ಬೆಂಗಳೂರು: ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಎಷ್ಟು ಸಾರಿ ಭೇಟಿ ಕೊಟ್ಟರೂ ಕೂಡ ಏನೂ ವ್ಯತ್ಯಾಸ ಆಗಲ್ಲ, ಏನೇ ತಿಪ್ಪರಲಾಗ ಹಾಕಿದರೂ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ನಡೆಯುತ್ತಿರುವ 'ನಾ ನಾಯಕಿ' ಕಾರ್ಯಕ್ರಮಕ್ಕೆ ಸೇರಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತು ಅಮಿತ್ ಶಾ ಎಷ್ಟೇ ಸಾರಿ ರಾಜ್ಯಕ್ಕೆ ಬಂದರೂ ಏನೂ ಆಗಲ್ಲ, ಎಷ್ಟು ಸಾರಿ ಭೇಟಿ ಕೊಟ್ಟರೂ, ಎಷ್ಟು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರೂ, ಎಷ್ಟು ರ್ಯಾಲಿಗಳನ್ನು ನಡೆಸಿದರೂ ಏನೂ ಆಗಲ್ಲ. ರಾಜ್ಯದ ಜನ ಈಗಾಗಲೇ ತೀರ್ಮಾನ ಮಾಡಿದ್ದಾರೆ.ಭಾರತೀಯ ಜನತಾ ಪಕ್ಷದ ಭ್ರಷ್ಟ ಸರ್ಕಾರ, ಜನ ವಿರೋಧಿ ವಚನ ಭ್ರಷ್ಟ ಸರ್ಕಾರವನ್ನು ಕಿತ್ತುಹಾಕಿ ಕಾಂಗ್ರೆಸ್ ಪಕ್ಷ ತರಬೇಕು ಎಂದು ಈಗಾಗಲೇ ತೀರ್ಮಾನ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷ ಮಾತ್ರ ಮಹಿಳೆಯರ ರಕ್ಷಣೆಗೆ ಬದ್ಧವಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಹಿಳೆಯರ ಕಲ್ಯಾಣಕ್ಕೆ ಪಕ್ಷ ಶಕ್ತಿಮೀರಿ ಪ್ರಯತ್ನ ಮಾಡಿದೆ. 19ನೇ-20ನೇ ಶತಮಾನದಲ್ಲಿ ಮಹಿಳೆಯರ ಶೋಷಣೆ ಬಹಳ ಆಗುತ್ತಿತ್ತು. ಅದಕ್ಕೆ ಅಂಕುಶ ಹಾಕಿದ್ದು ಕಾಂಗ್ರೆಸ್ ಪಕ್ಷ. ಮಹಿಳೆಯರಿಗೆ ರಕ್ಷಣೆ, ಹಕ್ಕು, ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ.
ಸಂವಿಧಾನದ 72 ಮತ್ತು 73 ತಿದ್ದುಪಡಿ ಮಾಡಿ ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 50ರಷ್ಟು ಮೀಸಲಾತಿ ನೀಡಿದ ಪಕ್ಷ ಕಾಂಗ್ರೆಸ್ ಪಕ್ಷ. ಮನುಸ್ಮೃತಿಯನ್ನು ನಂಬುವ ಅನುಸರಿಸುವ ಪಕ್ಷ ಬಿಜೆಪಿ.ಸ್ವಾತಂತ್ರ್ಯ ಬಂದಾಗ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 8,86ರಷ್ಟಿತ್ತು. ಈಗ ಹೆಣ್ಣುಮಕ್ಕಳ ಸಾಕ್ಷರತೆ ಪ್ರಮಾಣ ಶೇಕಡಾ 65.5ರಷ್ಟಿದೆ. ಇನ್ನೂ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು ಎಂದರು.