ರಾಜಕೀಯ

ಮಂಡ್ಯ: ಅನರ್ಹ ಶಾಸಕ ನಾರಾಯಣಗೌಡ ಮೇಲೆ ಚಪ್ಪಲಿ ಎಸೆದ ಜೆಡಿಎಸ್ ಕಾರ್ಯಕರ್ತರು

Lingaraj Badiger

ಮಂಡ್ಯ: ಮಂಡ್ಯ ಜಿಲ್ಲೆ ಕೆಆರ್ ಪೇಟೆ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಕೆ.ಸಿ. ನಾರಾಯಣಗೌಡ ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ಚಪ್ಪಲಿ ತೂರಿದ್ದಾರೆ. ಇದರಿಂದ, ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇಂದು ನಾರಾಯಣಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ಬಿಎಲ್ ದೇವರಾಜು ಅವರು ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿದ್ದ ಈ ವೇಳೆ ಈ ಘಟನೆ ನಡೆದಿದೆ. 

ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಏಕಕಾಲಕ್ಕೆ ಮೆರವಣಿಗೆಯಲ್ಲಿ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿ, ಪರಸ್ಪರ ಮಾತಿನ ಚಕಮಕಿ ನಡೆಯಿತು. ಈ ವೇಳೆ ಬಿಜೆಪಿ ಅಭ್ಯರ್ಥಿ ಮೇಲೆ ಕೆಲವರು ಚಪ್ಪಲಿ ತೂರಿದ್ದಾರೆ. ಅಲ್ಲದೆ ಜೆಡಿಎಸ್‌ಗೆ ದ್ರೋಹ ಬಗೆದು ಬಿಜೆಪಿಗೆ ಹಾರಿದ್ದೀರ ಎಂದು ಕೆಲ ಜೆಡಿಎಸ್ ಕಾರ್ಯಕರ್ತರು ನಾರಾಯಣಗೌಡ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದರಿಂದ ಆಕ್ರೋಶಗೊಂಡ ನಾರಾಯಣಗೌಡ, ಜೆಡಿಎಸ್‌ ಕಾರ್ಯಕರ್ತರೇ ತಮ್ಮ ಮೇಲೆ ಚಪ್ಪಲಿ ತೂರಿದ್ದಾಗಿ ಆರೋಪಿಸಿದರು.  ‘ಚಪ್ಪಲಿಯಲ್ಲಿ ಹೊಡೆಯಲು ಅವರಾರು? ಗೂಂಡಾಗಿರಿ ಮಾಡಲು ಬಂದಿದ್ದಾರಾ? ನಾನೂ ಜೆಡಿಎಸ್‌ನಲ್ಲಿ ಇದ್ದವನು. ಅಂತಹ ಸಂಸ್ಕೃತಿಯನ್ನು ನಾನು ಕಲಿತಿಲ್ಲ. ನಾನೇ ಅವರನ್ನು ಕೇಳುತ್ತೇನೆ’ ಎನ್ನುತ್ತಾ  ಜೆಡಿಎಸ್‌ ಕಾರ್ಯಕರ್ತರತ್ತ ನುಗ್ಗಿದರು. ಆದರೆ ಪೊಲೀಸರು ಅವರನ್ನು ಸಮಾಧಾನಪಡಿಸಿದರು. ಆಗ, ಕೆಂಡಾಮಂಡಲರಾದ ಅವರು, ‘ಭದ್ರತೆ ನೀಡಲು ವಿಫಲರಾಗಿದ್ದೀರಿ’ ಎಂದು ಪೊಲೀಸರ ವಿರುದ್ಧವೂ ಹರಿಹಾಯ್ದರು.

SCROLL FOR NEXT