ಬಸವನ ಬಾಗೇವಾಡಿ: ಶ್ರೀ ರಾಮ, ಕೃಷ್ಣನ ಜನ್ಮಸ್ಥಳದಲ್ಲಿ ಪಾಪದ ಕೆಲಸಗಳನ್ನ ಮಾಡಲು ಬಿಡಲ್ಲ, ಉತ್ತರ ಪ್ರದೇಶದಲ್ಲಿ ಗೂಂಡಾಗಳನ್ನು ಮಟ್ಟಹಾಕಿದ್ದೇವೆ. ಶ್ರೀರಾಮನ ಪರಮಭಕ್ತ ಆಂಜನೇಯನ ಜನ್ಮಸ್ಥಳ ಕರ್ನಾಟಕ, ಇಲ್ಲಿನ ಜನರು ನಿರ್ಭೀತಿಯಿಂದ ಜೀವನ ಸಾಗಿಸಬೇಕು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಇಂದು ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಸವನಬಾಗೇವಾಡಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಜಗಜ್ಯೋತಿ ಬಸವಣ್ಣನವರ ಪವಿತ್ರ ಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ. ಭಾರತ ಪ್ರಜಾಪ್ರಭುತ್ವದ ತಾಯಿ. ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಆಗ್ತಿದೆ. 1000 ವರ್ಷಗಳ ಹಿಂದಿನಿಂದ ಕರ್ನಾಟಕ-ಯುಪಿ ನಡುವೆ ಬಾಂಧವ್ಯವಿದೆ. ಶ್ರೀರಾಮನ ಪರಮಭಕ್ತ ಆಂಜನೇಯನ ಜನ್ಮಸ್ಥಳ ಕರ್ನಾಟಕ ಎಂದರು.
ಇದನ್ನೂ ಓದಿ: ಧರ್ಮ ಆಧರಿತ ಮೀಸಲಾತಿ ಸಂವಿಧಾನಕ್ಕೆ ವಿರುದ್ಧ, ಕಾಂಗ್ರೆಸ್ ಪಿಎಫ್ಐನ್ನು ಓಲೈಸುತ್ತಿದೆ: ಯೋಗಿ ಆದಿತ್ಯನಾಥ್
ದೇಶದ ಪ್ರತಿ ನಾಗರಿಕನ ಸಶಕ್ತಿಕರಣಗೊಳಿಸುವುದು ನಮ್ಮ ಉದ್ದೇಶ. ದೇಶದ ಸಂತರು, ಸಾಧುಗಳ ಆಶೀರ್ವಾದದಿಂದ ಇಲ್ಲಿ ಬಂದಿದ್ದೇನೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಭಾರತ ಅಭಿವೃದ್ಧಿ ಆಗುತ್ತಿದೆ. ಭಾರತ ವಿಶ್ವದ ಶಕ್ತಿಯುತವಾದ ರಾಷ್ಟ್ರವಾಗಿದೆ. ವಿಶ್ವದ ಪ್ರಬಲ ಜಿ-20 ರಾಷ್ಟ್ರಗಳ ನೇತೃತ್ವವನ್ನು ಭಾರತ ವಹಿಸುತ್ತಿದೆ. ಕರ್ನಾಟಕ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ. ವೈದ್ಯಕೀಯ ಪರೀಕ್ಷೆ ಕನ್ನಡದಲ್ಲಿ ಬರೆಯಲು ಸರ್ಕಾರ ಅವಕಾಶ ನೀಡಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ವೈಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಇದನ್ನೂ ಓದಿ: ಒಂದು ಕುಟುಂಬ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ: ಹೆಚ್ ಡಿಕೆಗೆ ಸುಮಲತಾ ಟಾಂಗ್
ಇದಕ್ಕೂ ಮುನ್ನ ಮಂಡ್ಯದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಆದಿ ಚುಂಚನಗಿರಿಗೆ ನನ್ನ ನಮಸ್ಕಾರಗಳು. ಮಂಡ್ಯದ ಉತ್ಸಾಹಿ ಕಾರ್ಯಕರ್ತರಿಗೆ ಉತ್ತರ ಪ್ರದೇಶದವನಾದ ನಾನು ನಮಸ್ಕರಿಸುತ್ತೇನೆ. ಇಂದು ಮಂಡ್ಯದಲ್ಲಿ ನಾನು ಬಂದಿರುವುದು ಸಂತಸ ತಂದಿದೆ ಕರ್ನಾಟಕ ಹಾಗೂ ಉತ್ತರ ಪ್ರದೇಶದ ಸಂಬಂಧ ತ್ರೇತಾಯುಗದಿಂದ ಒಂದಕ್ಕೊಂದು ಸಂಬಂಧವಿದೆ. ಮರ್ಯಾದಾ ಪುರಷೋತ್ತಮ ಶ್ರೀರಾಮ ಹಾಗೂ ಆಂಜನೆಯ ವನವಾಸದ ಕುರುಹುಗಳು ಮಂಡ್ಯದಲ್ಲಿದೆ ಎಂದು ಹೇಳಿದರು. ಮಂಡ್ಯದ ಸ್ವಿಲ್ವರ್ ಜ್ಯುಬಲಿ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಭಾಷಣವನ್ನು ಆರಂಭಿಸಿದರು.