ಮೈಸೂರು: ಸಿಎಂ ಸಿದ್ದರಾಮಯ್ಯ ಜೊತೆ ಮಾಜಿ ಸಂಸದ ವಿಜಯ ಶಂಕರ್ ಇದ್ದ ಫೋಟೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಜೊತೆಗೆ ವಿಜಯ ಶಂಕರ್ ಕಾಂಗ್ರೆಸ್ ಸೇರಲಿದ್ದಾರೆ ಎಂಬ ವದಂತಿಯೂ ಹಬ್ಬಿತ್ತು.ಆದರೆ ಭಾನುವಾರ ಬಿಜೆಪಿ ಬಿಜೆಪಿ ರೈತ ಮೋರ್ಚಾ ಹಮ್ಮಿಕೊಂಡಿದ್ದ ರೈತರ ಪಾದಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಎಲ್ಲಾ ಊಹಾ ಪೋಹಗಳಿಗೂ ತೆರೆ ಎಳೆದಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿಜಯ ಶಂಕರ್, ಒಂದು ವರ್ಷದ ಹಿಂದೆ, ರಾಕೇಶ್ ಸಿದ್ದರಾಮಯ್ಯ ಅವರ 11ನೇ ದಿನದ ಕಾರ್ಯಕ್ರಮದ ವೇಳೆ ನಾನು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ, ಅಂದು ಸಿಎಂ ಜೊತೆಗೆ ತೆಗಿಸಿಕೊಂಡಿದ್ದ ಫೋಟೋ ಈಗ ವೈರಲ್ ಆಗಿದೆ, ಅದಾದ ನಂತರ ನಾನು ಸಿಎಂ ಅವರನ್ನು ಭೇಟಿಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಸಂಬಂಧ ವದಂತಿಯನ್ನು ನಿರಾಕರಿಸಲೂ ಇಲ್ಲ, ಅಥವಾ ಸ್ಫಷ್ಟನೆ ಕೂಡ ನೀಡಲೂ ಇಲ್ಲ, ಕಳೆದ 30 ವರ್ಷಗಳಿಂದ ಪಕ್ಷ ನನಗೆ ಉತ್ತಮ ಅವಕಾಶ ನೀಡಿದೆ, ಆದರೆ ಕೆಲವೊಬ್ಬ ನಾಯಕರಿಂದ ನನಗೆ ನೋವುಂಟಾಗಿದೆ ಎಂದು ಹೇಳಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ನನ್ನನ್ನು ಕಳೆದ ಬಾರಿ ಬಲವಂತವಾಗಿ ನನ್ನನ್ನು ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲಾಯಿತು ಎಂದು ತಿಳಿಸಿದರು.
ಪಕ್ಷದ ಹಲವು ಹಿರಿಯರು ತಮ್ಮ ಜೊತೆ ಸಮಾಲೋಚಿಸಿದ್ದು, ಶೀಘ್ರವೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.