ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಈ ಮಧ್ಯೆ ರಾಜಕೀಯ ಪಕ್ಷಗಳು ಕೆಸರೆರಚಾಟದಲ್ಲಿ ತೊಡಗಿವೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಹೆಚ್ ಸಿ ಬಾಲಕೃಷ್ಣ ಅವರು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ತೊಡೆ ತಟ್ಟಿದ್ದಾರೆ.
ಎಚ್.ಸಿ.ಬಾಲಕೃಷ್ಣ ಹೊಸ ಬಾಂಬ್ ಬೆದರಿಕೆ ಹಾಕಿದ್ದಾರೆ. ನಿಖಿಲ್ ಗೌಡ ನಮ್ಮ ವಿರುದ್ಧ ಮಾತನಾಡಿದರೆ ಅವರ ಕ್ಯಾಸೆಟ್ ಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನಿಖಿಲ್ ಗೌಡ ಅವರು ತಾಕತ್ತಿದ್ದರೆ ಸಿಡಿ ಬಿಡುಗಡೆ ಮಾಡಲು ಹೇಳಿ. ನಾನು ಯಾರಿಗೂ ಹೆದರಲ್ಲ. ಬಾಲಕೃಷ್ಣ ಯೋಗ್ಯತೆಯನ್ನು ರಾಜ್ಯದ ಆರೂವರೆ ಕೋಟಿ ಜನರು ನೋಡಿದ್ದಾರೆ. ಯಾವ ರೀತಿ ಬೆನ್ನಿಗೆ ಚೂರಿ ಹಾಕಿ ಹೋಗಿದ್ದಾರೆ ಅಂತಾ ಗೊತ್ತು ಎಂದು ಗುಡುಗಿದರು.
ಇದೇ ವೇಳೆ ಮಂಡ್ಯದಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಸಹ ಹೆಚ್ ಸಿ ಬಾಲಕೃಷ್ಣ ವಿರುದ್ಧ ಕಿಡಿಕಾರಿದ್ದು ಯಾವ ಸಿಡಿ ಬಾಂಬ್ ಸಿಡಿಸುತ್ತಾರೆ ಸಿಡಿಸಲಿ ನಾನು ನೋಡುತ್ತೇನೆ ಎಂದು ಹೇಳಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಬಾಲಕೃಷ್ಣರನ್ನು ಈ ಬಾರಿ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಕುಮಾರಸ್ವಾಮಿ ಅವರು ಈಗಾಗಲೇ ಜೆಡಿಎಸ್ ಅಭ್ಯರ್ಥಿ ಮಂಜು ಪರ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಈ ಮಧ್ಯೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಗೌಡ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬಾಲಕೃಷ್ಣರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ.
ಇದರಿಂದ ಒಂದಷ್ಟು ಹಿನ್ನಡೆಯಾಗುತ್ತಿರುವುದನ್ನು ಅರಿತ ಬಾಲಕೃಷ್ಣ, ನಿಖಿಲ್ಗೌಡ ಅವರಪ್ಪನ ಪರ ಮತ ಕೇಳಿಕೊಂಡು ಹೋಗಲಿ ಅದನ್ನು ಬಿಟ್ಟು ನಮ್ಮಗಳ ಬಗ್ಗೆ ಮಾತನಾಡಿದರೆ ಅವರ ಕ್ಯಾಸೆಟ್ಗಳು ನಮ್ಮ ಬಳಿಯಿವೆ, ಅವನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಸಾರ್ವಜನಿಕವಾಗಿ ರವಾನಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos