ಮೈಸೂರು: ಜೆಡಿಎಸ್ನ ಭದ್ರಕೋಟೆಯಾದ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸೋಲಿನ ಸರಮಾಲೆ ಮುಂದುವರಿದಿದೆ, ಸ್ಪರ್ಧಿಸಿದ ಆರು ವಿಧಾನ ಪರಿಷತ್ ಸ್ಥಾನಗಳಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿದೆ.
ಸಿಂದಗಿ ಮತ್ತು ಹಾನಗಲ್ ವಿಧಾನಸಭಾ ಉಪಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಜೆಡಿಎಸ್, ಪ್ರಾದೇಶಿಕ ಪಕ್ಷವನ್ನು ರಾಜಕೀಯವಾಗಿ ಕಡೆಗಣಿಸುವಂತಿಲ್ಲ ಎಂಬ ಸಂದೇಶ ರವಾನಿಸಲು ಕೇವಲ ಆರು ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುವ ಲೆಕ್ಕಾಚಾರ ಹಾಕಿತ್ತು.
ಹಿಂದಿನ ಎಂಎಲ್ಸಿ ಚುನಾವಣೆಯಲ್ಲಿ ಕೋಲಾರ, ತುಮಕೂರು, ಮಂಡ್ಯ, ಮೈಸೂರು ಮತ್ತು ಹಾಸನವನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ಮೈಸೂರು ಮತ್ತು ಹಾಸನದ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕೋಲಾರ, ತುಮಕೂರು ಮತ್ತು ಮಂಡ್ಯ ಕಾಂಗ್ರೆಸ್ ಪಾಲಾಗಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ123 ಸ್ಥಾನಗಳನ್ನು ಗೆದ್ದು ಸ್ವಂತ ಬಲದ ಸರ್ಕಾರ ರಚಿಸುವ ಗುರಿ ಹೊಂದಿರುವ ಜೆಡಿಎಸ್ ಲೆಕ್ಕಾಚಾರ ಸದ್ಯ ಉಲ್ಟಾ ಹೊಡೆದಿದೆ.
ಹಾಸನದಲ್ಲಿ ಸೂರಜ್ ರೇವಣ್ಣ ಮತ್ತು ಮೈಸೂರಿನಲ್ಲಿ ಸಿ.ಎನ್.ಮಂಜೇಗೌಡರ ಗೆಲುವು ಪಕ್ಷಕ್ಕೆ ಒಂದೇ ಸಮಾಧಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಶಾಸಕರಾದ ಜಿಟಿ ದೇವೇಗೌಡ, ಶ್ರೀನಿವಾಸಗೌಡ, ಮನೋಹರ್, ಸಂದೇಶ್ ನಾಗರಾಜ್, ಕೋನರಡ್ಡಿ ಸೇರಿದಂತೆ ಹಿರಿಯ ನಾಯಕರು ಪಕ್ಷ ತೊರೆದಿದ್ದಾರೆ. ಕಳಪೆ ಪ್ರದರ್ಶನ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಒಕ್ಕಲಿಗ ಸಮುದಾಯದ ಡಿಕೆ ಶಿವಕುಮಾರ್ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ಜೆಡಿಎಸ್ ಗೆ ಹೊಡೆತ ಬಿದ್ದಿದೆ. ಎರಡು ಪಕ್ಷದವರು ಸದ್ಯ ಒಕ್ಕಲಿಗ ಮತ ಬ್ಯಾಂಕ್ ಗೆ ಕೈ ಹಾಕುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆ ಗೆಲುವು ಸಾಧಿಸುವ ಲಕ್ಷಣವಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಮೂರೂ ಪಕ್ಷಗಳಿಗೆ ಎಚ್ಚರಿಕೆ ಗಂಟೆ, ಕಾಂಗ್ರೆಸ್-ಬಿಜೆಪಿ ಸಮಬಲ, ನೆಲಕಚ್ಚಿದ ಜೆಡಿಎಸ್
ಒಕ್ಕಲಿಗ ಮತಗಳ ಪಲ್ಲಟ, ಹಿಂದುಳಿದ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ದಲಿತರ ಬಲವರ್ಧನೆ ಮತ್ತು ಸರ್ಕಾರ ಬದಲಾವಣೆಯನ್ನು ನೋಡುವ ಜನರ ಸಾಮಾನ್ಯ ಮನಸ್ಥಿತಿ ಕಾಂಗ್ರೆಸ್ ಪರ ಒಲವು ತೋರುತ್ತಿದೆ.
ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ. ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ನಾವು ಹಿನ್ನಡೆ ಅನುಭವಿಸಿದ್ದೇವೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಿದ್ದೇವೆ"ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೇಸರದ ಮಾತನ್ನಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಪುಟಿದೇಳಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.