ರಾಜಕೀಯ

ವಿಧಾನಸಭೆ ಚುನಾವಣೆ: ಕಾಂಗ್ರೆಸ್, ಎಎಪಿ ಅಭ್ಯರ್ಥಿಗಳ ಆಕ್ಷೇಪಣೆ ಹೊರತಾಗಿಯೂ ಬಿಜೆಪಿಯ ರತ್ನಾ ಮಾಮನಿ ನಾಮಪತ್ರ ಅಂಗೀಕಾರ

Ramyashree GN

ಬೆಳಗಾವಿ: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಅಭ್ಯರ್ಥಿ ರತ್ನಾ ಆನಂದ್ ಮಾಮನಿ ಅವರ ನಾಮಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಚುನಾವಣಾಧಿಕಾರಿಗಳು ಶನಿವಾರ ಅಂಗೀಕರಿಸಿದ್ದಾರೆ.

ವಿಧಾನಸಭೆಯ ಮಾಜಿ ಉಪಸಭಾಪತಿ ದಿವಂಗತ ಆನಂದ್ ಮಾಮನಿ ಅವರ ಪತ್ನಿ ರತ್ನಾ ಅವರ ನಾಮಪತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಕಾಂಗ್ರೆಸ್ ಅಭ್ಯರ್ಥಿಯ ಆಕ್ಷೇಪಣೆಯನ್ನು ತಿರಸ್ಕರಿಸಲಾಗಿದೆ ಎಂದು ಹೇಳಿದರು.

ರತ್ನಾ ಮಾಮನಿ ಅವರು ನಾಮಪತ್ರದ ಸೆಟ್ ಜತೆ ಸಲ್ಲಿಸಿದ್ದ ನಮೂನೆ 26ರಲ್ಲಿ ಗೊಂದಲವಿದೆ. 2018ರ ಮಾದರಿಯ ( ಹಳೆಯ ಮಾದರಿಯ ) ಫಾರಂ ಸಲ್ಲಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಆಕ್ಷೇಪಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ವಿಶ್ವಾಸ ವೈದ್ಯ ಹಾಗೂ ಎಎಪಿ ಅಭ್ಯರ್ಥಿ ಬಾಪುಗೌಡ ಚುನಾವಣಾ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿ ನಾಮಪತ್ರ ತಿರಸ್ಕರಿಸಬೇಕು ಎಂದು ಪಟ್ಟು ಹಿಡಿದಿದ್ದರು.

'ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನನಗೆ ಅನುಕೂಲಕರ ತೀರ್ಪು ಬಂದಿದೆ. ಮುಂದಿನ ದಿನಗಳಲ್ಲಿ ನನ್ನ ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಬೇಕೆಂದು ವಿನಂತಿಸುತ್ತೇನೆ. ನಾಮಪತ್ರ ತಿರಸ್ಕರಿಸುವಂತೆ ಸಲ್ಲಿಸಿದ್ದ ಆಕ್ಷೇಪಣೆಯಿಂದಾಗಿ ನಾನು ಭಯಪಡಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ರತ್ನಾ ಸುದ್ದಿಗಾರರಿಗೆ ತಿಳಿಸಿದರು.

'ಎದುರಾಳಿಗಳು ಗೆಲ್ಲಲು ಸಾಧ್ಯವಾಗದಿದ್ದಾಗ ಈ ಕೀಳುಮಟ್ಟದ ಷಡ್ಯಂತ್ರಗಳಿಗೆ ಕೈ ಹಾಕುತ್ತಾರೆ. ತನಗೆ ತೊಂದರೆ ಕೊಟ್ಟವರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಖಾಮುಖಿಯಾಗಲಿ' ಎಂದು ರತ್ನಾ ಹೇಳಿದರು.

ರತ್ನಾ ಅವರ ವಕೀಲರು ಮಾತನಾಡಿ, ಕೆಲವು ಸಣ್ಣ ದೋಷಗಳಾಗಿರಬಹುದು. ಆದರೆ, ಅದು ಅವರ ನಾಮಪತ್ರಗಳನ್ನು ತಿರಸ್ಕರಿಸುವ ಮಟ್ಟಿಗೆ ಚುನಾವಣಾ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿರಲಿಲ್ಲ ಎಂದು ಹೇಳಿದರು.

SCROLL FOR NEXT