ರಾಜಕೀಯ

ವಿಶ್ವಾಸಮತ ಯಾಚನೆಗೆ ಇಂದು ಇತಿಶ್ರೀ ಹಾಡುತ್ತಾರಾ ಮುಖ್ಯಮಂತ್ರಿ?

Sumana Upadhyaya
ಬೆಂಗಳೂರು: ಸೋಮವಾರವೇ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ನಡೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಕಳೆದ ವಾರದಂತೆ ನಿನ್ನೆ ಬೆಳಗ್ಗೆ 11 ಗಂಟೆಗೆ ಕಲಾಪದಲ್ಲಿ ಸೇರಿದ ಸದನ ಸದಸ್ಯರು ಮಾತು, ಚರ್ಚೆ, ಆರೋಪ, ಪ್ರತ್ಯಾರೋಪಗಳಲ್ಲಿಯೇ ಕಾಲ ಕಳೆದರು. 
ಸ್ಪೀಕರ್ ರಮೇಶ್ ಕುಮಾರ್ ಸೋಮವಾರವೇ ವಿಶ್ವಾಸಮತ ಯಾಚನೆಯಾಗುತ್ತದೆ, ನಡೆಯದೆ ನಾನು ಸದನ ಬಿಟ್ಟು ಹೋಗುವುದಿಲ್ಲ ಎಂದು ಕಳೆದ ಶುಕ್ರವಾರ ಹೇಳಿದ್ದರಿಂದ ಸೋಮವಾರ ಎಷ್ಟು ಹೊತ್ತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುತ್ತಾರೆ ಎಂದು ರಾತ್ರಿಯವರೆಗೆ ರಾಜ್ಯದ ಜನತೆ ಕುತೂಹಲದಿಂದ ಕಾಯುತ್ತಿದ್ದರು. 
ಸ್ಪೀಕರ್ ಅವರ ರಾಜೀನಾಮೆ ಎಚ್ಚರಿಕೆ, ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆ ಎಂಬ ನಕಲಿ ಪತ್ರ ವೈರಲ್, ವಿಳಂಬ, ಕಲಾಪ ಮುಂದೂಡಿಕೆ, ಕ್ಯಾಂಟೀನ್ ಮುಚ್ಚಿದೆ ಹಸಿವಾಗುತ್ತಿದೆ , ನಮ್ಗೆ ಡಯಾಬಿಟಿಸ್, ಬಿಪಿ ಇದೆ ನಮ್ಮನ್ನು ಬಿಟ್ಬಿಟಿ ಎಂದು ಸಂಜೆ 5 ಗಂಟೆಯಾಗುತ್ತಿದ್ದಂತೆ ಶಾಸಕರ ಬೇಡಿಕೆ ಇವುಗಳಲ್ಲಿ ದಿನವಿಡೀ ಕಳೆದು ಹೋಯಿತು. 
ಕೊನೆಗೆ ಕಣ್ಣೀರಿನಲ್ಲಿ ರಾತ್ರಿ 11.30ಗೆ ಸ್ಪೀಕರ್ ರಮೇಶ್ ಕುಮಾರ್ ಸದನವನ್ನು ಮುಂದೂಡಿ ನಾಳೆ ಸಂಜೆ 6 ಗಂಟೆಯೊಳಗೆ ವಿಶ್ವಾಸಮತ ಯಾಚಿಸಿ ಎಂದು ಕೊನೆಯ ಡೆಡ್ ಲೈನ್ ಹಾಕುವುದರೊಂದಿಗೆ ಬಿಜೆಪಿ ಸದಸ್ಯರ ಪ್ರತಿಭಟನೆಯೊಂದಿಗೆ ನಿನ್ನೆಯ ಕಲಾಪ ಮುಕ್ತಾಯವಾಯಿತು.
ನಾನು ಕೊಟ್ಟಿರುವ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನನಗೆ ತೀವ್ರ ನೋವಾಗುತ್ತಿದೆ. ಈ ನೋವನ್ನು ನಾನೇ ನುಂಗಿಕೊಳ್ಳುತ್ತೇನೆ ಎಂದು ನಿನ್ನೆ ರಾತ್ರಿ ಬಿಜೆಪಿ ಸದಸ್ಯರ ತೀವ್ರ ಗದ್ದಲ, ಕೋಲಾಹಲದ ನಡುವೆ ಸದನವನ್ನು ಇಂದಿಗೆ ಮುಂದೂಡಿದರು. 
SCROLL FOR NEXT