ರಾಜಕೀಯ

ಚುನಾವಣೆ ಹತ್ತಿರದಲ್ಲಿದ್ದು, ಸಿಡಿ ಪ್ರಕರಣ ಮುಂದುವರೆಸದಿರಿ: ಬಾಲಚಂದ್ರ ಜಾರಕಿಹೊಳಿ

Manjula VN

ಬೆಳಗಾವಿ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದ್ದು, ಈ ಸಂದರ್ಭದಲ್ಲಿ ಸಿಡಿ ವಿಚಾರವನ್ನು ಮುಂದುವರೆಸಬೇಡಿ, ಪ್ರಕರಣವನ್ನು ಇಲ್ಲಿಗೇ ಬಿಟ್ಟುಬಿಡಿ ಎಂದು ಬಾಲಚಂದ್ರ ಜಾರಕಿಹೊಳಿಯವರು ಮನವಿ ಮಾಡಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 3 ತಿಂಗಳಿನಲ್ಲಿ ಚುನಾವಣೆ ಎದುರಾಗಲಿದೆ. ಸಿಡಿ ಪ್ರಕರಣವನ್ನು ಮುಂದಿಟ್ಟುಕೊಂಡು ಸಾರ್ವಜನಿಕವಾಗಿ ಟೀಕೆಗಳನ್ನು ಮಾಡುವುದನ್ನು ಮೂವರು ನಾಯಕರು ನಿಲ್ಲಿಸಬೇಕು. ಎಲ್ಲರೂ ದೊಡ್ಡ ಮಟ್ಟಕ್ಕೆ ಬೆಳೆದಿದ್ದೀರಿ, ಇನ್ನೂ ಎತ್ತರಕ್ಕೆ ಬೆಳೆಯಬೇಕು. ನಾವೆಲ್ಲರು ಸೇರಿ ರಾಜಕೀಯವಾಗಿ ಹೋರಾಟ ಮಾಡೋಣ. ಜನರಿಗೆ ಯಾರ ಮೇಲೆ‌ ಪ್ರೀತಿ ಇದೆಯೋ ಅವರಿಗೆ ಮತ ನೀಡುತ್ತಾರೆಂದು ಹೇಳಿದರು.

ಕೆಲವು ವಿಚಾರವನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರು ಆಹ್ವಾನಿಸಿದರೆ ಒಂದು ಕೊಠಡಿಯಲ್ಲಿ ಕುಳಿತು ಚರ್ಚೆ ಮಾತಾಡುತ್ತೇವೆ. ಇದನ್ನ ಸಾರ್ವಜನಿಕವಾಗಿ ಟೀಕೆ ಮಾಡುವುದನ್ನ ಮೂರು ಜನ ನಿಲ್ಲಿಸಬೇಕು. ಪಕ್ಷದಲ್ಲಿ ಈ ವಿಚಾರ ಕರೆದು ಕೇಳಿದರೆ ವರಿಷ್ಠರ ಮುಂದೆ ಹೇಳುತ್ತೇವೆ. ಮೂರು ಜನ ದಯಮಾಡಿ ಇದನ್ನ ಮುಂದುವರೆಸಬೇಡಿ ಎಂದು ವಿನಂತಿಸಿದರು.

ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ.ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿಯವರು ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಮೇಲಿಂದ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು, ಸಿಡಿ ಪ್ರಕರಣದ ಹಿಂದೆ ಡಿ.ಕೆ.ಶಿವಕುಮಾರ್, ಶಾಸಕಿಯೊಬ್ಬರ ಕುಟುಂಬ ಇದೆ ಎಂದು ಆರೋಪಿಸಿದ್ದರು. ಅಲ್ಲದೆ ಐಟಿ, ಇಡಿ ದಾಳಿಗಳಲ್ಲಿಕೋಟ್ಯಾಂತರ ರೂಪಾಯಿ ಹಣ ಜಪ್ತಿ ಮಾಡಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದ್ದರು.

ಇದಕ್ಕೂ ಮುನ್ನ ತನ್ನ ವಿರುದ್ಧ ಮಾಡಿದ ಸಿಡಿ ಷಡ್ಯಂತರದ ಹಿಂದೆ ಡಿ.ಕೆ.ಶಿವಕುಮಾರ್ ಮತ್ತು ಕಂಪನಿ ಇದೆ ಎಂದು ಆರೋಪಿಸಿದ್ದರು.

ಈ ಎರಡು ಅಸ್ತ್ರಗಳನ್ನು ಡಿ.ಕೆ.ಶಿವಕುಮಾರ್ ಮೇಲೆ ಪ್ರಯೋಗಿಸಿದ ನಂತರ ಮೂರನೇ ಅಸ್ತ್ರವಾಗಿ ಬ್ಲೂ ಫಿಲ್ಮ್ ದಂಧೆ ಬಗ್ಗೆ ಪ್ರಯೋಗಿಸಿದರು. ಡಿಕೆಶಿ ರಾಜಕೀಯಕ್ಕೆ ಬರುವ ಮುನ್ನ ಕನಕಪುರದಲ್ಲಿ ಅಶ್ಲೀಲ ಸಿನಿಮಾ ಪ್ರದರ್ಶನದ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಮಾಡಿದ್ದಾರೆ.

SCROLL FOR NEXT