ಬೆಂಗಳೂರು: ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರ ಬಂಡಾಯ ಶಮನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಕಸರತ್ತು ನಡೆಸುತ್ತಿದ್ದು, ಇದೀಗ ಅತೃಪ್ತ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡಲು ಸಿದ್ಧತೆ ನಡೆಸಿದ್ದಾರೆ.
ಸುಮಾರು 20 ಹಿರಿಯ ಕಾಂಗ್ರೆಸ್ ಶಾಸಕರಿಗೆ ನಿಮಗ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ಸಿಎಂ ನಿರ್ಧರಿಸಿದ್ದು, ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರೊಂದಿಗೆ ಚರ್ಚಿಸಿದ ನಂತರ ಹೈಕಮಾಂಡ್ ಗೆ ಪಟ್ಟಿ ರವಾನಿಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಸಂಪುಟ ಪುನಾರಚನೆಯಿಂದಾಗಿ ಸಚಿವ ಸ್ಥಾನ ಕಳೆದುಕೊಂಡ ಹಾಗೂ ಸಚಿವ ಆಕಾಂಕ್ಷಿ ಅತೃಪ್ತ ಶಾಸಕರ ನಾಯಕತ್ವ ಬದಲಾವಣೆಯ ಕೂಗು ತಾರಕಕ್ಕೇರುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಎಂ, ಇಂದು ಸಚಿವ ಸ್ಥಾನ ಕಳೆದುಕೊಂಡ ಪಿ.ಟಿ.ಪರಮೇಶ್ವರ ನಾಯಕ್ ಹಾಗೂ ಸಚಿವ ಸ್ಥಾನದ ಆಕಾಂಕ್ಷಿ ಮಾಲಿಕಯ್ಯ ಗುತ್ತೆದಾರ್ ಅವರಿಗೆ ಕರೆ ಮಾಡಿ ಮನವೊಲಿಸುವ ಯತ್ನ ಮಾಡಿದ್ದಾರೆ. ಅಲ್ಲದೆ ಇತರೆ ಬಂಡಾಯ ಶಾಸಕರ ಮನವೊಲಿಕೆಗಾಗಿ ದಿಗ್ವಿಜಯ್ ಸಿಂಗ್ ಅವರು ನಾಳೆ ಅತೃಪ್ತ ಶಾಸಕರ ಸಭೆ ಕರೆದಿದ್ದಾರೆ.