ರಾಜಕೀಯ

ಜೆಪಿ ನಡ್ಡಾ ನೀಡಿದ್ದ ಭರವಸೆ ವಿಫಲ; ಹಳೇಯ ಮೈಸೂರು ಭಾಗಕ್ಕಿಲ್ಲ ಸಂಪುಟದಲ್ಲಿ ಪ್ರಾತಿನಿಧ್ಯ; ನಾಯಕರ ಶೀತಲ ಸಮರ!

Shilpa D

ಮೈಸೂರು: ಸಚಿವ ಸಂಪುಟ ರಚನೆ ಕಸರತ್ತು ಅನೇಕ ಹಿರಿಯ ಬಿಜೆಪಿ ನಾಯಕರು ಮತ್ತು ಸಚಿವ ಸ್ಥಾನದ ಆಕಾಂಕ್ಷಿಗಳ ಕಣ್ಣು ಕೆಂಪಾಗಿಸಿದೆ.  ಕ್ಯಾಬಿನೆಟ್‌ನಲ್ಲಿ ಪ್ರಾದೇಶಿಕ ಮತ್ತು ಜಾತಿ ಅಸಮತೋಲನವು ಎದ್ದು ಕಾಣುತ್ತಿದೆ. ಹಳೆಯ ಮೈಸೂರು ಪ್ರದೇಶಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನೀಡಿದ್ದ ಭರವಸೆ ವಿಫಲವಾಗಿದೆ.

ಸುಮಾರು 100ಕ್ಕು ಹೆಚ್ಚು  ವಿಧಾನಸಭೆ ಕ್ಷೇತ್ರಗಳನ್ನೊಳಗೊಂಡಿರುವ ಹಳೇಯ ಮೈಸೂರು ಭಾಗವನ್ನು ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿಲ್ಲ, ಜೊತೆಗೆ ಈ ಭಾಗದಲ್ಲಿ ಬಿಜೆಪಿಯನ್ನು ಪ್ರಾಬಲ್ಯಗೊಳಿಸಲು ಆಸಕ್ತಿ ತೋರಿಸಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ  ಪಕ್ಷವನ್ನು ಬಲವರ್ಧಿಸಲು ಬಿಜೆಪಿ ನಾಯಕರಿಗೆ ಆಸಕ್ತಿಯಿಲ್ಲ, ಕೋಲಾರ ಮತ್ತು ಚಿಕ್ಕಮಗಳೂರು ಪ್ರದೇಶಗಳಿಗೆ ಸಂಪುಟದಲ್ಲಿ ಆದ್ಯತೆ ನೀಡಿಲ್ಲ. ದಕ್ಷಿಣ ಜಿಲ್ಲೆಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಉತ್ತಮ ಪ್ರದರ್ಶನ ನೀಡದಿದ್ದರೂ, ಕಾಂಗ್ರೆಸ್ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟ ಕೋಲಾರ ಮತ್ತು ಚಾಮರಾಜನಗರ ಸ್ಥಾನಗಳನ್ನು ಗೆದ್ದು ಲೋಕಸಭಾ ಚುನಾವಣೆಯಲ್ಲಿ ಅಚ್ಚರಿ ಮೂಡಿಸಿತು.

ಮಂಡ್ಯ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಕ್ಷವು ತನ್ನ ಕ್ಷೇತ್ರ ವಿಸ್ತರಿಸಲು ಜೆಡಿಎಸ್‌ನ ಅನೇಕರನ್ನು ಓಲೈಸಲು ಯತ್ನಿಸಿತು. ಜೆಡಿಎಸ್ ನಿಂದ ಪಕ್ಷಾಂತರಗೊಂಡ ಶಾಸಕ ನಾರಾಯಣ ಗೌಡ, ಒಕ್ಕಲಿಗರ ಭದ್ರಕೋಟೆಯಾದ ಕೆ ಆರ್ ಪೆಟ್ ಯಲ್ಲಿ ಬಿಜೆಪಿ ಟಿಕೆಟ್ ನಲ್ಲಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್  ತವರು ಜಿಲ್ಲೆ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಅಸೆಂಬ್ಲಿ ಕ್ಷೇತ್ರ ರಾಮನಗರದಲ್ಲಿ ಪಕ್ಷವನ್ನು ಪ್ರಾಬಲ್ಯಗೊಳಿಸುವ ಉದ್ದೇಶದಿಂದ ಬಿಜೆಪಿ ಸಿ ಪಿ ಯೋಗೇಶ್ವರ್ ಅವರನ್ನು ಮೇಲ್ಮನೆಗೆ ಆಯ್ಕೆ ಮಾಡಿತು.

ಆದರೆ ಮೈಸೂರಿನಿಂದ ಮುಂಚೂಣಿಯಲ್ಲಿರುವ ಶಾಸಕ ಎಸ್ ಎ ರಾಮದಾಸ್, ಹಾಸನದ- ಪ್ರೀತಂ ಗೌಡ, ಮೂಡಿಗೆರೆಯ- ಎಂ ಪಿ ಕುಮಾರಸ್ವಾಮಿ, ನಂಜನಗೂಡಿನ ಹರ್ಷವರ್ಧನ್, ರಾಮನಗರ ಜಿಲ್ಲೆಯ ಎಂಎಲ್ ಸಿ ಸಿ ಪಿ ಯೋಗೇಶ್ವರ ಅವರಿಗೆ ಬುಧವಾರ ಭಾರೀ ನಿರಾಶೆಯಾಗಿದೆ. ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಮತ್ತು ಚಾಮರಾಜ ಶಾಸಕ  ಎಲ್ ನಾಗೇಂದ್ರ ಕೂಡ ಯುವ ಮುಖಗಳಿಗೆ ಆದ್ಯತೆ ನೀಡಲಿದೆ ಎಂದು ಪಕ್ಷದ ಮೇಲೆ  ಭರವಸೆ ಇಟ್ಟುಕೊಂಡಿದ್ದರು.

ಹಳೆಯ ಮೈಸೂರು ಪ್ರದೇಶದಲ್ಲಿ ಗಣನೀಯ ಜನಸಂಖ್ಯೆ ಹೊಂದಿರುವ ಎಸ್‌ಸಿ-ಬಲ ಸಮುದಾಯ ಮತ್ತು ಹೊಸ ಒಕ್ಕಲಿಗ ನಾಯಕರನ್ನು ಹುಡುಕಲು ಅಥವಾ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ. ಆದರೆ ಒಂದೇ ಸಮಾಧಾನವೆಂದರೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಬಿಜೆಪಿ ಶಾಸಕ ನಾರಾಯಣ ಗೌಡ ಅವರನ್ನು ಸಚಿವರನ್ನಾಗಿ ಮರು ನೇಮಕ ಮಾಡಲಾಗಿದೆ.

ಕುರುಬ ಸಮುದಾಯವು ಮೂರು ಮಂತ್ರಿ ಸ್ಥಾನಗಳನ್ನು ಪಡೆದಿದೆ, ಆದರೆ ಅದರಿಂದ ಪಕ್ಷಕ್ಕೆ ಹೆಚ್ಚು ಪ್ರಯೋಜನವಾಗದಿರಬಹುದು, ಏಕೆಂದರೆ ಕುರುಬ ಸಮುದಾಯವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಂತಿದೆ.  ಹೊಂದಿಕೊಂಡಿದೆ,  ಎಸ್ಸಿ, ಎಸ್ಟಿ ಮತ್ತು ಅಲ್ಪಸಂಖ್ಯಾತರ ಸಮುದಾಯವನ್ನು ಒಗ್ಗೂಡಿಸಿರುವ ಸಿದ್ದರಾಮಯ್ಯ ಇವರೆಲ್ಲರನ್ನು ಅಹಿಂದ ಬ್ಯಾನರ್ ನಡಿ ಕೂರಿಸಿದ್ದಾರೆ.

ಪಕ್ಷವು ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ತಯಾರಿ ನಡೆಸುತ್ತಿದೆ ಹಾಗೂ ಡಿಸೆಂಬರ್‌ನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಬರಲಿದೆ, ಪರಿಸ್ಥಿತಿ ಹೀಗಿರುವಾಗ ನಾವು ಕಾರ್ಯಕರ್ತರ ಮನೋಬಲವನ್ನು ಹೇಗೆ ಹೆಚ್ಚಿಸಲು ಸಾಧ್ಯ, ನಮಗೆ ಸ್ಥಳೀಯ ಸಚಿವರಿಲ್ಲದಿದ್ದಾಗ ಪಂಚಾಯತ್ ಚುನಾವಣೆಗೆ ಬೆಂಬಲ ನೀಡುತ್ತಾರೆಯೆ?  ಎಂದು ಬಿಜೆಪಿ ನಾಯಕರೊಬ್ಬರು ಪ್ರಶ್ನಿಸಿದ್ದಾರೆ.

SCROLL FOR NEXT