ರಾಜಕೀಯ

ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ, ಸರ್ಕಾರಿ ನೌಕರರಿಗೆ ವೇತನ ನೀಡುವುದು ಕಷ್ಟ: ಸ್ಪೀಕರ್ ಆತಂಕ

Sumana Upadhyaya
ಬೆಂಗಳೂರು: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರವೂ ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದ್ದು ಇತ್ತ ಸ್ಪೀಕರ್ ಕೂಡ ತೀರ್ಮಾನ ನೀಡಿಲ್ಲ.
ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್ ರಾಜ್ಯದಲ್ಲಿ ಹೊಸ ಸರ್ಕಾರ ಈ ತಿಂಗಳ 31ರೊಳಗೆ ಅಸ್ತಿತ್ವಕ್ಕೆ ಬರದಿದ್ದರೆ ಹೊಸ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಕೆ ಬರುವುದು ಕೂಡ ಅನಿವಾರ್ಯವಾಗಬಹುದು ಎಂದರು.
ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಹಣಕಾಸು ವಿಧೇಯಕ ಮಂಡನೆಯಾಗಬೇಕಿತ್ತು. ಆದರೆ, ಅತೃಪ್ತ ಶಾಸಕರು ಸದನದಲ್ಲಿ ಅನುಪಸ್ಥಿತಿಯಾದ ನಂತರ ಮೈತ್ರಿ ಸರ್ಕಾರ ಬಹುಮತವನ್ನು ಕಳೆದುಕೊಂಡ ನಂತರ ಹಣಕಾಸು ವಿಧೇಯಕ ಮಂಡನೆಗೆ ವಿಪಕ್ಷ ಬಿಜೆಪಿ ಅವಕಾಶ ನೀಡಲಿಲ್ಲ. ವಿಶ್ವಾಸಮತ ಯಾಚನೆಗೆ ಪಟ್ಟು ಹಿಡಿದು ಅದರಲ್ಲಿ ಹೆಚ್ ಡಿ ಕುಮಾರಸ್ವಾಮಿಯವರು ವಿಫಲವಾಗಿ ಸರ್ಕಾರ ಬಿದ್ದುಹೋಯಿತು. 
ಹಣಕಾಸು ವಿಧೇಯಕ ಜುಲೈ 31ರೊಳಗೆ ಅನುಮೋದನೆಯಾಗದೆ ಹೋದರೆ ಸರ್ಕಾರದ ಖಜಾನೆಯಿಂದ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಆಗ ಸರ್ಕಾರದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುವುದಿರಲಿ, ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸಹ ಸರ್ಕಾರದ ಬಳಿ ಹಣ ಇಲ್ಲದಂತಾಗುತ್ತದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಸ್ಪೀಕರ್ ವಾಸ್ತವತೆಯನ್ನು ಮುಂದಿಟ್ಟರು. 
ಬಿಜೆಪಿ ಮತ್ತು ಕಾಂಗ್ರೆಸ್​ನ ಕೆಲ ನಾಯಕರು ತಮ್ಮ ಬಳಿ ನಿನ್ನೆ ಮಾತನಾಡಿದ್ದಾರೆ. ಬಿಜೆಪಿಯವರು ಯಾವಾಗ ಸರ್ಕಾರ ರಚನೆ ಮಾಡುತ್ತಾರೋ ಅವರಿಗೆ ಬಿಟ್ಟಿದ್ದು. ಜುಲೈ 31ರೊಳಗೆ ಸರ್ಕಾರ ರಚನೆಯಾಗಿ ಹಣಕಾಸು ವಿಧೇಯಕ ಮಂಡನೆಯಾಗಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅದು ಅಂಗೀಕಾರವಾಗಬೇಕು. ಬಿಜೆಪಿಯವರು ಏನು ಮಾಡುತ್ತಾರೋ ಆ ದೇವರಿಗೇ ಗೊತ್ತು ಎಂದು ಸ್ಪೀಕರ್ ಹೇಳಿದರು. 
ಶಾಸಕರ ರಾಜೀನಾಮೆ ವಿಚಾರದಲ್ಲಿ ವಿಳಂಬ ಮಾಡುತ್ತಿರುವುದರಿಂದಲೇ ನೂತನ ಸರ್ಕಾರ ರಚನೆಗೆ ವಿಳಂಬವಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆಯಲ್ಲಾ ಎಂಬ ಮಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್, ರಾಜೀನಾಮೆ ನೀಡಿದ ಶಾಸಕರನ್ನ ನಿಯಮ  ಪ್ರಕಾರವೇ ವಿಚಾರಣೆಗೆ ಕರೆದಿದ್ದೆ. ಅವರು ಬಂದಿಲ್ಲ. ಪದೇ ಪದೇ ನೊಟೀಸ್ ಕೊಡುತ್ತಾ ಕೂರಲು ನನಗೇನು ಬೇರೆ ಕೆಲಸ ಇಲ್ಲವೇ, ಈ ದೇಶದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಇರೋದಿಲ್ಲ, ಕೂಲಿ ಮಾಡುವವನಿಗೂ, ಶ್ರೀಮಂತನಿಗೂ ಒಂದೇ ಕಾನೂನು, ನೆನಪಿಟ್ಟುಕೊಳ್ಳಿ ಎಂದರು. 
SCROLL FOR NEXT