ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ದಿನ ದಿನಕ್ಕೆ ಗಗನಕ್ಕೆ ಏರುತ್ತಿದ್ದು, ಗಾಳಿಯೊಂದನ್ನು ಬಿಟ್ಟು ಎಲ್ಲ ವಸ್ತುಗಳ ಮೇಲೂ ಜಿಎಸ್ಟಿ ವಿಧಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ಬಸನಗುಡಿಯಲ್ಲಿ ರೋಡ್ ಶೋ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಖರ್ಗೆ, ಬಸವನಗುಡಿಯ ಜನ ಹೆಚ್ಚು ಆರೋಗ್ಯ ಕಾಳಜಿ ಉಳ್ಳವರಾಗಿದ್ದು, ಬೆಳಗ್ಗೆ ಹಾಗೂ ಸಂಜೆ ವಾಯು ವಿಹಾರ ಮಾಡುತ್ತಾರೆ. ಬಿಜೆಪಿಯವರು ಮುಂದೊಂದು ದಿನ ವಾಕಿಂಗ್ ವೇಳೆ ಉಸಿರಾಡುವ ಆಮ್ಲಜನಕಕ್ಕೂ ಜಿಎಸ್ಟಿ ವಿಧಿಸುವ ಕಾಲ ದೂರವಿಲ್ಲ ಎಂದರು.
ಈಗಾಗಲೇ ಮಕ್ಕಳು ಬಳಸುವ ವಸ್ತುಗಳು, ಹಾಲು-ಮೊಸರಿನ ಮೇಲೂ ಜಿಎಸ್ಟಿ ಹಾಕಿದ್ದಾರೆ. ಮುಂದೆ ಗಾಳಿಗೂ ಜಿಎಸ್ಟಿ ವಿಧಿಸಬಹುದು. ಹೀಗಾಗಿ ಅಭಿವೃದ್ದಿ ಪರ ಇರುವ ಕಾಂಗ್ರೆಸ್ ಮತ ನೀಡಿ ಎಂದು ಖರ್ಗೆ ಮನವಿ ಮಾಡಿದರು.
ದೇಶದ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಕೊಟ್ಟ ಹೆಗ್ಗಳಿಕೆ ಕಾಂಗ್ರೆಸ್ನದ್ದು. ಬಿಜೆಪಿಯವರು ಕೇವಲ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಕೊಟ್ಟ ಯಾವ ಭರವಸೆಯನ್ನೂ ಈಡೇರಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯದಲ್ಲಿ ಭ್ರಷ್ಟಾಚಾರ ನಡೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ರಾಜ್ಯದ ಮಾನ ಹರಾಜು ಹಾಕಿದೆ. 40 ಪರ್ಸೆಂಟ್ ಭ್ರಷ್ಟಾಚಾರದ ಸರ್ಕಾರಕ್ಕೆ ಜನತೆ ತಕ್ಕ ಪಾಠ ಕಲಿಸಲು ಸಿದ್ಧರಾಗಿದ್ದಾರೆ. ನೀವೆಲ್ಲರೂ ಈ ಭ್ರಷ್ಟಸರ್ಕಾರವನ್ನು ಕಿತ್ತೊಗೆದು ಭ್ರಷ್ಟಾಚಾರ ರಹಿತ, ಪಾರದರ್ಶಕ ಹಾಗೂ ಅಭಿವೃದ್ಧಿ ಪರ ಆಡಳಿತ ನೀಡುವ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.