನ ಮುನಿಸು: ದೇಶದಲ್ಲಿ ಶೇ.14.88ರಷ್ಟು ಮುಂಗಾರು ಕೊರತೆ!