ಮೈಸೂರು: ಮಾಟ-ಮಂತ್ರ ತಂತ್ರ ಆಚರಣೆಗಳು, ವೂಡೂ ಗೊಂಬೆಗಳಿಂದ ಭವಿಷ್ಯ, ನಿಂಬೆಹಣ್ಣು, ಕುಂಬಳಕಾಯಿ ಇತ್ಯಾದಿ ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ಭಾರೀ ಸದ್ದು ಮಾಡುತ್ತಿದೆ. ರಾಜ್ಯಾದ್ಯಂತ ಚುನಾವಣಾ ಪ್ರಚಾರವು ಉತ್ತುಂಗಕ್ಕೇರಿದ್ದು ಸ್ಟಾರ್ ಪ್ರಚಾರಕರು ಚುನಾವಣಾ ಕಣಕ್ಕಿಳಿದಿದ್ದಾರೆ. ಇನ್ನು ಚುನಾವಣೆಗೆ ಬಾಕಿ ಉಳಿದಿರುವುದು ಬೆರಳೆಣಿಕೆಯ ದಿನಗಳು ಮಾತ್ರ. ಕಣದಲ್ಲಿರುವ ಹಲವು ಅಭ್ಯರ್ಥಿಗಳು ಮೂಢನಂಬಿಕೆ ಮತ್ತು ಮಾಟಮಂತ್ರಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಹಲವು ಅಭ್ಯರ್ಥಿಗಳು ಚುನಾವಣೆಗೆ ನಾಮನಿರ್ದೇಶನ ಸಲ್ಲಿಸುವ ಮೊದಲು ವಿಚಿತ್ರವಾದ ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಮಾಟ ಮಂತ್ರಗಳನ್ನು ಮಾಡುವವರ ಸಲಹೆ, ಸೂಚನೆ, ಅಭಿಪ್ರಾಯ ಪಡೆದು ನಾಮಪತ್ರ ಸಲ್ಲಿಸಿರುವ ಉದಾಹರಣೆಗಳು ಕೂಡ ಇವೆ. ಇಲ್ಲಿ ವಿಪರ್ಯಾಸವೆಂದರೆ ಅನೇಕ ಬಾರಿ ಈ ಹಿಂದೆ ಚುನಾವಣೆಯಲ್ಲಿ ಗೆದ್ದ ಹಿರಿಯ ನಾಯಕರು ಕೂಡ ಈ ಪದ್ಧತಿಗಳನ್ನು ಕುರುಡಾಗಿ ಪಾಲಿಸುತ್ತಿದ್ದಾರೆ. ಮಾಟ ಮಂತ್ರಗಳನ್ನು ಆಶ್ರಯಿಸುತ್ತಿದ್ದಾರೆ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಯೊಬ್ಬರು ರಾಜಕೀಯ ನಾಯಕರ ಮೂಢನಂಬಿಕೆ ಬಗ್ಗೆ ಹೀಗೆ ಹೇಳುತ್ತಾರೆ. ನಾಮಪತ್ರದೊಂದಿಗೆ ಬಂದಿದ್ದ ಬಹುತೇಕ ಅಭ್ಯರ್ಥಿಗಳು ಉತ್ತರ ದಿಕ್ಕಿನತ್ತ ಮುಖ ಮಾಡಿ ನಾಮಪತ್ರ ಸಲ್ಲಿಸುತ್ತಿದ್ದುದು ಕಂಡುಬಂತು ಎಂದಿದ್ದಾರೆ. ಒಬ್ಬ ಸ್ವತಂತ್ರ ಅಭ್ಯರ್ಥಿಯು ಸಹಿ ಮಾಡಲು ಕಾಗದಕ್ಕೆ ಕಪ್ಪು ಇಂಕ್ ಪೆನ್ನನ್ನು ಹಾಕುತ್ತಿದ್ದಾಗ, ಅವರ ಅನುಯಾಯಿಗಳು ನೀಲಿ ಶಾಯಿಯಲ್ಲಿ ಸಹಿ ಮಾಡುವಂತೆ ಸೂಚಿಸಿದರು, ಏಕೆಂದರೆ ಕಪ್ಪು ಬಣ್ಣ ದುರದೃಷ್ಟಕರವೆಂದು ಪರಿಗಣಿಸಲಾಗಿದೆ.
ಮೈಸೂರಿನ ಕುವೆಂಪುನಗರದಲ್ಲಿ ಜ್ಯೋತಿಷ್ಯ ಶಾಸ್ತ್ರ ನಡೆಸುತ್ತಿರುವ ಕೊಳ್ಳೇಗಾಲ ಮೂಲದ ಜ್ಯೋತಿಷಿಯೊಬ್ಬರು ಈ ಬಾರಿ ವೂಡೂ ಗೊಂಬೆಗಳಿಗೆ ಬೇಡಿಕೆ ಇದೆ ಎಂದು ಹೇಳುತ್ತಾರೆ. ನಾನು ಶಿವಮೊಗ್ಗದ ಅಭ್ಯರ್ಥಿಯೊಬ್ಬರಿಗೆ ಕೊಳ್ಳೇಗಾಲದಲ್ಲಿರುವ ನನ್ನ ಗುರುಗಳನ್ನು ಸಂಪರ್ಕಿಸಲು ಹೇಳಿದೆ. ಅವರು ಗೊಂಬೆ ನೀಡುತ್ತಾರೆ. ಇದು ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಸಹಾಯ ಮಾಡುತ್ತದೆ ಎಂದು ಜ್ಯೋತಿಷಿ ಹೇಳಿದರು.
ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ವಿಶೇಷವಾಗಿ ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ನಿಂಬೆಹಣ್ಣು ಅಥವಾ ಕುಂಬಳಕಾಯಿಯನ್ನು ಪ್ರತಿಸ್ಪರ್ಧಿ ಅಭ್ಯರ್ಥಿಗಳ ಮನೆ ಮತ್ತು ಕಚೇರಿಗಳ ಮುಂದೆ ಎಸೆಯುವುದು ಸಾಮಾನ್ಯ ದೃಶ್ಯವಾಗಿದೆ. ಪ್ರತಿಸ್ಪರ್ಧಿಗಳು ಸೋಲುವಂತೆ ಮಾಡುತ್ತದೆ ಎಂಬ ನಂಬಿಕೆ. ಪ್ರತಿಸ್ಪರ್ಧಿ ನಾಯಕರ ಅನುಯಾಯಿಗಳ ಮೇಲೆ ಮಾಟಮಂತ್ರವನ್ನು ಪ್ರಯತ್ನಿಸುತ್ತಾರೆ, ಅವರನ್ನು ಹೆದರಿಸಲು ಮತ್ತು ಪ್ರಚಾರಕ್ಕೆ ಹೋಗದಂತೆ ತಡೆಯಲು ಸಹಾಯವಾಗುತ್ತದೆ ಎಂಬ ಅನಿಸಿಕೆ.
ಹೊಸ ಟ್ರೆಂಡ್ ಎಂದರೆ ಭವಿಷ್ಯ ಹೇಳುವ ಆಟಗಳು, ಮಂಡ್ಯದಲ್ಲಿ ಇತ್ತೀಚೆಗೆ ಕಪ್ಪು ಶ್ವಾನವೊಂದು ಮುಂದಿನ ಸಿಎಂ ಯಾರು ಎಂದು ಭವಿಷ್ಯ ನುಡಿದಿದೆ. ಅಶೋಕನಗರದ ಗೋಪಿ ಅವರ ಶ್ವಾನ ಭೈರವನಿಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಮುಖಂಡ ಡಿ ಕೆ ಶಿವಕುಮಾರ್ ಅವರ ಭಾವಚಿತ್ರಗಳನ್ನು ತೋರಿಸಲಾಗಿತ್ತು. ಕುಮಾರಸ್ವಾಮಿ ಅವರ ಫೋಟೋವನ್ನು ಎತ್ತಿಕೊಂಡ ನಾಯಿ, ಅವರನ್ನೇ ಭವಿಷ್ಯದ ಸಿಎಂ ಎಂದು ಬಿಂಬಿಸಿರುವ ವಿಡಿಯೊ ವೈರಲ್ ಆಗಿತ್ತು. ಹಾಗಾದರೆ 2018ರಂತೆ ಮತ್ತೊಮ್ಮೆ ಅತಂತ್ರ ವಿಧಾನಸಭೆ ಚುನಾವಣೆ ಫಲಿತಾಂಶ ಮರುಕಳಿಸುತ್ತದೆಯೇ ಎಂಬ ಆತಂಕ ಮನೆಮಾಡಿದೆ.