ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಪುತ್ರ ನಿಖಿಲ್ ವಿರುದ್ಧ ಹೆಚ್.ಸಿ.ಬಾಲಕೃಷ್ಣ ಅವರು ಸಿಡಿ ಬಿಡುಗಡೆ ಮಾಡುತ್ತೇನೆಂದು ಹೇಳಿದ್ದಾರೆ, ಬಾಲಕೃಷ್ಣ ಅವರು ಅದ್ಯಾವ ಬಾಂಬ್ ಸಿಡಿಸುತ್ತಾರೋ ನಾನು ನೋಡುತ್ತೇನೆಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ.
ಮಾಜಿ ಶಾಸಕ ಬಾಲಕೃಷ್ಣ ಅವರ ಸಿಡಿ ಬಿಡುಗಡೆ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಬಾಲಕೃಷ್ಣ ಅವರು ಅದೆಂತಹ ಬಾಂಬ್ ಸಿಡಿಸುತ್ತಾರೋ ಸಿಡಿಸಲಿ, ನಾನು ನೋಡುತ್ತೇನೆಂದು ಸವಾಲು ಹಾಕಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿಯವರ ವಂದೇ ಮಾತರಂ ಗೀತೆಗೆ ಅಗೌರವ ತೋರಿರುವ ಕುರಿತಂತೆ ಮಾತನಾಡಿದ ಅವರು, ರಾಹುಲ್ ಅವರು ವಿಶ್ವೇಶ್ವರಯ್ಯ ಹೆಸರು, ಬಸವಣ್ಣ ಅವರ ವಚನ ಹೇಳಲು ಹೋಗಿ ಅಲ್ಲಿ ನಗೆಪಾಟಲಿಗೆ ಈಡಾಗಿದ್ದರು. ಇದೀಗ ವಂದೇ ಮಾತರಂ ವಿಚಾರದಲ್ಲಿ ಅದೇ ರೀತಿ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಬಳಿಕ ಅಮಿತ್ ಶಾ ಭೇಟಿ ಕುರಿತ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಅಮಿತ್ ಶಾ ಅವರನ್ನೇಕೆ ನಾನು ಭೇಟಿಯಾಗಲಿ? ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೇನಾದರೂ ಕನಸು ಬಿದ್ದಿರಬೇಕು. ಜನರನ್ನು ದಿಕ್ಕು ತಪ್ಪಿಸುವ ಸಲುವಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಗೆಲವು ಸಾಧಿಸುವ ಕುರಿತು ಕಾಂಗ್ರೆಸ್ ಗುಪ್ತಚರ ವರದಿಗಳು ತಿಳಿಸಿವೆ. ಹೀಗಾಗಿ ಸಿದ್ದರಾಮಯ್ಯ ಅವರು ಇದೀಗ ಜೆಡಿಎಸ್ ಪಕ್ಷವನ್ನು ಗುರಿ ಮಾಡುತ್ತಿದ್ದಾರೆಂದಿದ್ದಾರೆ.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಬಾಲಕೃಷ್ಣರನ್ನು ಈ ಬಾರಿ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಕುಮಾರಸ್ವಾಮಿ ಅವರು ಈಗಾಗಲೇ ಜೆಡಿಎಸ್ ಅಭ್ಯರ್ಥಿ ಮಂಜು ಪರ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಈ ಮಧ್ಯೆ ಕ್ಷೇತ್ರದಲ್ಲಿ ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಗೌಡ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬಾಲಕೃಷ್ಣರ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದಾರೆ.
ಇದರಿಂದ ಒಂದಷ್ಟು ಹಿನ್ನಡೆಯಾಗುತ್ತಿರುವುದನ್ನು ಅರಿತ ಬಾಲಕೃಷ್ಣ ಅವರು, ನಿಖಿಲ್ಗೌಡ ಅವರಪ್ಪನ ಪರ ಮತ ಕೇಳಿಕೊಂಡು ಹೋಗಲಿ ಅದನ್ನು ಬಿಟ್ಟು ನಮ್ಮ ವಿರುದ್ಧ ಮಾತನಾಡಿದರೆ ಅವರ ಕ್ಯಾಸೆಟ್ಗಳು ನಮ್ಮ ಬಳಿಯಿವೆ, ಅವುಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos