ಬೆಂಗಳೂರು: ಆಪರೇಷನ್ ಕಮಲ ಸದ್ಯಕ್ಕೆ ತಣ್ಣಗಾಗಿದೆ. ಬಿಜೆಪಿ ಇದೀಗ ವಿವಾದಿತ ಜಿಂದಾಲ್ ಕಂಪೆನಿಗೆ ಸರ್ಕಾರಿ ಭೂಮಿ ಕೊಡುವ ವಿಚಾರದಲ್ಲಿ ಮತ್ತು ಐಎಂಎ ಹಗರಣದ ಬಗ್ಗೆ ಹೋರಾಟ ನಡೆಸುತ್ತಿದೆ.
ಹಾಾದರೆ ಇನ್ನು ಆಪರೇಷನ್ ಕಮಲ ವಿಚಾರಕ್ಕೆ ಬಿಜೆಪಿ ಕೈ ಹಾಕುವುದಿಲ್ಲವೇ, ಮುಂದಿನ ದಿನಗಳಲ್ಲಿ ಬಿಜೆಪಿಯ ತಂತ್ರಗಾರಿಕೆ ಏನು ಎಂಬ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ಬಿ ಎಸ್. ಯಡಿಯೂರಪ್ಪ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ್ದಾರೆ.
ತಾವು ಮರುಪರಿಶೀಲಿಸುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದರೂ ಕೂಡ ನೀವು ಜಿಂದಾಲ್ ಸ್ಟೀಲ್ ಕಂಪೆನಿಗೆ ಭೂಮಿ ಮಾರಾಟ ವಿಚಾರದಲ್ಲಿ ಪ್ರತಿಭಟನೆ ಮಾಡುತ್ತಿದ್ದೀರಿ?
ಮನಸೋ ಇಚ್ಛೆ ಬೆಲೆಗೆ ಸರ್ಕಾರಿ ಭೂಮಿಯನ್ನುಮಾರಾಟ ಮಾಡಲು ಸರ್ಕಾರ ನಿಶ್ಚಯಿಸಿದೆ. ಈ ಮೂಲಕ ವಂಚನೆಯೆಸಗಲು ಸರ್ಕಾರ ಯತ್ನಿಸುತ್ತಿದ್ದು ನಂತರ ತೀವ್ರ ಒತ್ತಡದಿಂದ ಹಿಂದೆ ಸರಿಯಲು ನೋಡುತ್ತಿದೆ. ಆದರೆ ನಾವು ಸರ್ಕಾರ ನಿರ್ಧಾರವನ್ನು ಹಿಂತೆಗೆದುಕೊಳ್ಳುವವರೆಗೆ ಸುಮ್ಮನೆ ಕೂರುವುದಿಲ್ಲ.
2006-07ರಲ್ಲಿ ಅಂದಿನ ಬಿಜೆಪಿ-ಜೆಡಿಎಸ್ ನೇತೃತ್ವದ ಸರ್ಕಾರ ತೆಗೆದುಕೊಂಡ ನಿರ್ಧಾರದಂತೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಮುಂದುವರಿದಿದೆ ಎಂದು ಸರ್ಕಾರ ಹೇಳುತ್ತಿದೆಯಲ್ಲವೇ?
-ಜಿಂದಾಲ್ ವಿರುದ್ಧ ನಮಗೆ ಯಾವುದೇ ಆಕ್ಷೇಪವಿಲ್ಲ. ನಾವು ಭೂಮಿ ಮಾರಾಟಕ್ಕೆ ಮಾತ್ರ ವಿರೋಧಿಸುತ್ತಿದ್ದೇವೆ. ಉಪ ಸಮಿತಿ ನೇಮಿಸುವ ನಿರ್ಧಾರ ಕೇವಲ ಜನರನ್ನು ಮೂರ್ಖರನ್ನಾಗಿಸುವ ಪಿತೂರಿಯಷ್ಟೆ. ಆಂತರಿಕ ಒಪ್ಪಂದಕ್ಕೆ ಈಗಾಗಲೇ ತಲುಪಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ತಕ್ಷಣ ಯಾಕೆ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ. ನಾವು ಆಡಳಿತ ನಡೆಸುತ್ತಿದ್ದಾಗ ಯಾವುದೇ ಒಪ್ಪಂದ ನಡೆದಿರಲಿಲ್ಲ.
ಮೈತ್ರಿ ಸರ್ಕಾರಕ್ಕೆ ಎಷ್ಟು ಸಮಯ ಕೊಡುತ್ತೀರಿ?
ಸರ್ಕಾರಕ್ಕೆ ಸಮಯ ನೀಡಲು ನನಗೆ ಇಷ್ಟವಿಲ್ಲ. ಶಾಸಕರು ಹಲವು ವಿಚಾರಗಳ ಕುರಿತು ಸರ್ಕಾರದ ಜೊತೆ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದಲ್ಲಿ ಸುಮಾರು 20 ಅತೃಪ್ತ ಹೊಂದಿದ ಶಾಸಕರಿದ್ದಾರೆ. ಸರ್ಕಾರದಿಂದ ಹೊರನಡೆಯಲು ನಿರ್ಧರಿಸುವ ಈ ಸಂದರ್ಭ ತುಂಬಾ ಮಹತ್ವದ್ದು.
ಸರ್ಕಾರ ಪೂರ್ಣ 5 ವರ್ಷ ಮುಗಿಸುತ್ತದೆ ಎಂದು ಹೇಳುತ್ತಿದೆಯಲ್ಲವೇ?
-ಸರ್ಕಾರ ಪೂರ್ಣಾವಧಿ ಮುಗಿಸಿದರೆ ನಮಗೆ ಯಾವುದೇ ಸಮಸ್ಯೆಯಿಲ್ಲ. ನಾವು ವಿರೋಧ ಪಕ್ಷದಲ್ಲಿ ಇರುತ್ತೇವೆ. ಆದರೆ ಅಭಿವೃದ್ಧಿ ಎಲ್ಲಿದೆ? ರೈತರ ಸಾಲಮನ್ನಾ ವಿಷಯ ಗೊಂದಲದಲ್ಲಿದೆ. ರೈತರ ಖಾತೆಯಲ್ಲಿ ಹಣ ಠೇವಣಿಯಿಡುವ ನಿರ್ಧಾರ ಹಿಂತೆಗೆದುಕೊಳ್ಳಲಾಗಿದೆ.ಶಾಸನ ಸಮಿತಿ ಅಧ್ಯಕ್ಷ ಎ ಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ. ಸರ್ಕಾರದಲ್ಲಿ ಅನೇಕ ಭಿನ್ನಾಭಿಪ್ರಾಯವಿದೆ. 15ರಿಂದ 20 ದಿನ ಕಾಯಿರಿ, ಮತ್ತೆ ಏನಾಗುತ್ತದೆ ನೋಡಿ.
ಸರ್ಕಾರ ಬಿದ್ದು ಹೋದರೆ ನೀವು ಚುನಾವಣೆ ಬಯಸುತ್ತೀರಾ ಅಥವಾ ಈಗಿರುವ ಶಾಸಕರನ್ನಿಟ್ಟುಕೊಂಡು ಸರ್ಕಾರ ರಚಿಸಲು ನೋಡುತ್ತೀರಾ?
-ಚುನಾವಣೆಯ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ 105 ಶಾಸಕರಿದ್ದಾರೆ. ಸರ್ಕಾರ ರಚಿಸಲು ಸಾಂವಿಧಾನಿಕ ಆಯ್ಕೆಗಳನ್ನು ಹುಡುಕುತ್ತೇವೆ.
ಕೇಂದ್ರ ನಾಯಕರು ಸರ್ಕಾರ ರಚನೆಗೆ ಒಲವು ತೋರಿಸುತ್ತಿಲ್ಲ ಎಂಬ ಮಾತಿದೆಯಲ್ಲವೇ?
ಕೇಂದ್ರ ನಾಯಕರು ರಾಜ್ಯದಲ್ಲಿ ನನ್ನ ನಾಯಕತ್ವದಲ್ಲಿ ನಂಬಿಕೆಯಿಟ್ಟು ನಾನು ತೆಗೆದುಕೊಳ್ಳುವ ನಿರ್ಧಾರಗಳನ್ನು ಗೌರವಿಸುತ್ತಾರೆ.
ರೈತರ ಸಾಲಮನ್ನಾಕ್ಕೆ ನೀವು ಸರ್ಕಾರವನ್ನು ಟೀಕಿಸುತ್ತೀರಾ?
ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ರೈತರ ಸಾಲಮನ್ನಾ ಮಾಡುತ್ತೇವೆ ಎಂದು ಸಿಎಂ ಕುಮಾರಸ್ವಾಮಿ ಘೋಷಿಸಿದ್ದರು. ಆದರೆ ಇಲ್ಲಿ ತನಕ ಶೇಕಡಾ 20ರಷ್ಟು ಕೂಡ ರೈತರ ಸಾಲಮನ್ನಾ ಆಗಿಲ್ಲ. ಹಲವು ರೈತರು ಸರ್ಕಾರದ ಮೇಲೆ ನಂಬಿಕೆಯಿಟ್ಟುಕೊಂಡು ಬ್ಯಾಂಕಿಗೆ ಸಾಲ ಕಟ್ಟದೆ ವಂಚಕರೆನಿಸಿಕೊಂಡಿದ್ದಾರೆ.
ಬಳ್ಳಾರಿ ತನ್ನ ಭದ್ರನೆಲೆ ಎಂದು ಬಿಜೆಪಿ ಖಂಡಿತವಾಗಿ ಹೇಳಬಲ್ಲದೇ?
-ಬಳ್ಳಾರಿ ಯಾಕೆ, ಬಿಜೆಪಿ ಲೋಕಸಭೆಯಲ್ಲಿ 25+1 ಸೀಟುಗಳನ್ನು ಗೆದ್ದಿದ್ದು ಬಿಜೆಪಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ.
ಸಂಪುಟ ವಿಸ್ತರಣೆ ಸರ್ಕಾರಕ್ಕೆ ಸಹಾಯವಾಗುತ್ತದೆಯೇ?
ಈಗ ಇಬ್ಬರನ್ನು ತೆಗೆದುಕೊಂಡಿದ್ದು ಮುಂದೆ ನಾಲ್ವರನ್ನು ತೆಗೆದುಕೊಳ್ಳಬಹುದು, ಇದೊಂತರಾ ಹಗಲು ದರೋಡೆ.
ಇದು ಜೀವವಿರುವಂತೆ ಕಂಡರೂ ಸಹ ಸರ್ಕಾರ ಸತ್ತುಹೋಗಿದೆ. ಕಳೆದ ವಾರ ನಾನು ಬರಗಾಲಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದೆ. ಬರಗಾಲವನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜನರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುವುದಿಲ್ಲ.
ಹಲವರು ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆಯೇ?
ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ.