ಮೈಸೂರು: ಹಳೇ ಮೈಸೂರು ಭಾಗದಲ್ಲಿ ಪಕ್ಷದ ನೆಲೆಯನ್ನು ಭದ್ರಗೊಳಿಸಲು ಬಿಜೆಪಿ ಹವಣಿಸುತ್ತಿರುವ ಬೆನ್ನಲ್ಲೇ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ನ ಭದ್ರಕೋಟೆಯಾಗಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ನೆಲೆಯನ್ನು ಬಲಪಡಿಸಲು ಅವಿರತವಾಗಿ ಕಾರ್ಯಕರ್ತರು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಆತಂಕಕ್ಕೆ ಒಳಗಾಗಿದ್ದಾರೆ.
ಒಕ್ಕಲಿಗ ಸಮುದಾಯದ ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರು ಮತಗಳ ಧ್ರುವೀಕರಣವನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಆರ್ಎಸ್ಎಸ್ ಮತ್ತು ನಿಷ್ಠಾವಂತ ಬಿಜೆಪಿ ಕಾರ್ಯಕರ್ತರ ಆರೋಪಿಸಿದ್ದಾರೆ. ಸಮುದಾಯದ ಮುಖಂಡರನ್ನು ತಲುಪಲು ತಂತ್ರಗಳನ್ನು ರೂಪಿಸುವ ಬದಲು ಅನೇಕರು ಸಾಂಪ್ರದಾಯಿಕ ಪತ್ರಿಕಾಗೋಷ್ಠಿಗಳು ಮತ್ತು ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತರಾಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.
ಅಭ್ಯರ್ಥಿ ಪರವಾಗಿ ಕೆಲಸ ಮಾಡುವ ಬದಲು ಸೋಮವಾರ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಿಗದಿತ ಭೇಟಿಯ ಮೇಲೆ ಅವರ ಗಮನ ಹೆಚ್ಚು ಇತ್ತು ಎಂದು ದೂರಿದ್ದಾರೆ.
ಕೆಲವು ನಾಯಕರು ಪಕ್ಷದ ಹೈಕಮಾಂಡ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರಿಗೆ ಪತ್ರ ಬರೆದು ಸೋಲಿಗೆ ಕಾರಣಗಳನ್ನು ವಿವರಿಸಿದ್ದಾರೆ.
ಜಾತಿಗಳ ಧ್ರುವೀಕರಣದಿಂದಾಗಿ ನಾವು ಎರಡೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಸೋತಿದ್ದೇವೆ ಮತ್ತು ಒಗ್ಗಟ್ಟಿನ ಪ್ರಯತ್ನದಿಂದ ಅದನ್ನು ಎದುರಿಸಲು ನಾಯಕರು ವಿಫಲರಾಗಿದ್ದಾರೆ" ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರು ಮತ್ತು ಚುನಾವಣೆಯಲ್ಲಿ ಆಸಕ್ತಿ ತೋರದವರ ಸಂಬಂಧ ದೆಹಲಿಯ ವರಿಷ್ಠರಿಗೆ ವರದಿ ತಲುಪಿದೆ.
ಹಿಂದಿನ ಚುನಾವಣೆಯಂತೆಯೇ ಬಿಜೆಪಿಯ ಕೆಲವು ನಾಯಕರು ವಿರೋಧಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹಿಂದಿನ ಎಂಎಲ್ಸಿ ಚುನಾವಣೆಯಲ್ಲಿ ರಘು ಕೇವಲ 13 ಮತಗಳಿಂದ ಸೋಲನುಭವಿಸಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಐತಿಹಾಸಿಕ ಗೆಲುವು, ಬಿಜೆಪಿಗೆ ಎಚ್ಚರಿಕೆ ಗಂಟೆ
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮಕೈಗೊಂಡು ಜಿಲ್ಲಾ ಬಿಜೆಪಿ ಘಟಕದಲ್ಲಿನ ಗುಂಪುಗಾರಿಕೆಗೆ ಕಡಿವಾಣ ಹಾಕುವಂತೆ ಮನವಿ ಮಾಡಲಾಗಿದೆ.
ಇಲ್ಲದಿದ್ದರೇ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಕಂಟಕ ಎದುರಾಗಬಹುದು. ಪರಾಜಿತ ಅಭ್ಯರ್ಥಿ ಎಂವಿ ರವಿಶಂಕರ್ ಮತ್ತು ಅವರ ಬೆಂಬಲಿಗರು ಬೆಂಗಳೂರಿನಲ್ಲಿರುವ ಸಂತೋಷ್ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ. ಸಂತೋಷ್ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಅವರಿಗೆ ತಿಳಿಸಿ ವರದಿ ಸಲ್ಲಿಸಲು ಬಯಸಿದ್ದಾರೆ ಎಂದು ತಿಳಿದು ಬಂದಿದೆ.