ಮಂಡ್ಯ: ಬೇರೆ ಬೇರೆ ಪಕ್ಷದಿಂದ ಅಭಿಷೇಕ್ ಅಂಬರೀಶ್ಗೆ ಆಫರ್ ಇರೋದು ನಿಜ, ನಾನಾಗಿ ಅಭಿಷೇಕ್ ಗೆ ಟಿಕೆಟ್ ಕೊಡಿ ಎಂದು ಯಾರ ಬಳಿಯೂ ಹೋಗಿ ಕೇಳಿಲ್ಲ, ಕೇಳುವುದೂ ಇಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.
ಯಾವುದೇ ಕಾರಣಕ್ಕೂ ಯಾವುದೇ ಪಕ್ಷದವರಲ್ಲಿಯೂ ನನ್ನ ಮಗ ಅಭಿಷೇಕ್ ಗೆ ಟಿಕೆಟ್ ಕೊಡಿ ಎಂದು ನಾನು ಕೇಳಿಲ್ಲ, ಇದುವರೆಗೆ ಬೇಡಿಕೆಯನ್ನಿಟ್ಟಿಲ್ಲ. ಇನ್ನು ಮುಂದೆಯೂ ಇಡುವುದಿಲ್ಲ, ಅಭಿಷೇಕ್ ಗೆ ಟಿಕೆಟ್ ಕೊಡಿ ಎಂದು ಕೇಳುವ ಅಗತ್ಯ ನನಗಿಲ್ಲ. ಯಾವ್ಯಾವ ಪಕ್ಷಗಳಿಂದ ಆಫರ್ ಇದೆ ಎನ್ನುವುದು ನನಗೆ ಗೊತ್ತಿದೆ, ಅದನ್ನು ನಾನು ಈ ಸಮಯದಲ್ಲಿ ಬಹಿರಂಗಪಡಿಸುವುದಿಲ್ಲ. ಪಕ್ಷಗಳಿಗೆ ಆಸಕ್ತಿಯಿದ್ದರೆ, ಪಕ್ಷಗಳಿಗೇ ಅಭಿಷೇಕ್ ಗೆ ಟಿಕೆಟ್ ನೀಡಬೇಕೆಂದು ಅನಿಸುವುದಾದರೆ ನೀಡಲಿ, ಅಭಿಷೇಕ್ ಅವನೇ ಮನಸ್ಸಿನಲ್ಲಿ ನಿರ್ಧಾರ ಮಾಡಬೇಕು ಎಂದರು.
ಈಗಷ್ಟೇ ಸಿನಿಮಾ ಕ್ಷೇತ್ರದಲ್ಲಿ ಮೊದಲ ಹೆಜ್ಜೆಯಿಟ್ಟು ಕೆಲಸ ಮಾಡುತ್ತಿದ್ದಾನೆ. ಅವನು ತೆಗೆದುಕೊಳ್ಳುವ ನಿರ್ಧಾರವನ್ನು ನೋಡಿಕೊಂಡು ಹೋಗುತ್ತೇನೆ. ಅವನ ರಾಜಕೀಯ ಮತ್ತು ಸಿನಿಮಾ ಬಗ್ಗೆ ಅವನೇ ನಿರ್ಧಾರ ತೆಗೆದುಕೊಳ್ಳಲಿ
ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಮಾರ್ಗದಲ್ಲಿ ವಿಪರೀತ ಟ್ರಾಫಿಕ್ ಕಿರಿಕಿರಿ ಸಮಸ್ಯೆಯಿಂದಾಗಿ ರೈಲು ಮೂಲಕ ಅವರು ಇಂದು ಮಂಡ್ಯದಲ್ಲಿ ವಿವಿಧ ಸಭೆಗಳಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಸರಾ ಸಮಯದಲ್ಲಿ ರಸ್ತೆ ಉದ್ಘಾಟನೆಯಾಗಬಹುದು, ಇನ್ನು ಮೂರ್ನಾಲ್ಕು ತಿಂಗಳು ಜನರು ಈ ಸಂಚಾರ ದಟ್ಟಣೆ ಸಮಸ್ಯೆಗೆ ಹೊಂದಿಕೊಳ್ಳಲೇಬೇಕು ಎಂದರು.
ಇದನ್ನೂ ಓದಿ: ಮಂಡ್ಯಾನ ನಾನು ಬಿಡಲ್ಲ, ನನ್ನ ಮಂಡ್ಯ ಬಿಡಲ್ಲ; ಹಗಲುಗನಸು ಕಾಣುವವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ಸಂಸದೆ ಸುಮಲತಾ
ಯಾವ ಪಕ್ಷಕ್ಕೆ ಅಭಿಷೇಕ್ ಅನಿವಾರ್ಯವಿದೆಯೋ ಆ ಪಕ್ಷದವರು ಮಾತನಾಡುತ್ತಾರೆ. ನಾನು ಮಂಡ್ಯದ ಸಂಸದೆ. ಮಂಡ್ಯ ನಾನು ಬಿಡೋಲ್ಲ. ಮಂಡ್ಯ ನನ್ನನ್ನು ಬಿಡೋಲ್ಲ ಇದು ಅಪಪ್ರಚಾರ ಅಷ್ಟೇ ಅಂತಾ ಹೇಳಿದ್ದಾರೆ.
ನನಗೆ ಪ್ರತಾಪ್ ಸಿಂಹ ಜೊತೆ ಕೋಲ್ಡ್ ವಾರ್ ಇಲ್ಲ: ಮೈಸೂರು ಸಂಸದ ಪ್ರತಾಪ್ ಸಿಂಹ ಮಂಡ್ಯಕ್ಕೆ ಬಂದು ನಮ್ಮ ಕೆಲಸ ಮಾಡಿ ಕ್ರೆಡಿಟ್ ತೆಗೆದುಕೊಳ್ಳಲು ನೋಡುತ್ತಿದ್ದಾರೆ, ನಮ್ಮಲ್ಲಿ ಕೋಲ್ಡ್ ವಾರ್ ಇದೆ ಎಂದು ಕೂಡ ಪ್ರಚಾರ ಮಾಡಲಾಗುತ್ತಿದೆ. ನನಗೆ ಅವರ ಜೊತೆ ಕೋಲ್ಡ್ ವಾರ್ ಇಲ್ಲ, ಅವರು ಬಂದು ಅವರ ಕೆಲಸ ಮಾಡಿಕೊಳ್ಳಲಿ, ನನಗೇನೂ ಇದರಿಂದ ತೊಂದರೆಯಿಲ್ಲ, ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ, ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತಿದ್ದೇನೆ ಎಂದರು.
ಶಿಷ್ಟಾಚಾರ ಪ್ರಕಾರ ಯೋಗ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಂದಿದ್ದ ಸಮಯದಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ಬಿಟ್ಟರೆ ಬಿಜೆಪಿ ಸೇರ್ಪಡೆಯಾಗುವ ಯಾವ ನಿರ್ಧಾರ ಕೂಡ ಆಗಿಲ್ಲ, ಅಧಿಕೃತವಾಗಿ ನಾನು ಸ್ವತಂತ್ರ ಸಂಸದೆಯಾಗಿಯೇ ಇದ್ದೇನೆ ಎಂದರು.