ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಕಾಂಗ್ರೆಸ್ ಪಕ್ಷದ ಕೂಸು. ನ್ಯಾ.ನಾಗಮೋಹನ್ ದಾಸ್ ಸಮಿತಿ ನಾವು ಮಾಡಿದ್ದಕ್ಕೆ ಯಶಸ್ಸು ಕಂಡಿದೆ ಎಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಬಯಕೆ ಜನಾಂಗಕ್ಕೆ ನ್ಯಾಯ ಒದಗಿಸಬೇಕು ಎನ್ನುವುದಾಗಿದೆ. ಎಸ್ಟಿ ಜನಾಂಗದ ಮೇಲೆ ಬಿಜೆಪಿಗೆ ನಂಬಿಕೆ ಇಲ್ಲ. ಅಧಿಕಾರ ಬಂದ 24 ಗಂಟೆಯಲ್ಲೇ ಬಿಜೆಪಿ ಇದನ್ನು ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಆಧಾರದ ಮೇಲೆ ಉದ್ಯೋಗ ಸಿಗುತ್ತಿದೆ. ಈ ಮೀಸಲಾತಿ ನೀಡುವ ವಿಚಾರವಾಗಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದೆವು. ಸಮಿತಿಯ ವರದಿ ಜಾರಿಗೆ ಕಾಂಗ್ರೆಸ್ ಕೂಡ ಒತ್ತಾಯಿಸಿತ್ತು. ಈ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂಬುದು ನಮ್ಮ ಪಕ್ಷದ ನಂಬಿಕೆಯಾಗಿದೆ. ಸರ್ಕಾರದ ಈ ಮೀಸಲಾತಿಗೆ ನಾವು ನಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಈಗಲೂ ಡಬಲ್ ಇಂಜಿನ್ ಸರ್ಕಾರ ಇದೆ. ಬರೀ ಪೇಪರ್ನಲ್ಲಿ ಇಟ್ಟು ಚಾಕ್ಲೆಟ್ ಕೊಡೋಕೆ ಹೋಗಬೇಡಿ. ಬಿಜೆಪಿ ತೀರ್ಮಾನ ಕೇವಲ ಕಣ್ಣು ಒರೆಸುವುದಷ್ಟೇ, ಬೇರೇನೂ ಇಲ್ಲ. ಸಿಎಂ ದೆಹಲಿಯಲ್ಲಿ ಕೂತು ಪಾರ್ಲಿಮೆಂಟ್ನಲ್ಲಿ ಇಟ್ಟು 9ನೇ ಶೆಡ್ಯೂಲ್ನಲ್ಲಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.