ರಾಜಕೀಯ

ಸಂಪುಟಕ್ಕೆ ಪ್ರಿಯಾಂಕ್ ಖರ್ಗೆ: ದಲಿತ ಸಿಎಂ ಕೂಗಿನ ಸದ್ದಡಗಿಸಿದ ಸಿದ್ದರಾಮಯ್ಯ

Shilpa D

ಬೆಂಗಳೂರು: ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಸಂಪುಟ ಪುನಾರಚನೆಯನ್ನು ಭಾನುವಾರ ನಡೆಸಿದ ಸಂಪುಟ ಪುನಾರಚನೆ ಮೂಲಕ ಪಕ್ಷದ ಒಳ ಹಾಗೂ ಹೊರಗಿನ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಬಲ ಸಂದೇಶ ರವಾನಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ದಲಿತ ನಾಯಕರನ್ನು ಸಿಎಂ ಮಾಡ ಬೇಕು ಎನ್ನುವ ಕೂಗಿಗೆ ಸಿಎಂ ಬ್ರೇಕ್ ಹಾಕಿದ್ದಾರೆ.

ಹಲವು ವರ್ಷಗಳಿಂದ ಕಾಂಗ್ರೆಸ್ ನಿಷ್ಠನಾಗಿ, ಹಲವು ಚುನಾವಣೆ ಎದುರಿಸಿರುವ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಗಾದಿಯ ಮೇಲೆ ಕಣ್ಣಿಟ್ಟಿದ್ದರು. ವಿಧಾನಸಭೆ ಚುನಾವಣೆ ನಂತರ ದಲಿತರೊಬ್ಬರನ್ನ ಸಿಎಂ ಮಾಡಬೇಕು ಎಂದು ಕಾರ್ಯಕರ್ತ ಮೂಲಕ ಆಂದೋಲನವನ್ನೇ ಮಾಡಿಸಿದ್ದರು.

ಹೀಗಾಗಿ ಖರ್ಗೆ ಬಾಯಿ ಮುಚ್ಚಿಸಲು ಸಿದ್ದರಾಮಯ್ಯ ಮೊದಲ ಬಾರಿಗೆ ಶಾಸಕರಾಗಿರುವ ಪ್ರಿಯಾಂಕ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ  ಸಿದ್ದರಾಮಯ್ಯ ಖರ್ಗೆ ಬಾಯಿಗೆ ಬೀಗ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಸಚಿವ ಸ್ಥಾನ ನೀಡು ಮೂಲಕ ದಲಿತ ಸಮುದಾಯವನ್ನು ಸಂತೃಪ್ತಿ ಪಡಿಸಿದ್ದಾರೆ.

ಸಂಪುಟ ಪುನಾರಚನೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಸಿಎಂ ದಲಿತ ಮುಖ್ಯಮಂತ್ರಿ ವಿಚಾರವನ್ನು ತಟಸ್ಥಗೊಳಿಸಿದ್ದಾರೆ. ಆದರೆ ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕರಾದ ಹಾಗೂ ಸಂಪುಟದಿಂದ ಕೈ ಬಿಡಲಾಗಿರುವ ಗುಲ್ಬರ್ಗಾದ ಖಮರುಲ್ ಇಸ್ಲಾಂ ಮತ್ತು ಬಾಬೂರಾವ್ ಚಿಂಚನಸೂರ್ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಪ್ರಬಲ ಮುಖಂಡರಾದ ಬಾಬೂರಾವ್ ಚಿಂಚನಸೂರ್ ಮತ್ತು ಖಮರುಲ್ ಇಸ್ಲಾಂ ಅವರನ್ನು ಸಂಪುಟದಲ್ಲೇ ಉಳಿಸಿಕೊಳ್ಳುವಂತೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಬೇಡಿಕೆಯಿಟ್ಟಿದ್ದರು. ಆದರೂ ಇದ್ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದ ಸಿಎಂ ಅವರಿಬ್ಬರನ್ನು ಸಂಪುಟದಿಂದ ಕೈ ಬಿಟ್ಟಿದ್ದಾರೆ.

ಈ ಇಬ್ಬರು ಸಚಿವರನ್ನು ಸಂಪುಟದಿಂದ ಕೈ ಬಿಟ್ಟಿರುವುದು, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಮುಸ್ಲಿಂ ಸಮುದಾಯವೇ ಅಧಿಕವಿರುವ ಕಲಬುರಗಿಯಿಂದ  ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಮುಂದಿನ  ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

SCROLL FOR NEXT